ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೀದರ್ ಜಿಲ್ಲೆಯ 6 ಮಂದಿಯ ಮೃತದೇಹಗಳನ್ನು ಸೋಮವಾರ ಸ್ವಗ್ರಾಮಕ್ಕೆ ತಂದಿದ್ದು, ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಮೂರು ಫ್ರೀಜ಼ರ್ ಆ್ಯಂಬುಲೆನ್ಸ್ ಮೂಲಕ ಲಾಡಗೇರಿ ಗ್ರಾಮಕ್ಕೆ ಮೃತದೇಹಗಳನ್ನು ತರಲಾಯಿತು. ಶವಗಳು ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸುಲೋಚನಾ, ಲಕ್ಷ್ಮಿ, ನೀಲಮ್ಮ, ಸಂತೋಷಕುಮಾರ್, ಸುನೀತಾ, ಕಲಾವತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದು, ಇವರೆಲ್ಲರೂ ಸೋದರ ಸಂಬಂಧಿಕರು ಎಂದು ತಿಳಿದುಬಂದಿದೆ.
ವಾರಾಣಸಿಯಿಂದ ಆ್ಯಂಬುಲೆನ್ಸ್ ಮೂಲಕ ತರಲಾದ ಮೃತದೇಹಗಳನ್ನು ಗುಮ್ಮೆ ಲೇಔಟ್ನಲ್ಲಿರುವ ರುದ್ರಭೂಮಿಯಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗಿದೆ.
ಫೆಬ್ರವರಿ 21ರಂದು ಕಾಶಿ ಬಳಿಯ ರೂಪಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಐವರು ಸಾವನ್ನಪ್ಪಿದರೆ, 7 ಮಂದಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಫೆಬ್ರವರಿ 23ರಂದು ಮತ್ತೊಬ್ಬರು ಕೊನೆಯುಸಿರೆಳೆದಿದ್ದರು.
ಈ ಸುದ್ದಿ ಓದಿದ್ದೀರಾ? ತೀರ್ಥಹಳ್ಳಿ | 15ನೇ ಮೈಲಿಗಲ್ಲು ಬಳಿ ಅಪಘಾತ; ಯುವಕರ ಕಾಲು ಮುರಿತ
ಲಾರಿಗೆ ಹಿಂಬದಿಯಿಂದ ರಭಸವಾಗಿ ಕ್ರೂಸರ್ ಡಿಕ್ಕಿಯಾದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಭಾನುವಾರ ಓರ್ವ ಗಾಯಾಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿತ್ತು. ಇನ್ನುಳಿದ 6 ಜನರಿಗೆ ಚಿಕಿತ್ಸೆ ಮುಂದುವರಿದಿದೆ.
“ಬೀದರ್ ಜಿಲ್ಲಾಡಳಿತ ಮೃತದೇಹಗಳನ್ನು ತರಲು ಸಾಕಷ್ಟು ಶ್ರಮಿಸಿದೆ. ಕುಂಭಮೇಳಕ್ಕೆ ತೆರಳಿದಾಗ ನಮ್ಮ ಜಿಲ್ಲೆಯಿಂದಲೇ ನಡೆದ ಎರಡನೇ ಅಪಘಾತ ಪ್ರಕರಣ ಇದಾಗಿದೆ. ಮೃತರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರು. ಅವರ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರವನ್ನು ಕೊಡಬೇಕು. ಅವರ ಮಕ್ಕಳು ಅನಾಥರಾಗಿದ್ದು, ಅವರನ್ನು ನೋಡಿದರೆ ಕರಳು ಕಿತ್ತುಬರುತ್ತದೆ. ಗಾಯಗೊಂಡವರು ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು” ಎಂದು ಕೋಲಿ ಸಮಾಜದ ಮುಖಂಡ ಜಗನ್ನಾಥ್ ಜಮಾದಾರ್ ಸರ್ಕಾರಕ್ಕೆ ಮನವಿ ಮಾಡಿದರು.
