ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಎಲ್ಲರ ವಿರುದ್ಧವೂ ಸಮಾನವಾಗಿಯೇ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಒತ್ತಾಯಿಸಿದರು.
ರಾಜ್ಯದಲ್ಲಿ ಕೆಲವರು ಹುಲಿ ಉಗುರು ಕೊರಳಲ್ಲಿ ಧರಿಸುವುದು, ಹುಲಿ ಚರ್ಮವನ್ನು ಬಳಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದು, ಈ ಸಂಬಂಧ ಈಗಾಗಲೇ ಕೆಲವು ಬಂಧನಗಳಾಗಿವೆ. ಈ ಬಗ್ಗೆ ಗುರುವಾರ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಬೆಲ್ಲದ್ ಪ್ರತಿಕ್ರಿಯಿಸಿದರು.
“ರಾಜ್ಯದಲ್ಲಿ ಬರ ಇದೆ, ರೈತರಿಗೆ, ಜನರಿಗೆ ವಿದ್ಯುತ್ ಸಮಸ್ಯೆ ಇದೆ. ಇದರ ಗಮನ ಬೇರೆ ಕಡೆ ಸೆಳೆಯಲು ಸರಕಾರ ಹುಲಿ ಉಗುರು ಪ್ರಕರಣ ಮುನ್ನೆಲೆಗೆ ತಂದಿದೆ. ದರ್ಗಾಗಳಲ್ಲಿ ನವಿಲುಗರಿಗಳನ್ನು ಬಳಕೆ ಮಾಡಲಾಗುತ್ತದೆ. ಇದು ಕೂಡಾ ಕಾನೂನಿಗೆ ವಿರುದ್ಧವಾಗಿದೆ” ಎಂದರು.
“ನವಿಲು ಗರಿಗಳನ್ನು ಇಟ್ಟುಕೊಂಡಿರುವ ದರ್ಗಾ, ಮಸೀದಿಗಳ ಮೇಲೆ ದಾಳಿ ಮಾಡಿ, ಮೌಲ್ವಿಗಳ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಅಲ್ಲದೇ, ನವಿಲು ಗರಿಗಳನ್ನು ಬಳಕೆ ಮಾಡುವ ಎಲ್ಲ ಮೌಲ್ವಿಗಳಿಗೂ ಏಳೇಳು ವರ್ಷ ಜೈಲು ಶಿಕ್ಷೆ ಕೊಡಿಸಬೇಕು” ಎಂದು ಆಗ್ರಹಿಸಿದರು.