ದೇವರ ಕಾರ್ಯಕ್ಕೆ ಮಾಡಿದ್ದ ಮಾಂಸಾಹಾರ ಸೇವಿಸಿದ ಬಳಿಕ ವಾಂತಿ ಭೇದಿಯಾಗಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಲಿಂಗಸುಗೂರು ತಾಲೂಕಿನ ಪರಂಪೂರ ತಾಂಡದಲ್ಲಿ ನಡೆದಿದೆ.
ಮಧ್ಯಾಹ್ನದ ಊಟದ ಬಳಿಕ ಸಂಜೆ ವೇಳೆಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಮಕ್ಕಳು ಹಿರಿಯರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥಗೊಂಡ 10 ಜನರನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಕುರಿತು ಗ್ರಾಮಸ್ಥ ಮಲ್ಲೇಶ್ ಮಾತನಾಡಿ, ʼಬುಧವಾರ ರಾತ್ರಿ ದೇವರ ಕಾರ್ಯ ಅಂಗವಾಗಿ ಮಾಡಿದ್ದ ಮೌಂಸಹಾರ ಸೇವಿಸಿದರು. ಸುಮಾರು 60 ಜನರು ಊಟ ಸೇವಿಸಿದ್ದಾರೆ. ಆದರೆ, ಅವರಲ್ಲಿ 15-20 ಜನರಿಗೆ ವಾಂತಿ ಭೇದಿ ಶುರುವಾಗಿದೆ. ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಗುಣಮುಖರಾಗಿದ್ದಾರೆʼ ಎಂದು ಹೇಳಿದರು.
ಕಲುಷಿತ ಆಹಾರ ಸೇವನೆಯೇ ತಾಲ್ಲೂಕಿನ ತಾಂಡಾ ನಿವಾಸಿಗಳಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳಲು ಕಾರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಪಾಟೀಲ ಮಾಕಾಪುರ ಮಾತನಾಡಿ, ‘ತಾಂಡಾಕ್ಕೆ ವೈದ್ಕಕೀಯ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದೆ. ಕಲಷಿತ ಆಹಾರ ಸೇವನೆಯಿಂದಾಗಿ ವಾಂತಿ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆಹಾರ ಮಾದರಿ ಪಡೆದು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ತಿಳಿಸಿದರು.
