ದಾವಣಗೆರೆ ನಗರದ ರಿಂಗ್ ರಸ್ತೆಯಲ್ಲಿ ವಾಸವಿದ್ದ ನೂರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿ, ತಾಲೂಕಿನ ದೊಡ್ಡಬಾತಿಯ ಸಮೀಪದ ರಾಮಕೃಷ್ಣ ಹೆಗಡೆ ನಗರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಇಲ್ಲಿನ ನಿವಾಸಿಗಳು ಮೂಲ ಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ಮಳೆ ಬಂದು ಜನರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಜನರ ಒತ್ತಾಯದ ಮೇರೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ ಬಿ ವಿನಯ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಈ ವೇಳೆ ಇಲ್ಲಿ ವಾಸವಿರುವ ಜನರು ಸಮಸ್ಯೆಗಳ ಕುರಿತಂತೆ ಹೇಳಿಕೊಂಡರು. ಅನುಭವಿಸುತ್ತಿರುವ ಯಾತನೆ ಕುರಿತಂತೆ ನೋವಿನಿಂದಲೇ ಹೇಳಿದರು. ಸಮಸ್ಯೆಗಳ ಕರಾಳತೆ ಬಿಚ್ಚಿಟ್ಟ ಅವರು, “ಕಳೆದ 40 ವರ್ಷಗಳಿಂದ ರಿಂಗ್ ರಸ್ತೆಯಲ್ಲಿ ವಾಸವಿದ್ದ ಕುಟುಂಬಗಳ ಸ್ಥಳಾಂತರಕ್ಕೆ ಯಾರದ್ದೂ ವಿರೋಧ ಇಲ್ಲ. ಆದರೆ, ಶೆಡ್ನಲ್ಲಿ ವಾಸ ಮಾಡುತ್ತಿದ್ದೇವೆ. ಯಾವುದೇ ಸೌಲಭ್ಯಗಳಿಲ್ಲ. ರಸ್ತೆ ಇಲ್ಲ, ಚರಂಡಿ ಇಲ್ಲ. ಬಸ್ ವ್ಯವಸ್ಥೆ ಇಲ್ಲ. ಮಕ್ಕಳು ಶಾಲೆ, ಕಾಲೇಜಿಗೆ ಹೋಗಲು ನಡೆದುಕೊಂಡೇ ಹೋಗಬೇಕು. ಸಂಬಂಧಪಟ್ಟವರು ಕೇವಲ ಭರವಸೆ ನೀಡುತ್ತಿದ್ದಾರೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮನ್ನು ಏಕಾಏಕಿಯಾಗಿ ಸ್ಥಳಾಂತರ ಮಾಡಿದರು. ಇಲ್ಲಿ ಮನೆ ಕಟ್ಟಿಕೊಡುತ್ತೇವೆಂದು ಭರವಸೆ ಕೊಟ್ಟಿದ್ದರೂ ಕೂಡ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳೂ ಕೂಡಾ ಭರವಸೆಯನ್ನಷ್ಟೇ ಕೊಟ್ಟಿದ್ದರು. ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಗಾಳಿ, ಮಳೆಗೆ ಶೆಡ್ಗಳು ಹಾರಿವೆ. ಅದೃಷ್ಟವಶಾತ್ ನಮಗೆ ಏನೂ ತೊಂದರೆ ಆಗಿಲ್ಲ. ನಮಗೇನಾದರೂ ಆಗಿದ್ದರೆ ಯಾರು ಹೊಣೆ. ಇಲ್ಲಿಗೆ ಬಂದು ಐದು ತಿಂಗಳಾಗುತ್ತಾ ಬರುತ್ತಿದೆ. ವೋಟ್ ಕೇಳಲು ಬರುವುದು ಮುಖ್ಯವಲ್ಲ. ಅಧಿಕಾರದಲ್ಲಿದ್ದವರಿಗೆ ನಮ್ಮ ಸಮಸ್ಯೆ ಅರ್ಥವಾಗಿಲ್ಲ ಎಂಬುದೇ ನೋವಿನ ಸಂಗತಿ. ನಮ್ಮ ಕಷ್ಟ ಕೇಳಲು ನೀವಾದರೂ ಬಂದಿದ್ದೀರೆಂಬ ಸಂತಸವಿದೆ. ನಿಮ್ಮಂಥವರು ನಮಗೆ ಬೇಕು” ಎಂದು ಹೇಳಿದರು.
ಪಕ್ಷೇತರ ಅಭ್ಯರ್ಥಿ ಜಿ ಬಿ ವಿನಯ್ ಕುಮಾರ್ ಮಾತನಾಡಿ, “ನಾನು ಸ್ಥಳಕ್ಕೆ ಬಂದಿದ್ದೇನೆ. ಇಲ್ಲಿ ನೋಡಿದ್ದೇನೆ. ಯಾವ ರೀತಿ ಸಮಸ್ಯೆ ಇದೆ ಎಂಬುದು ಅರ್ಥವಾಯಿತು. ಕನಿಷ್ಟ ಸೌಲಭ್ಯವೂ ಇಲ್ಲದೆ ಇಲ್ಲಿ ವಾಸ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಜನರ ಸಮಸ್ಯೆ ಅರ್ಥವಾಗಿದೆ. ಎರಡು ಕಿಲೋಮೀಟರ್ ದೂರದವರೆಗೆ ಬಂದಿದ್ದೇವೆ. ಶೌಚಾಲಯವೂ ಇಲ್ಲ. ಹೆಣ್ಣು ಮಕ್ಕಳ ಪರಿಸ್ಥಿತಿ ತುಂಬಾನೇ ಕಷ್ಟ. ಮಕ್ಕಳು ಶಾಲೆಗೆ ಹೋಗುವುದು ದುಸ್ತರ. ಇಂಥ ಪರಿಸ್ಥಿತಿಯಲ್ಲಿ ಪೋಷಕರು ಏನು ಮಾಡಬೇಕೆಂದು ತೋಚುವುದಿಲ್ಲ. ಸಮಸ್ಯೆಗಳನ್ನು ಆಲಿಸಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ. ಸಂಸದನಾದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ವಿನಯ್ ಕುಮಾರ್ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ಲಂ ಜನರ ಮತ ಜಾಗೃತಿ ಸಮಾವೇಶ; ಸ್ಲಂ ಜನರ ಪ್ರಣಾಳಿಕೆ-2024 ಬಿಡುಗಡೆ
“ಸದ್ಯಕ್ಕೆ ಇಲ್ಲಿನ ಇಲ್ಲಿನ ಪರಿಸ್ಥಿತಿ ನೋಡಿದರೆ ಜನರು ವಾಸ ಮಾಡಲು ಯೋಗ್ಯವಾಗಿಲ್ಲ ಎಂಬುದು ಗೊತ್ತಾಗುತ್ತದೆ. ಐದು ತಿಂಗಳಾದರೂ ಮೂಲ ಸೌಲಭ್ಯಗಳಿಲ್ಲವೆಂದರೆ ಹೇಗೆ? ಮನೆಯಲ್ಲಿ ಏಳೆಂಟು ಜನರು ಇದ್ದರೆ ನಾಲ್ಕರಿಂದ ಆರು ಕೊಡ ನೀರು ಬರುತ್ತೆ ಅಷ್ಟೇ. ಬರಗಾಲದಲ್ಲಿ ನೀರು ಸಿಗದಿದ್ದರೆ ಏನು ಮಾಡಬೇಕು” ಎಂದು ಪ್ರಶ್ನಿಸಿದರು.
