ವಿಧಾನಸಭೆಯ ಸದನದಲ್ಲಿ ಸಿಎಂ ಸಿದ್ದರಾಮಯ್ಯನವರು ಭಾಷಣ ಮಾಡುವ ವೇಳೆ ಬಿಜೆಪಿ ಶಾಸಕರು ʼಜೈಶ್ರೀ ರಾಮ್ʼ ಎಂಬ ಘೋಷಣೆಗೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯನವರು ʼಜೈ ಸೀತಾರಾಮʼ ಎಂದು ಕೂಗಿದರು. ಸಂವಿಧಾನ ಮಾತ್ರ ಇರಬೇಕಾದ ಸದನದಲ್ಲಿ ಎರಡೂ ಪಕ್ಷದವರು ʼರಾಮʼನನ್ನು ಜಪಿಸಿದ್ದು ಇಂದಿನ ಬಹುದೊಡ್ಡ ಗೊಂದಲ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಹೇಳಿದರು.
ಇತ್ತೀಚೆಗೆ ನಿಧನರಾದ ಸಿಪಿಐ ಪಕ್ಷದ ಮುಖಂಡ, ಹೋರಾಟಗಾರ ಎಂ.ಎನ್.ಸುಂದರ್ ರಾಜ್ ಅವರಿಗೆ ಶಹೀದ್ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಹಾಗೂ ಗೆಳೆಯರ ಬಳಗದಿಂದ ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಸಮಾಜವಾದದ ಸಿದ್ಧತೆ, ಬದ್ಧತೆ ಹಾಗೂ ಸ್ಫಷ್ಟತೆ ಮೈಗೂಡಿಸಿಕೊಂಡು ಕೃಷಿ-ಕಾರ್ಮಿಕ-ದಲಿತ ಚಳವಳಿ ಕಟ್ಟಿ ಜೀವನುದ್ದಕ್ಕೂ ಹೋರಾಡಿದ ದಿವಂಗತ ಎಂ.ಎನ್. ಸುಂದರರಾಜ್ ಅವರು ಇಂದು ದೈಹಿಕವಾಗಿ ಕಳೆದುಕೊಂಡಿರಬಹುದು, ಆದರೆ ಅವರ ಆಳವಾದ ಪ್ರಖರ ಚಿಂತನೆಗಳು ನಮ್ಮೆಲ್ಲರ ಎದೆಯಾಳದಲ್ಲಿ ಮತ್ತೆ ಬಿತ್ತಿಕೊಳ್ಳಬೇಕಿದೆ” ಎಂದು ಸ್ಮರಿಸಿದರು.
“ಯಾವುದೇ ಧರ್ಮಗಳು ಪಾಲಿಸುವ ವೈಯಕ್ತಿಕ ಹಕ್ಕು ನಮಗಿದೆ. ಆದರೆ ಸರ್ಕಾರ ಯಾವ ಧರ್ಮಕ್ಕೂ ಸೇರಿದಲ್ಲ. ಕ್ರಿಶ್ಚಿಯನ್, ಮುಸ್ಲಿಂ ಸೇರಿದಂತೆ ಇತರೆ ಧರ್ಮಗಳಿಗೆ ತಾರತಮ್ಯ ಮಾಡಿ ಹಿಂದೂ ಎನ್ನುವ ಕಾರಣಕ್ಕೆ ವಿಶೇಷ ಸೌಲಭ್ಯ ಕೊಡುವುದು ಸೆಕ್ಯುಲರಿಸಂ ಅಲ್ಲ. ಎದುರಾಳಿಯನ್ನು ವಿರೋಧಿಸುವ ಬದಲು ಅವರನ್ನೇ ಅನುಸರಿಸುತ್ತಿದ್ದಾರೆ, ʼಜೈ ಶ್ರೀರಾಮ್ʼಗೆ ʼಜೈ ಸೀತಾರಾಮ್ʼ ಅಲ್ಲ, ಜೈ ಸಂವಿಧಾನ ಉತ್ತರವಾಗಬೇಕು” ಎಂದು ನುಡಿದರು.
ಉಗ್ರ ಹಿಂದುತ್ವಕ್ಕೆ ಮೃದು ಹಿಂದುತ್ವ ಪರ್ಯಾಯ ಅಲ್ಲ :
“ಒಂದು ಪಕ್ಷ ಮಂದಿರವನ್ನು ಕಟ್ಟಿಸಿಕೊಡುತ್ತೇವೆ ಎಂದು ಚುನಾವಣಾ ಸಂದರ್ಭದಲ್ಲಿ ಮತ ಕೇಳುವುದು ಅಪರಾಧ, ಆದರೆ, ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಈ ದೇಶದ ದಲಿತ, ದಮನಿತರಿಗೆ ಇಬ್ಬರು ಶತ್ರುಗಳೆಂದರೆ ಬಂಡವಾಳಶಾಹಿ ಹಾಗೂ ಬ್ರಾಹ್ಮಣಶಾಹಿ ಎಂದು ಬಾಬಾ ಸಾಹೇಬರು ನುಡಿದಂತೆ ಇಂದು ಕಾರ್ಪೋರೇಟ್ಶಾಹಿ ಉದ್ಯಮಿ ರೂಪದಲ್ಲಿದ್ದರೆ, ಆರ್ಎಸ್ಎಸ್ ನ ಹಿಂದುತ್ವ ಬ್ರಾಹ್ಮಣಶಾಹಿ ರೂಪದಲ್ಲಿ ನಮ್ಮ ಕಣ್ಮುಂದೆ ನಿಂತಿದೆ. ಇಂತಹ ಉಗ್ರ ಹಿಂದುತ್ವ ಸೋಲಿಸಲು ಮೃದು ಹಿಂದುತ್ವ ಪರ್ಯಾವಾಗದೇ ಸಮಾಜವಾದ ಪರ್ಯಾಯ” ಎಂದು ಹೇಳಿದರು.
“ಕಳೆದ ಹತ್ತು ವರ್ಷಗಳಲ್ಲಿ ಉದ್ಯಮಿಗಳಿಂದ, ಉದ್ಯಮಿಗಳಿಗಾಗಿ, ಉದ್ಯಮಿಗಳಿಗೋಸ್ಕರ ನಡೆಯುತ್ತಿರುವ ಸರ್ವಾಧಿಕಾರಿ ಸರ್ಕಾರ ದೇಶದಲ್ಲಿದೆ. ಒಕ್ಕೂಟ ದೇಶದಲ್ಲಿ ಕೇಂದ್ರ ಸರ್ಕಾರ ಯಾವುದೇ ರಾಜ್ಯ ಸರ್ಕಾರ, ಕೃಷಿ, ರೈತ ಸಂಘಟನೆಗಳ ಗಮನಕ್ಕೆ ತರದೆ ಸರ್ವಾಧಿಕಾರಿಯಾಗಿ ಮೋದಿಗೆ ಪರಮಾಪ್ತರಾದ ಅಂಬಾನಿ, ಅದಾನಿಗಳ ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಡಲು ಎಲ್ಲ ಬಗೆಯ ಪ್ರಜಾತಂತ್ರದ ಪದ್ಧತಿಗಳನ್ನು ಗಾಳಿಗೆ ತೂರಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದವರನ್ನು ಹೊರಗಿಟ್ಟು ಪ್ರಜಾತಂತ್ರ ಅಣಕಿಸಿ ಮೂರು ಕೃಷಿ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಇಂತಹ ರೈತ ವಿರೋಧಿ ಕಾನೂನಿನ ವಿರುದ್ಧ ಧ್ವನಿಯೆತ್ತಬೇಕಾದ ಸಂಸದರು ಸಂಸತ್ತಿನಲ್ಲಿ ಮಾತಾಡದೇ ಮೌನವಾಗಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ” ಎಂದು ಬೇಸರ ವ್ಯಕ್ತಪಡಿಸಿದರು.
“ಇಂದಿನ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಬರೀ ಬೋಗಸ್ ಎಂಬಂತಾಗಿದೆ. ಯಾವ ಸರ್ಕಾರಗಳು ಜನರನ್ನು ಒಳಿತು ಬಯಸುವುದಿಲ್ಲ. ಇದನ್ನು ಬದಲಾಯಿಸಲು ಜನರು ಸಂಘಟಿತರಾಗಿ ಹೋರಾಡಬೇಕಾಗಿದೆ. 2024ರಲ್ಲಿ ಕೇಂದ್ರದಲ್ಲಿ ಮತ್ತೆ ಮೋದಿ ನೇತ್ರತ್ವದ ಸರ್ಕಾರ ಅಧಿಕಾರಕ್ಕೇರಿದರೆ ಮೊದಲ ನೂರು ದಿನದಲ್ಲಿ ಸಿಎಎ, ಎನ್ಪಿಆರ್ ಹಾಗೂ ಎನ್ಆರ್ಸಿ ಜಾರಿಗೊಳಿಸಲು ಮುಂದಾಗಿ, ಈ ದೇಶ ಯಾರಿಗೆ ಸೇರಬೇಕೆಂದು ನಿರ್ಧಾರವಾಗುತ್ತದೆ” ಎಂದು ಹೇಳಿದರು.
ಸಿಪಿಐ ಜಿಲ್ಲಾ ಮುಖಂಡ ಬಾಬುರಾವ್ ಹೊನ್ನಾ, ಚಿಂತಕ ಮಾರುತಿ ಗೋಖಲೆ ಮಾತನಾಡಿ, “ಸುಮಾರು ನಾಲ್ಕು ದಶಕಗಳ ಕಾಲ ಎಡ ಚಳುವಳಿಯಲ್ಲಿ ಸಕ್ರಿಯರಾಗಿ ಅಸಂಘಟಿತ ಶೋಷಿತರ, ರೈತರ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿ ನೂರಾರು ರೈತ-ಕೃಷಿಕರಿಗೆ ಎಕರೆ ಕೃಷಿ ಭೂಮಿ ಒದಗಿಸಿದರು. ಇಂತಹ ಅಪರೂಪದ ನಿಷ್ಠಾವಂತ, ಬದ್ಧತೆಯ ಹೋರಾಟಗಾರನನ್ನು ಕಳೆದುಕೊಂಡಿದ್ದು ಎಡ ಚಳವಳಿಗೆ ಪೆಟ್ಟು ಬಿದ್ದಿದೆ” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಸತಿ ನಿಲಯದಲ್ಲಿ ಬಾಲಕಿ ಆತ್ಮಹತ್ಯೆ; ವಾರ್ಡನ್ ವಿರುದ್ಧ ಪ್ರಕರಣ ದಾಖಲು
ಕಾರ್ಯಕ್ರಮದಲ್ಲಿ ನುರೊಂದಯ್ಯ ಸ್ವಾಮಿ, ಚಿತ್ರಶೇನ್ ಫುಲೆ, ವಿಕ್ಟೋರಿಯಾ ಸುಂದರ್ ರಾಜ್, ಬಕ್ಕಪ್ಪ ದಂಡಿನ, ಗಗನ ಫುಲೆ ಸೇರಿದಂತೆ ದಿವಂಗತ ಎಂ.ಎನ್. ಸುಂದರ ರಾಜ್ ಅವರ ಗೆಳೆಯರ ಬಳಗ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.