ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪ ಇಬ್ಬರೂ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ನಡೆಸಿದ ಭೂಕಬಳಿಕೆ ಕುರಿತು ʼಈ ದಿನ ಯೂಟ್ಯೂಬ್ʼನಲ್ಲಿ ಪ್ರಕಟಿಸಿದ ತನಿಖಾ ವರದಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಎಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜಂಟಿಯಾಗಿ ನಡೆಸಿದ ಭೂ ಹಗರಣವನ್ನು ಈದಿನ.ಕಾಮ್ ಯುಟ್ಯೂಬ್ ಚಾನೆಲ್ ಇಂದು ಬೆಳಿಗ್ಗೆ ಎಂಟು ಗಂಟೆಗೆ ಬಯಲಿಗೆಳೆದಿತ್ತು. ಬಿಡಿಎಗೆ ಸೇರಿದ ಬೆಂಗಳೂರು ಮಹಾನಗರದ ನಟ್ಟನಡುವೆ ಸುಮಾರು 55,000 ಚದರ ಅಡಿ ಭೂಮಿಯನ್ನು ಡಿನೋಟಿಫೈ ಮಾಡಿ ಅಕ್ರಮ ಎಸಗಲಾಗಿದೆ. ಆ ಭೂಮಿಯ ಇವತ್ತಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ರೂಪಾಯಿಗಳು.
ಈ ಹಗರಣದ ಬಗ್ಗೆ 9 ವರ್ಷಗಳ ಹಿಂದೆ ಲೋಕಾಯುಕ್ತದಲ್ಲಿ ದಾಖಲಾದ FIR ನ ಆರೋಪಿ ನಂ.1 ಯಡಿಯೂರಪ್ಪ, ನಂ. 2 ಕುಮಾರಸ್ವಾಮಿ. ಈ ಕೇಸು ಸದ್ಯ ಯಾವ ಹಂತದಲ್ಲಿದೆ? ದಾಖಲೆಗಳಿದ್ದಾಗ್ಯೂ ಲೋಕಾಯುಕ್ತ ಸಂಸ್ಥೆ ಮಾಡಿದ್ದೇನು? ಅಂತಿಮವಾಗಿ ಈ ಭೂಮಿ ಯಾರ ಕೈಸೇರಿದೆ? ಸಂಪೂರ್ಣ ದಾಖಲೆಗಳೊಡನೆ ಎಲ್ಲಾ ಸ್ಫೋಟಕ ಮಾಹಿತಿಯನ್ನು ರಾಜ್ಯದ ಜನರ ಮುಂದಿಟ್ಟಿತ್ತು. ಈ ತನಿಖಾ ವರದಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈಗಾಗಲೇ 1ಲಕ್ಷ ಮಂದಿ ವಿಡಿಯೋ ವೀಕ್ಷಿಸಿದ್ದಾರೆ.
ಮುಖ್ಯವಾಹಿನಿಯ ಮಾಧ್ಯಮಗಳು ಎಂದು ಹೇಳಿಕೊಳ್ಳುವವರು ತನಿಖಾ ವರದಿ ಮಾಡೋದನ್ನು ಬಿಟ್ಟು ದಶಕವೇ ಸಂದಿದೆ. ಇಂತಹ ಸಮಯದಲ್ಲಿ ಈ ದಿನ.ಕಾಮ್ ನಂತಹ ಈಗಷ್ಟೇ ಅಂಬೆಗಾಲಿಡುವ ಜನಪರ ಮಾಧ್ಯಮ ಸಂಸ್ಥೆ ಇಂತಹದೊಂದು ಮುಚ್ಚಿಹೋಗಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆಳೆದಿರುವುದು ಮತ್ತು ಲೋಕಾಯುಕ್ತ ಸಂಸ್ಥೆಯೇ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೇ ಲೋಪವೆಸಗಿರುವುದನ್ನು ರಾಜ್ಯದ ಜನರ ಮುಂದಿಡುವ ಪ್ರಯತ್ನವನ್ನು ನಾಡಿನ ಪ್ರಜ್ಞಾವಂತರು ಶ್ಲಾಘಿಸಿದ್ದಾರೆ.
“ಬೆಂಗಳೂರು ನಗರದ ಗಂಗೇನಹಳ್ಳಿ, ಈಗಿನ ಗಂಗಾ ನಗರ, ಎಂ ಎಲ್ ಎ ಬಡಾವಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಾಮೂಹಿಕ ಗೃಹ ನಿರ್ಮಾಣಕ್ಕೆ ಇಟ್ಟ 1ಎಕರೆ, 11 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಿದ ಹಗರಣವನ್ನು ದಾಖಲೆ ಸಹಿತ ಹೊರಗೆ ಎಳೆದ ಈ ದಿನ ಡಾಟ್ ಕಾಮ್ ಗೆ ಮೊದಲ ಅಭಿನಂದನೆಗಳು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ತಮ್ಮ ಅತ್ತೆ ಹಾಗೂ ಹೆಂಡತಿಯ ತಮ್ಮನಿಗಾಗಿ, ಭೂಮಿ ಡಿನೋಟಿಫೈಗೆ ಮಾಡಿದ ಪ್ರಯತ್ನವೇ ಕಾನೂನು ಬಾಹಿರ. ಅವರು ಕುಟುಂಬದ ಹಿತಾಸಕ್ತಿಗಾಗಿ ಅಧಿಕಾರ ದುರುಪಯೋಗ ಮಾಡಿದ್ದು ಸ್ಪಷ್ಟವಾಗಿ ದಾಖಲೆಗಳಲ್ಲಿ ಕಾಣುತ್ತಿದೆ. ನಂತರ ಮುಖ್ಯಮಂತ್ರಿಯಾಗಿ ಬಂದ ಯಡಿಯೂರಪ್ಪ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಅಧಿಕಾರಿಗಳ ಟಿಪ್ಪಣಿ ಉಲ್ಲಂಘಿಸಿ, ಸತ್ತವರ ಹೆಸರಲ್ಲಿ ಡಿನೋಟಿಫೈ ಮಾಡಿದ್ದು ಮತ್ತೊಂದು ಅಪರಾಧ. ಲೋಕಾಯುಕ್ತರಲ್ಲಿ ದೂರು ದಾಖಲಾಗಿದೆ. ಈಗಿನ ಸರ್ಕಾರ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮಾಡಿದ ಸ್ವಜನ ಪಕ್ಷಪಾತ ಮತ್ತು ಅಧಿಕಾರ ದುರ್ಬಳಕೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಲೋಕಾಯುಕ್ತರು ಸಹ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯ ಬೇಕು. ಆಗ ಮಾತ್ರ ಅಧಿಕಾರದ ರಾಜಕಾರಣ ಜನರ ವಿಶ್ವಾಸಗಳಿಸಲು ಸಾಧ್ಯ. ಲೋಕಾಯುಕ್ತ ಕಾನೂನು ವ್ಯವಸ್ಥೆಗೆ ಅರ್ಥದಕ್ಕಲು ಸಾಧ್ಯ” ಎಂದು ಕಾರವಾರದ ಪತ್ರಕರ್ತ ನಾಗರಾಜ್ ಹರಪನಹಳ್ಳಿ ಪ್ರತಿಕ್ರಿಯಿಸಿದ್ದಾರೆ.
“ಮುಖ್ಯವಾಹಿನಿಯಲ್ಲಿರುವ ದೊಡ್ಡ, ದೊಡ್ಡ ಮಾಧ್ಯಮಗಳು ಮಾಡದ ಇಂತಹ ತನಿಖಾ ವರದಿಯನ್ನು ‘ಈ ದಿನ. ಕಾಂ’ ಮಾಡಿರುವುದು ಅಭಿನಂದನೀಯ ಹಾಗೂ ಶ್ಲಾಘನೀಯ. ಸಾರ್ವಜನಿಕ ರಂಗದಲ್ಲಿ, ಜನತೆಯ ಹಿತದಲ್ಲಿ ಇಂತಹ ವರದಿಗಳು, ಮಾಹಿತಿಗಳು ‘ಈ ದಿನ. ಕಾಂ’ ನಿಂದ ಹೆಚ್ಚು ಹೆಚ್ಚು ಬರಲಿ. ಈ ತನಿಖಾ ವರದಿಯ ಹಿಂದೆ ಕೆಲಸ ಮಾಡಿರುವ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಲೇಖಕ ಮ ಶ್ರೀ ಮುರಳೀಕೃಷ್ಣ ಸಂದೇಶ ಕಳುಹಿಸಿದ್ದಾರೆ.
“ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಕೆಟ್ಟ ರಾಜಕೀಯವನ್ನು ಆರಂಭಿಸಿದ ಅತ್ಯಂತ ಭ್ರಷ್ಟರು. ವಿರೋಧ ಪಕ್ಷದ ಶಾಸಕರನ್ನು ಖರೀದಿಸಿˌಹಾಗೂ ತಮ್ಮದೇ ಪಕ್ಷವನ್ನು ಒಡೆದು ರೆಸಾರ್ಟ್ ರಾಜಕೀಯದ ಮೂಲಕ ಕೆಟ್ಟ ರಾಜಕೀಯ ಪರಂಪರೆ ಹುಟ್ಟು ಹಾಕಿದವರು. ಇವರೀರ್ವರ ಜೋಡಿ ಮಾಡಿದ ಜನದ್ರೋಹದ ಹಗರಣವನ್ನು ಈದಿನ.ಕಾಮ್ ಬಿಚ್ಚಿಟ್ಟಿದ್ದು ಸ್ತುತ್ಯಾರ್ಹವಾದ ಸಂಗತಿ. ಈಗಲಾದರೂ ಇವರು ಸನ್ನಡತೆಯ ರಾಜಕಾರಣ ಮಾಡಲಿ” ಎಂದು ವಿಜಯಪುರದ ಡಾ. ಜೆ ಎಸ್ ಪಾಟೀಲ ಹೇಳಿದ್ದಾರೆ.
“ಗಂಗೇನಹಳ್ಳಿ ಡಿನೋಟಿಫಿಕೇಶನ್ ಸಂಬಂಧಿಸಿದಂತೆ ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಡೆ, ನಡೆಸಿರುವ ಭೂಹಗರಣ ನಿಜಕ್ಕೂ ಆಘಾತಕಾರಿಯಾದುದು. ಜನ ಒಂದು 20× 30 ಸೈಟ್ ಕೊಳ್ಳಲು ಪರದಾಡುವ ಈ ದಿನಗಳಲ್ಲಿ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಪ್ರತಿಷ್ಠಿತ ಬಡಾವಣೆಯಲ್ಲಿ 1ಎಕರೆ 11ಗುಂಟೆ ಅಂದರೆ ಹೆಚ್ಚು ಕಮ್ಮಿ 60 ಸೈಟ್ಗಳನ್ನು ಕಬಳಿಸುತ್ತಾರೆಂದರೆ, ಇದು ಸಾರ್ವಜನಿಕ ಆಸ್ತಿಯನ್ನು ಹಾಡು ಹಗಲೇ ದೋಚಿದ ದರೋಡೆಯಲ್ಲದೇ ಬೇರೇನಲ್ಲ. ಇದನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ವ್ಯಕ್ತಿ(ಹೆಚ್ ಡಿಕೆ) ಮಾಡುತ್ತಾರೆಂದರೆ ಜನ ಆಡಳಿತ ವ್ಯವಸ್ಥೆ ಬಗ್ಗೆ ನಂಬಿಕೆ ಇಡುವುದಾದರೂ ಹೇಗೆ? ನಿಟ್ಟಿನಲ್ಲಿ ಇಂತಹ ಒಂದು ಹೀನ ಕೃತ್ಯವನ್ನು ಎಸೆಗಿರುವ ಹಾಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಇಡೀ ಪ್ರಕರಣದ ನೈತಿಕ ಹೊಣೆ ಹೊತ್ತು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಾಕೆಂದರೆ ಎಲ್ಲರನ್ನೂ ಟೀಕಿಸುವ ಕುಮಾರಸ್ವಾಮಿಯವರು, ಸಾಕ್ಷಿಗಾಗಿ ಸದಾ ಪೆನ್ ಡ್ರೈವ್ ಪ್ರದರ್ಶಿಸುವ ಕುಮಾರಣ್ಣನವರು ನೈತಿಕತೆ ಪ್ರದರ್ಶಿಸಬೇಕಲ್ಲವೆ? ಆದ್ದರಿಂದ ಈ ಕೂಡಲೇ ಅವರು ತಮ್ಮ ಕೇಂದ್ರ ಸಚಿವ ಹುದ್ದೆಗೆ ರಾಜೀನಾಮೆ ನೀಡಲಿ. ರಾಜಕಾರಣದಲ್ಲಿ ನೈತಿಕತೆಯನ್ನು ಎತ್ತಿ ಹಿಡಿಯಲಿ” ಎಂದು ರಘು ಎಂಬವರು ಒತ್ತಾಯಿಸಿದ್ದಾರೆ.
“ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಜೋಡಿ ಕಳ್ಳಾಟವನ್ನು ಜನರ ಮುಂದೆ ಬಿಚ್ಚಿಟ್ಟಿದ್ದೀರಿ. ಕುಮಾರಸ್ವಾಮಿ ಮತ್ತೆ ಮತ್ತೆ ಮೋದಿ ಕಾಲು ಹಿಡಿಯುವುದು ಯಾಕೆ ಎಂಬುದು ಈಗ ಅರ್ಥವಾಗುತ್ತದೆ. ಇಂತಹ ಹತ್ತಾರು ಪ್ರಕರಣಗಳು ಇನ್ನೂ ಸಿಗಬಹುದು. ಕರ್ನಾಟಕ ಸರ್ಕಾರ ಇಬ್ಬರ ಮೇಲೂ ತಕ್ಷಣ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ರಾಜ್ಯ ಬಿಜೆಪಿ ನಾಯಕರು ಇವರ ಮನೆಯ ಮುಂದೆ ಭಜನೆ ಮಾಡಲಿ” ಎಂದು ಮಂಗಳೂರಿನ ಎಂ ಜಿ ಹೆಗಡೆ ಹೇಳಿದ್ದಾರೆ.
“ಗಾಜಿನ ಮನೆಯಲ್ಲಿರುವವರು ಇತರರ ಕಡೆಗೆ ಕಲ್ಲು ಎಸೆಯಬಾರದು ಎನ್ನುವ ಕನಿಷ್ಠ ಜ್ಞಾನವು ಇಲ್ಲದ ಮೂರ್ಖತನ. ಇವೆಲ್ಲ ಎಲ್ಲಿಗೆ ಕೊಂಡೊಯ್ಯುತ್ತೋ ಗೊತ್ತಿಲ್ಲ. ರಾಜಕೀಯ ವ್ಯಕ್ತಿಗಳ ಬಗ್ಗೆ ಅಸಹ್ಯ ಎನಿಸುತ್ತದೆ. ಯುವ ಪೀಳಿಗೆಗಂತೂ ಈ ವ್ಯವಸ್ಥೆಯ ಮೇಲೆ ಭರವಸೆಯೇ ಹೋಗಲಿದೆ ಎನ್ನುವ ಆತಂಕ ಉಂಟಾಗುತ್ತದೆ” ಎಂದು ಕೃಷಿ ವಿಜ್ಞಾನಿ ಡಾ ಪ್ರಕಾಶ ಕಮ್ಮರಡಿ ಪ್ರತಿಕ್ರಿಯಿಸಿದ್ದಾರೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಭೂ ಹಗರಣದಲ್ಲಿ ಆರೋಪಿತರಿಗೆ ಶಿಕ್ಷೆ ಆಯಿತೇ…ಇಲ್ಲವೇ ಅನ್ನೋದು ಮಾತ್ರ ಯಕ್ಷ ಪ್ರಶ್ನೆಯಾಗಿದೆ ಅಲ್ಲವೇ?
What is the use? Our experience with progressive forces, intelligencia groups , neo-liberals shows these group’s have never taken such things to logical end. Issue involves two dominant community leaders, who from many decades are in the forefront to see that real issues are hinacked. At the most people enjoy these narratives for a brief period. The pressure groups will have their own axe to grind. Anyway CONGRATULATIONS for this scoop.
PM Modi SHOULD immediately sack kumaraswamy from cabinet, BJP will earn bad name from kumaraswamy and tainted Gowda family,
All news papers and. TV news channels show only. Breaking. News for. Few days afterwards They keep quiet reason only God. Knows. THIS is very fishy They think that. Public. Memory is always. Short. So they do according to their vims and fancy Only God can help our country
Their community voters and Matt pontiffs must seriously take this and ban them from politics