ಒಳಮೀಸಲಾತಿ ಜಾರಿಗಾಗಿ ನಡೆಯುವ ಸಮೀಕ್ಷೆಯಲ್ಲಿ ಭಾಗಿಯಾಗದ ದಲಿತ ಸಮುದಾಯದ ಜನರ ಸಿಂಧುತ್ವವನ್ನೇ ರದ್ದು ಮಾಡಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದರು.
ಭಾನುವಾರ ಬೆಂಗಳೂರಿನ ವಸಂತನಗರ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಒಳಮೀಸಲಾತಿಗೆ ಸಮೀಕ್ಷೆಯ ಆರಂಭ- ಮಾದಿಗ ಮುಖಂಡರ ಜಾಗೃತಿ ಸಭೆ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿಮ್ಮ ಮಕ್ಕಳಿಗೆ ಉದ್ಯೋಗ ಬೇಕಾ? ಮಗನಿಗೆ ಇಂಜಿನಿಯರಿಂಗ್ ಸೀಟ್ ಬೇಕಾ? ನಗರಾಭಿವೃದ್ಧಿ ಪ್ರದೇಶದಲ್ಲಿ ನಿವೇಶನ ಬೇಕಾ? ಕೆಐಎಡಿಬಿಯಲ್ಲಿ ಜಾಗಬೇಕಾ?- ಈ ಸಮೀಕ್ಷೆಯಲ್ಲಿ ಪಾಲ್ಗೊಂಡವನಿಗೆ ಮಾತ್ರ ಈ ಎಲ್ಲಾ ಸೌಲಭ್ಯ ಸಿಗುತ್ತದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವವರನ್ನು ಪ್ರಮುಖ ದಾಖಲೆಯನ್ನಾಗಿ ಪರಿಗಣಿಸಬೇಕು. ಸರ್ವೇಯಲ್ಲಿ ಪಾಲ್ಗೊಳ್ಳದವರಿಗೆ ನೀವು ಯಾವ ಜಾತಿಯೆಂದು ಗೊತ್ತಿಲ್ಲ ಎಂದು ಹೇಳಬೇಕು. ಸರ್ವೇಯಲ್ಲೇ ಭಾಗವಹಿಸದೆ ಇರುವವರ ಸಿಂಧುತ್ವವನ್ನೇ ರದ್ದು ಮಾಡಬೇಕು. ಅಂಥವರ ನೇಮಕಾತಿಯನ್ನು ತಡೆ ಹಿಡಿಯಬೇಕು. ಆ ರೀತಿಯಲ್ಲಿ ಸ್ವಾಭಿಮಾನದಿಂದ ಮುನ್ನಗ್ಗಬೇಕು ಎಂದು ಕರೆ ನೀಡಿದರು.
ನಾವು ಭರ್ಜರಿ ಜನ ಇದ್ದೇವೆ ಎಂದು ಒಂದು ಸಮುದಾಯದವರು ಹೇಳುತ್ತಿದ್ದಾರೆ. ಮಾದಿಗರು ಕಡಿಮೆ ಇದಾರೆಂದು ಚಿತ್ರಿಸುತ್ತಿದ್ದಾರೆ. ಆದರೆ ನಮ್ಮ ಸಂಖ್ಯೆಯನ್ನು ದಾಖಲಿಸಬೇಕು. ಗಣಕೀದಾರರು ಬರುವ ಮುನ್ನ ನೀವೇ ಒಂದು ಸರ್ವೇ ಮಾಡಿಕೊಂಡು ಇಟ್ಟುಕೊಂಡಿರಬೇಕು. ನಮಗೆ ಆತ್ಮಬಲ ಇದೆ. ನಮ್ಮ ಮಕ್ಕಳ ಭವಿಷ್ಯದ ಮೇಲೆ ನಂಬಿಕೆ ಇದೆ. ಮೇ 5ರಿಂದ ಮೇ 17ರವರೆಗೆ ಯಾರೂ ಮನೆ ಬಿಟ್ಟು ಹೋಗಬೇಡಿ. ಮಾದಿಗ ಎಂದೇ ಎಲ್ಲರೂ ನಮೂದಿಸಿ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನೀವು ಹೇಳಿದರೂ ಅವರು ಉಪ ಜಾತಿಯನ್ನೇ ಬರೆದುಕೊಳ್ಳುತ್ತಾರೆ. ಮಾದಾರ ಎಂದೂ ಬರೆಸಬೇಡಿ. 61ನೇ ಕಲಂನಲ್ಲಿರುವ ಮಾದಿಗ ಎಂದೇ ದಾಖಲಿಸಿ ಎಂದು ಒತ್ತಿ ಹೇಳಿದರು.
ಅಂಬೇಡ್ಕರ್ ಜಯಂತಿಗಾಗಲೀ, ಬಾಬೂಜಗಜೀವನ್ ರಾಮ್ ಜಯಂತಿಗಾಗಲೀ ಸಮಯ ನಿಗದಿ ಮಾಡಿಕೊಂಡು ಸಮೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಆಚರಣೆಗಳನ್ನು ಸಮೀಕ್ಷೆಯ ನಂತರ ಮಾಡಿಕೊಳ್ಳಬಹುದು. ಮೇ5 ರಿಂದ 17ರ ವರೆಗೂ ನಡೆಯುವ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದವರು, ಮೇ19 ರಿಂದ 21ರ ವರೆಗೂ ತಮ್ಮ ಮತ ಕ್ಷೇತ್ರಗಳಲ್ಲಿರುವ ಸಮೀಕ್ಷಾ ಕೇಂದ್ರಕ್ಕೆ ಆಧಾರ್ ಮತ್ತು ರೇಷನ್ ಕಾರ್ಡ್ಗಳೊಂದಿಗೆ ಹೋಗಿ ಮಾದಿಗ ಎಂದು ನಮೂದಿಸಿ ಬರಬೇಕು ಎಂದು ವಿವರಿಸಿದರು.
ನಗರಗಳಲ್ಲಿ ಮತ್ತು ಹೊರ ರಾಜ್ಯಗಳಲ್ಲಿ ಇರುವ ಕೆಲವರು ಕೀಳರಿಮೆಯಿಂದ ಮಾದಿಗ ಎಂದು ಬರೆಸಲು ಹಿಂದೆ ಸರಿಯುತ್ತಾರೆ. ಅಂಥವರು ತಮ್ಮ ಜಾತಿಯನ್ನು ಆನ್ಲೈನ್ ಮುಖಾಂತರವಾದರೂ ನಮೂದಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗ ಸಮುದಾಯದ ಪರವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಒಳಮೀಸಲಾತಿಯನ್ನು ಪಡೆದುಕೊಳ್ಳಬೇಕು. ಅನಗತ್ಯವಾಗಿ ಅವರನ್ನು ಟೀಕೆ ಮಾಡುವ ಮತ್ತು ನಿಂದಿಸುವ ಕೆಲಸ ಮಾಡಬಾರದು. ಒಳಮೀಸಲಾತಿಗೆ ಎಲ್ಲ ರಾಜಕೀಯ ಪಕ್ಷದವರೂ ಬೆಂಬಲ ನೀಡಿದ್ದಾರೆ. ಅವರನ್ನೂ ಗೌರವದಿಂದ ಕಾಣಬೇಕು ಎಂದರು.
ಇದನ್ನೂ ಓದಿರಿ: ಜಾತಿ ಗಣತಿಯನ್ನು ‘ಕಸ’ ಎಂದರೂ ಒಬಿಸಿಗಳ ಮೌನ ಸರಿಯಲ್ಲ: ಎ.ನಾರಾಯಣ
ನಾಡೋಜ ಗೋನಾಳ್ ಭೀಮಪ್ಪ ಮಾತನಾಡಿ, ಸಮುದಾಯದ ಜನರನ್ನು ಗಣತಿಗೆ ಒಳಪಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ನಮಗೆ ಬಂದಿರುವ ಸದಾವಕಾಶ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರದ ಸಮಸ್ಯೆಗೆ ಅಂತ್ಯ ಹಾಡಬೇಕಿದೆ. ಮಾದಿಗ ಸಮುದಾಯಗಳು ಇರುವ ವಾರ್ಡ್ಗಳಿಗೆ ಹೋಗಿ ಜಾಗೃತಿ ಮೂಡಿಸಬೇಕಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಇತರ ಸಮುದಾಯಗಳು ಈಗಾಗಲೇ ಜಾಗೃತಿ ಮೂಡಿಸುತ್ತಿವೆ. ಮಾದಿಗ ಸಮುದಾಯವು ಇದೇ ನಿಟ್ಟಿನಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕಿದೆ. ಎ.ಕೆ., ಎ.ಡಿ. ಬೇಡ ಎಂದು ಹೇಳಬೇಕಿದೆ. ಸಮೀಕ್ಷೆಯ ಪಟ್ಟಿಯಲ್ಲಿನ ನಮ್ಮ ಕ್ರಮ ಸಂಖ್ಯೆ 61ರಲ್ಲಿ ಜಾತಿಯನ್ನು ತಪ್ಪದೇ ದಾಖಲಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಪರಿಷತ್ ಸದಸ್ಯ ಆರ್.ಧರ್ಮಸೇನಾ, ನಿವೃತ್ತ ಅಪರ ಆಯುಕ್ತ ಎಚ್.ಆರ್.ತೆಗನೂರು, ನಿವೃತ್ತ ಅಧಿಕಾರಿ ಭೀಮಾಶಂಕರ್, ಒಳಮೀಸಲಾತಿ ಹೋರಟಗಾರರಾದ ಜಿ.ಎಸ್.ಮಂಜುನಾಥ, ಬಸವರಾಜ್ ಮಾಲಗತ್ತಿ, ಡಾ.ಬಾಬುರಾವ್ ಮುಡಬಿ, ಓ.ಶಂಕರ್, ಜಗದೀಶ ಬೆಟಗೆರೆ, ಎಂ.ಆರ್.ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.