ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ಅಪರಾಧಿಗಳನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಲು ಮತ್ತೊಂದು ಹೋರಾಟ ರೂಪಿಸುವ ಉದ್ದೇಶದಿಂದ ಸಮಾನಮನಸ್ಕ ಸಂಘಟನೆಗಳು ಮಂಗಳವಾರ ಸಂಜೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಮಾಡಲಾಗಿದೆ.
ಬೆಂಗಳೂರಿನಿಂದ ಧರ್ಮಸ್ಥಳ ಚಲೋ ಮಾಡುವುದು, ಅದರ ರೂಪುರೇಷೆ, ಸ್ವರೂಪ ನಿರ್ಧಾರಕ್ಕಾಗಿ ತಕ್ಷಣವೇ ಜಿಲ್ಲಾಮಟ್ಟದಲ್ಲಿ ಸಂಘಟನೆ ಮುಖ್ಯಸ್ಥರ ಪೂರ್ವಭಾವಿ ಸಭೆಗಳನ್ನು ನಡೆಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಕಳೆದ ವಾರ ಕಸಾಪದಲ್ಲಿ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಗೆ ಕೊನೆಯ ಕ್ಷಣದಲ್ಲಿ ಪೊಲೀಸ್ ನೋಟಿಸ್ ನೆಪ ಮಾಡಿಕೊಂಡು ಕಸಾಪ ಸಭಾಂಗಣ ನೀಡಲು ನಿರಾಕರಿಸಿತ್ತು. ಆ ಕಾರಣ ಮುಂದೆ ಹಾಕಲಾಗಿದ್ದ ಸಭೆ ನಿನ್ನೆ ಎಐಸಿಯುಟಿ ಕಚೇರಿಯಲ್ಲಿ ನಡೆಯಿತು. ಸಭೆ ನಡೆಸದಂತೆ ಪೊಲೀಸರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲೂ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿತ್ತು. ಪೊಲೀಸರ ಕ್ರಮ ಸರಿಯಲ್ಲ ಎಂದು ಹೇಳಿದ ಹೈಕೋರ್ಟ್ ಪೀಠ, ಸಭೆ ನಡೆಸಲು ಅನುಮತಿ ನೀಡಿತ್ತು.
“ಪೊಲೀಸರು ಹೈಕೋರ್ಟ್ ಆದೇಶವನ್ನು ದುರುಪಯೋಗಪಡಿಸಿಕೊಂಡಾಗ, ಒಂದು ಕಚೇರಿಯೊಳಗೆ ಸಭೆ ನಡೆಸದಂತೆ ನೋಟಿಸ್ ನೀಡಿದಾಗ ಅದರ ಬಗ್ಗೆ ಹೈಕೋರ್ಟ್ ಗಮನಕ್ಕೆ ತರುವುದು ಅನಿವಾರ್ಯವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಭೆ ಮಾಡುವುದನ್ನೂ ಪೊಲೀಸರು ತಡೆಯುತ್ತಿದ್ದಾರೆ ಎಂದರೆ ಅದು ಸಂವಿಧಾನ ವಿರೋಧಿ. ಸೌಜನ್ಯ ವಿಚಾರದಲ್ಲಿ ಮಾತ್ರವಲ್ಲ ಧರ್ಮಸ್ಥಳ ಫೈಲ್ಸ್ ವಿಚಾರದಲ್ಲಿ ನಾವು ಹೋರಾಟ ಮುಂದುವರಿಸಬೇಕಿದೆ” ಎಂದು ವಕೀಲರಾದ ವಿನಯ್ ಶ್ರೀನಿವಾಸ್ ಹೇಳಿದರು.

ಚಿಂತಕ ಸಿದ್ಧನಗೌಡ ಪಾಟೀಲ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದು ಇದೇ ಮೊದಲಲ್ಲ. ಯಾವುದೇ ಸರ್ಕಾರ ಇದ್ದರೂ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಚಳವಳಿಗಳನ್ನು ಹತ್ತಿಕ್ಕುವುದು ನಡೆಯುತ್ತಿದೆ. ಅದಕ್ಕೆಲ್ಲ ಮಣಿಯದೇ ಧರ್ಮ ದೇವರ ಹೆಸರಿನಲ್ಲಿ ನಡೆಯುವ ಅನ್ಯಾಯವನ್ನು ವಿರೋಧಿಸಬೇಕಿದೆ. ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನಡೆಸಲಾಗುತ್ತಿರುವ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕರ್ನಾಟಕ ಜನಶಕ್ತಿ ಸಂಘಟನೆಯ ಮಲ್ಲಿಗೆ ಸಿರಿಮನೆ ಮಾತನಾಡಿ, ಈ ತರಹದ ಘಟನೆಗಳು ನಡೆದಾಗ ಕರ್ನಾಟಕದ ಚಳವಳಿಗಳು ಯಾವ ರೀತಿಯ ಪ್ರತಿರೋಧ ತೋರಿದ್ದವು ಎಂಬುದು ಎಲ್ಲರಿಗೂ ಗೊತ್ತಿದೆ. ನಿರ್ದಿಷ್ಟ ಘಟನೆ ನಡೆದಾಗ ಅಂತಹ ಪ್ರಕರಣಗಳನ್ನು ಚಳವಳಿಯಾಗಿ ಕೊಂಡೊಯ್ದ ಇತಿಹಾಸ ನಮಗೆ ಇದೆ. ವರ್ಷದ ಹಿಂದೆ ಬೆಳ್ತಂಗಡಿ ಚಲೋ ಮಾಡಿದ್ದೆವು. ಈಗ ಮತ್ತೊಂದು ಹೋರಾಟ ಯಾಕೆ ಎಂಬ ಪ್ರಶ್ನೆ ಬರುತ್ತೆ. ಇವತ್ತು ಬೇರೆ ತರದ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ಪ್ರಶ್ನಿಸಬೇಕು. ಸಮೀರ್ ವಿಡಿಯೋ ಬಂದ ನಂತರ ನಡೆದ ಘಟನೆಗಳು, ಒಟ್ಟಾರೆ ಈ ರಾಜ್ಯದ ಸಾಮಾಜಿಕ ಚಳವಳಿಗಳಿಗೆ ಮತ್ತೊಮ್ಮೆ ಮುಂದೆ ಕೊಂಡೊಯ್ಯಲು ಸಾಧ್ಯವೇ ಎಂದು ತೋರಿಸಲು ಸಿಕ್ಕ ಸಣ್ಣ ಸಣ್ಣ ಅವಕಾಶಗಳನ್ನೂ ಬಳಸಿಕೊಳ್ಳಬೇಕಿದೆ. ಅದು ಒಂದು ಚರ್ಚೆಯನ್ನು ಹುಟ್ಟು ಹಾಕುತ್ತದೆ ಎಂದರು. ಸೌಜನ್ಯ ಪ್ರಕರಣ ಮಾತ್ರವಲ್ಲ, ಯಾದಗಿರಿಯ ಅಲೆಮಾರಿ ಹೆಣ್ಣುಮಕ್ಕಳ ಅಸಹಜ ಸಾವು ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನೂ ಖಂಡಿಸಬೇಕಿದೆ. ಸಣ್ಣ ಮಟ್ಟಿನ ಪವರ್ ಇರುವ ವ್ಯಕ್ತಿಯಾದರೆ ಸಾಕು, ಹೆಣ್ಣುಮಕ್ಕಳನ್ನು ಕೊಂದು ಮುಗಿಸಲು ಹೆದರುತ್ತಿಲ್ಲ. ಇಂತಹ ಹಲವು ಪ್ರಶ್ನೆಗಳನ್ನು ಚರ್ಚೆಯ ಭಾಗವಹಿಸಿಕೊಂಡು ಜನರನ್ನು ಮುಟ್ಟಲು ಸಾಧ್ಯ ಎಂದರು.
ಚಿಂತಕಿ, ವಕೀಲೆ ಅಖಿಲಾ ವಿದ್ಯಾಸಂದ್ರ ಮಾತನಾಡಿ, ನಾವು ಕೇಳಬೇಕಿರೋದು ಸೌಜನ್ಯಳಿಗೆ ನ್ಯಾಯ ಅಲ್ಲ. ಆಕೆಗಾದ ಅನ್ಯಾಯಕ್ಕೆ ನ್ಯಾಯ ಸಿಗಲು ಸಾಧ್ಯವಿಲ್ಲ. ಸೌಜನ್ಯಳ ಸಾವಿಗೆ ನ್ಯಾಯ ಕೇಳಬೇಕಿದೆ. ಆಕೆಯನ್ನು ಕೊಂದು ಮುಗಿಸಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸಬೇಕಿದೆ ಎಂದರು.
ರಂಗಕರ್ಮಿ ರಘುನಂದನ್, ಇಂತಹ ವಿಚಾರದಲ್ಲಿ ಸಾಹಿತ್ಯ ವಲಯದ ಮೌನವನ್ನು ಖಂಡಿಸಿದರು. ಸಾಧ್ಯವಾದರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕಸಾಪ, ಸಾರಿಗೆ ನೌಕರರ ಸಂಘಟನೆ, ಸರ್ಕಾರಿ ನೌಕರರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಶಿಕ್ಷಕರ ಸಂಘ, ವಿದ್ಯಾರ್ಥಿ ಸಂಘಟನೆಗಳಿಗೆ ಪತ್ರ ಬರೆದು, ಸೌಜನ್ಯ ಕುಟುಂಬಕ್ಕೆ ನ್ಯಾಯ ಕೊಡಿಸುವ ಸಂಬಂಧ ಮರು ತನಿಖೆಗೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸೋಣ ಎಂಬ ಸಲಹೆ ನೀಡಿದರು.
ಕನ್ನಡಪರ ಹೋರಾಟಗಾರ ಭೈರಪ್ಪ ಹರೀಶ್ಕುಮಾರ್, ಚಿಂತಕ ಶಿವಸುಂದರ್, ಸಾಮಾಜಿಕ ಹೋರಾಟಗಾರ ಸುರೇಂದ್ರ ರಾವ್, ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ, ನವೀನ್ ಸೂರಿಂಜೆ, ಸುನೀಲ್ ಸಿರಸಂಗಿ, ರಾಜಶೇಖರ ಅಕ್ಕಿ, ಮುತ್ತುರಾಜ್, ಅಶೋಕ್ ಭದ್ರಾವತಿ, ವಕೀಲೆ ಮೈತ್ರೇಯಿ, ಕರ್ನಾಟಕ ಜನಶಕ್ತಿಯ ಕಾರ್ಯಕರ್ತೆ ಚೆನ್ನಮ್ಮ, ರೈತ ಮುಖಂಡ ಯಶವಂತ್ ಸೇರಿದಂತೆ ಹಲವು ಹೋರಾಟಗಾರರು ಸಮಾಲೋಚನೆ ನಡೆಸಿದರು. ಬೈಕ್ ರ್ಯಾಲಿ ಸೇರಿದಂತೆ ಹಲವು ಸಲಹೆಗಳು ಬಂದವು.