ರಾಜ್ಯದಲ್ಲಿ ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಸುಮಾರು 5,000 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಅದರಲ್ಲಿ ಹೆಚ್ಚಿನ ಭೂಮಿ ಕೊಡಗು ಜಿಲ್ಲೆಯದ್ದಾಗಿದೆ ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
“ಅರಣ್ಯ ಇಲಾಖೆಯ ಲೆಕ್ಕ ಪರಿಶೋಧನಾ ವರದಿಯ ಪ್ರಕಾರ, ಒತ್ತುವರಿಯು ಭೋಗ್ಯಕ್ಕೆ ಪಡೆದ ಜಮೀನುಗಳಲ್ಲಾಗಿವೆ. ಆಸ್ತಿ ಮಾಲೀಕರು ಅವುಗಳನ್ನು ಹಿಂದಿರುಗಿಸಲು ಬಯಸದೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅತಿಕ್ರಮಣಕಾರರಲ್ಲಿ ಒಬ್ಬರು ‘ಟಾಟಾ ಕಾಫಿ‘ ಮಾಲೀಕರಾಗಿದ್ದಾರೆ. ವಿರಾಜಪೇಟೆಯಲ್ಲಿ ಬ್ರಿಟಿಷರು 99 ವರ್ಷಗಳ ಗುತ್ತಿಗೆಗೆ ಅರಣ್ಯ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಿದ್ದರು. ಆದರೆ, ಟಾಟಾ ಕಂಪನಿಯು ಈಗ ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲು ನಿರಾಕರಿಸಿ ಒಡೆತನದ ಹಕ್ಕು ಪಡೆದಿದೆ. ಥಾಮ್ಸನ್ ರಬ್ಬರ್ ಕಂಪನಿಯು ತನ್ನ ಜಮೀನನ್ನು ಬ್ಯಾಂಕ್ ಸಾಲಕ್ಕೆ ಒತ್ತೆ ಇಟ್ಟಿದ್ದು, ಬ್ಯಾಂಕ್ ಅದನ್ನು ಹರಾಜು ಹಾಕಿದೆ,” ಎಂದು ಹೇಳಿದ್ದಾರೆ.
“ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಇಲಾಖೆಯು ಮಾರ್ಕರ್ ರಬ್ಬರ್ ಲಿಮಿಟೆಡ್ನಿಂದ 454 ಕೋಟಿ ರೂ. ಮೌಲ್ಯದ 1,074 ಎಕರೆ, ಥಾಮ್ಸನ್ ರಬ್ಬರ್ನಿಂದ 91.29 ಕೋಟಿ ರೂ. ಮೌಲ್ಯದ 625 ಎಕರೆ, ನಿಲಂಬೂರ್ ರಬ್ಬರ್ನಿಂದ 130.22 ಕೋಟಿ ರೂ. ಮೌಲ್ಯದ 713 ಎಕರೆ, ಪೋರ್ಟ್ಲ್ಯಾಂಡ್ ರಬ್ಬರ್ ಎಸ್ಟೇಟ್ನಿಂದ 6 ಕೋಟಿ ರೂ. ಮೌಲ್ಯದ 286 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಬೇಕಾಗಿದೆ. ಗ್ಲೆನ್ ಲಾರೆನ್ ಪ್ಲಾಂಟೇಶನ್ ಮತ್ತು ಟಾಟಾ ಕಾಫಿ ಕಂಪನಿಯಿಂದ 524 ಕೋಟಿ ರೂ. ಮೌಲ್ಯದ 943 ಎಕರೆ ಹಾಗೂ ಹೊನ್ನಮಟ್ಟಿ ನೀಲಗಿರಿ ಪ್ಲಾಂಟೇಶನ್ನಿಂದ 25.36 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ” ಎಂದು ಅವರು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕೆಆರ್ಎಸ್ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ: ಹೈಕೋರ್ಟ್
“ಲೆಕ್ಕಪರಿಶೋಧನಾ ವರದಿ ಪ್ರಕಾರ ವಿರಾಜಪೇಟೆಯೊಂದರಲ್ಲೇ ಒತ್ತುವರಿದಾರರಿಂದ 1,601 ಕೋಟಿ ರೂ.ಗಳನ್ನು ದಂಡವಾಗಿ ಇಲಾಖೆ ಪಡೆಯಬೇಕಿದೆ. ಭೂಮಿ ಮತ್ತು ದಂಡ ವಸೂಲಿಗಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪರಿಸರ ಇಲಾಖೆ ಕಾರ್ಯದರ್ಶಿ ಬಿ.ಪಿ.ರವಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಆರು ತಿಂಗಳಿಂದ ಒಂದು ವರ್ಷದೊಳಗೆ ಇತ್ಯರ್ಥಪಡಿಸಲು ಹಿರಿಯ ವಕೀಲರನ್ನು ನೇಮಿಸಿಕೊಳ್ಳಲಾಗುತ್ತಿದೆ,” ಎಂದು ಖಂಡ್ರೆ ಹೇಳಿದ್ದಾರೆ.