ಮೈಸೂರಿನ ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಹಾಗೂ ರೋಬೋಟಿಕ್ ಸರ್ಜರಿ ಸಂಸ್ಥೆ ವೈದ್ಯಕೀಯ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ, ಡಾ ವಿಂಚಿ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಬಳಸಿ ಥೈರಾಯ್ಡ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಈ ಸಾಧನೆಯ ಮೂಲಕ, ಬಿಹೆಚ್ಐಓ ಸಂಸ್ಥೆ ತಲೆಯ ಮತ್ತು ಕುತ್ತಿಗೆಯ ಶಸ್ತ್ರಚಿಕಿತ್ಸೆಯಲ್ಲಿ ಮೈಸೂರಿನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ರೋಬೋಟಿಕ್ ವಿಧಾನವು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ಹಲವು ಮುಖ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಗೋಚರಿಸುವ ಗಾಯದ ಗುರುತು ಇಲ್ಲದ ಶಸ್ತ್ರಚಿಕಿತ್ಸೆ, ಕಡಿಮೆ ರಕ್ತಸ್ರಾವ, ಅತಿ ನಿಖರ ದೃಶ್ಯೀಕರಣ, ಶೀಘ್ರ ಚೇತರಿಕೆ, ಕಡಿಮೆ ಅವಧಿಯಲ್ಲೇ ಡಿಸ್ಚಾರ್ಜ್ ಆಗಬಹುದು.
ಶಸ್ತ್ರಚಿಕಿತ್ಸೆಯನ್ನು ಮುನ್ನಡೆಸಿದ ರೋಬೋಟಿಕ್ ಶಸ್ತ್ರಚಿಕಿತ್ಸಕ ಡಾ. ಎಂ. ವಿಜಯ್ ಕುಮಾರ್ ಮಾತನಾಡಿ,” ಇದು ಬಿಹೆಚ್ಐಓ ಗೂ ಮತ್ತು ಮೈಸೂರಿಗೂ ಐತಿಹಾಸಿಕ ಕ್ಷಣ. ರೋಬೋಟಿಕ್ ಥೈರಾಯ್ಡ್ ಶಸ್ತ್ರಚಿಕಿತ್ಸೆಯಿಂದ ನಾವು ಅತಿ ಚಿಕ್ಕ ಕತ್ತರಿಕೆಗಳ ಮೂಲಕ ಜಟಿಲ ಕಾರ್ಯಗಳನ್ನು ನೆರವೇರಿಸಬಹುದು. ಇದರಿಂದ, ರೋಗಿಗಳಿಗೆ ನೋವು ಕಡಿಮೆ ಇರುತ್ತದೆ, ಕಡಿಮೆ ಅವಧಿಯಲ್ಲಿ ಚೇತರಿಕೆ ಕಾಣಬಹುದು ಹಾಗೂ ಶಸ್ತ್ರಚಿಕಿತ್ಸೆಯ ಗುರುತು ಕೂಡಾ ಕಾಣಿಸುವುದಿಲ್ಲ ” ಎಂದು ಹೇಳಿದರು.
ಬಿಹೆಚ್ಐಓ ಕಾರ್ಯಾಧ್ಯಕ್ಷ ಡಾ. ಬಿ. ಎಸ್. ಅಜಯ್ ಕುಮಾರ್ ಮಾತನಾಡಿ “ ಮೈಸೂರಿನ ಜನತೆಗೆ ವಿಶ್ವಮಟ್ಟದ ಚಿಕಿತ್ಸೆ ತಲುಪಿಸುವ ನಮ್ಮ ಸಂಕಲ್ಪವನ್ನು ಈ ಸಾಧನೆ ಮತ್ತಷ್ಟು ಬಲಪಡಿಸಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ನಮ್ಮ ಪ್ರದೇಶದಲ್ಲೇ ಲಭ್ಯವಾಗುವಂತೆ ಮಾಡುವ ಬದ್ಧತೆಯೊಂದಿಗೆ ನಾವು ಮುಂದುವರೆಯುತ್ತೇವೆ.” ಎಂದು ಹೇಳಿದರು.

ಈ ಶಸ್ತ್ರಚಿಕಿತ್ಸೆಗೆ ಒಳಗಾದ ಯುವ ರೋಗಿ, ಥೈರಾಯ್ಡ್ ಕ್ಯಾನ್ಸರ್ ಹೊಂದಿದ್ದು, ಕುತ್ತಿಗೆಯಲ್ಲಿ ಗುರುತು ಬಯಸದ ಕಾರಣದಿಂದ ರೋಬೋಟಿಕ್ ವಿಧಾನ ಆಯ್ಕೆ ಮಾಡಿದರು. ಶಸ್ತ್ರಚಿಕಿತ್ಸೆಯ 48 ಗಂಟೆಗಳೊಳಗೆ ಡಿಸ್ಚಾರ್ಜ್ ಆಗಿ, ಉತ್ತಮವಾಗಿ ಚೇತರಿಕೆ ಕಂಡಿದ್ದಾರೆ. ರೋಬೋಟಿಕ್ ಥೈರಾಯ್ಡೆಕ್ಟಮಿ ವಿಧಾನವು ಸಾಮಾನ್ಯ ಓಪನ್ ಶಸ್ತ್ರಚಿಕಿತ್ಸೆಗಿಂತ ಹಲವಾರು ಲಾಭಗಳನ್ನು ಹೊಂದಿದೆ. ಕುತ್ತಿಗೆಯಲ್ಲಿ ಗೋಚರಿಸುವ ಗಾಯದ ಗುರುತು ಇರುವುದಿಲ್ಲ. ಶಸ್ತ್ರಚಿಕಿತ್ಸಾ ಗಾಯ ಮತ್ತು ರಕ್ತಸ್ರಾವ ಕಡಿಮೆ ಇರುತ್ತದೆ. 3D ದೃಶ್ಯೀಕರಣದಿಂದ ಹೆಚ್ಚಿನ ಶಸ್ತ್ರಚಿಕಿತ್ಸಾ ನಿಖರತೆ, ಕಡಿಮೆ ದಿನಗಳ ಆಸ್ಪತ್ರೆ ವಾಸ ಮತ್ತು ಶೀಘ್ರವಾಗಿ ಸಹಜ ಜೀವನಕ್ಕೆ ಮರಳ ಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಭ್ರಮದ ಜನಸ್ವಾತಂತ್ರ್ಯೋತ್ಸವ; ಸಂವಿಧಾನ ಸಂರಕ್ಷಣಾ ಪಡೆಗೆ ಚಾಲನೆ
ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಹಾಗೂ ರೋಬೋಟಿಕ್ ಸರ್ಜರಿ ಸಂಸ್ಥೆ ಮೈಸೂರಿನ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಮತ್ತು ಅತ್ಯಾಧುನಿಕ ಕನಿಷ್ಠ ಹಾನಿಕರ ಶಸ್ತ್ರಚಿಕಿತ್ಸೆಗಳ ಪ್ರಮುಖ ಕೇಂದ್ರವಾಗಿದೆ. ವಿಶ್ವದರ್ಜೆಯ ಡಾ. ವಿಂಚಿ ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಬಿಹೆಚ್ಐಓ, ನಿಖರ ವೈದ್ಯಕೀಯ ಸೇವೆ, ರೋಗಿಗಳ ಸುರಕ್ಷತೆ ಮತ್ತು ಉತ್ತಮ ಜೀವನಮಟ್ಟ ಕಾಪಾಡುವುದಕ್ಕೆ ಬದ್ಧವಾಗಿದೆ.