ದೇಶಕ್ಕೆ ಸ್ವತಂತ್ರ ಬಂದು 76ವರ್ಷಗಳೇ ಕಳೆದರೂ ಹೆಣ್ಣು ಮಕ್ಕಳು ಇಂದಿಗೂ ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಗುಂಪು ಅತ್ಯಾಚಾರ, ವರದಕ್ಷಿಣೆ ಹಿಂಸಾಚಾರ, ವಧುದಹನ, ಆ್ಯಸಿಡ್ ದಾಳಿ, ಮರ್ಯಾದೆ ಗೇಡು ಹತ್ಯೆ, ಬಾಲ್ಯ ವಿವಾಹ, ಉದ್ಯೋಗ ಸ್ಥಳದಲ್ಲಿ ಲೈಂಗಿಕ ಶೋಷಣೆ, ಹೆಣ್ಣು ಮಕ್ಕಳ ಕಳ್ಳ ಸಾಗಣಿಕೆ ಹಾಗೂ ಭ್ರೂಣ ಹತ್ಯೆ ಹೀಗೆ ಹಲವಾರು ಮುಖಗಳಲ್ಲಿ ಮಹಿಳೆಯರು ದೌರ್ಜನ್ಯಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಎಐಎಂಎಸ್ಎಸ್ ರಾಜ್ಯ ಸದಸ್ಯೆ ಕಲ್ಯಾಣಿ ಎಂ.ವಿ ಹೇಳಿದ್ದಾರೆ.
ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ 900 ಹೆಣ್ಣುಭ್ರೂಣ ಹತ್ಯೆ ಇಡೀ ಸಮಾಜವನ್ನೇ ತಲ್ಲಣ ಗೊಳಿಸಿವೆ. ಪ್ರೀತಿಸಿದ ಯುವಕ ಯುವತಿ ಓಡಿ ಹೋದರೆಂದು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ತಿಳಿಸಿದ ಅಮಾನುಷ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಒಟ್ಟಾರೆಯಾಗಿ ಮಹಿಳೆ ಎಲ್ಲಾ ವಿಧದಲ್ಲೂ ಬಲುಪಶು ಆಗುವುದನ್ನು ನೋಡುತ್ತಿದ್ದೇವೆ” ಎಂದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ)ದ 2022ವರದಿಯ ಪ್ರಕಾರ ದೇಶದಲ್ಲಿ ಪ್ರತಿ 11ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ, ದಿನಕ್ಕೆ 90 ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿವೆ. 2009ರಿಂದ 2021ರವರೆಗೆ ಕೇವಲ ಎರಡು ವರ್ಷಗಳಲ್ಲಿ 13.13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗಿದ್ದಾರೆ.
ಚಂದ್ರನೆಡೆಗೆ ನೆಗೆದ ಇದೇ ಸಮಾಜದಲ್ಲಿ, ಇಂದಿಗೂ ಹೆರಿಗೆಯಾದ ಮೇಲೆ ಹಸಿ ಬಾಣಂತಿಯನ್ನು ಹುಟ್ಟಿದ ಹಸಿ ಗುಸಿನೊಂದಿಗೆ ಊರಾಚೆ ಗುಡಿಸಿಲಿನಲ್ಲಿ ಇಡುವ ಹಳೆಯ ಗೊಡ್ಡು ಸಂಪ್ರದಾಯವನ್ನು ನೋಡುತ್ತಿದ್ದೇವೆ. ಇತ್ತೀಚಿಗೆ ತುಮಕೂರಿನ ಗೊಲ್ಲರಹಟ್ಟಿಯಲ್ಲಿ ನಡೆದ ಘಟನೆ ನಮ್ಮ ಸಮಾಜದಲ್ಲಿ ಬೇರೂರಿವುದಕ್ಕೆ ಹಿಡಿದ ಕನ್ನಡಿ.
ಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಂತರ ಬಡ, ಕೆಳಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಗೌರವಿಯುತ ಕನಿಷ್ಠ ವೇತನ ವಾಗಲಿ ಸಾಮಾಜಿಕ ಭದ್ರತೆಯಾಗಲಿ ಕಾತ್ರಿ ಆಗುತ್ತಿಲ್ಲ ಎಂದು ಅವರು ದೂರಿದರು.
ಅಸಮಾನತೆ ಮತ್ತು ಅನ್ಯಾಯದ ಮೇಲೆ ನಿಂತಿರುವ ಬಂಡವಾಳಶಾಹಿ ವ್ಯವಸ್ಥೆಯು ಮಹಿಳೆಯರನ್ನು ಸೇರಿದಂತೆ ಇಡೀ ದುಡಿಯುವ ಜನ ಸಮುದಾಯವನ್ನೇ ಆರ್ಥಿಕ ಶೋಷಣೆಗೆ ಒಳಪಡಿಸಿದೆ. ಅಲ್ಲದೇ, ಮಹಿಳೆ ಉಳಿಗ ಮಾನ್ಯ ವ್ಯವಸ್ಥೆಯ ಪಳಿಯುಳಿಕೆಯಾದ ಹಳೆಯ ಮೌಲ್ಯ ಪ್ರಜ್ಞೆ, ಪುರುಷಪ್ರಧಾನ ಮನೋ ಧೋರಣೆಯ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾಳೆ.
ಈ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳಾ ಸಮುದಾಯವನ್ನು ಉನ್ನತ ನೀತಿ ಉನ್ನತ ನೈತಿಕತೆ ಆಧಾರದಲ್ಲಿ ಅವರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವಂತ ಅವರನ್ನು ವೈಚಾರಿಕವಾಗಿ ರಾಜಕೀಯವಾಗಿ ಸಂಸ್ಕೃತಿಕವಾಗಿ ಸಂಘಟಿಸಿ ಹೋರಾಟ ಕಟ್ಟುತ್ತಿರುವ ಎಐಎಂಎಸ್ಎಸ್ ಸಂಘಟನೆಯನ್ನು, ಇನ್ನು ಬಲಪಡಿಸಲು ಮತ್ತು ವಿಸ್ತರಿಸಲು ಏಳನೇ ರಾಜ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿದ್ದೇವೆ ಎಂದರು.
ಜನೇವರಿ ಆರು ಮತ್ತು ಏಳರಂದು ದಾವಣಗೆರೆಯಲ್ಲಿ ನಡೆಯುವ ಈ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ರೈತಾಪಿ ಮಹಿಳೆಯರು ಕೂಲಿ ಕಾರ್ಮಿಕರು, ಗ್ರಹಿಣಿಯರು, ಗಾರ್ಮೆಂಟ್ ಮಹಿಳೆಯರು, ದುಡಿಯುವ ಮಹಿಳೆಯರು, ವಿದ್ಯಾರ್ಥಿನಿಯರು ಸೇರಿದಂತೆ ವಿವಿಧ ಸ್ಥಳದ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಈ ಸಮ್ಮೇಳನವನ್ನು ಉದ್ಘಾಟನೆಯನ್ನು ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಐ ಎಂಎಸ್ಎಸ್ ಜಿಲ್ಲಾ ಸಂಚಾಲಕರಾದ ಶಿವಬಾಳಮ್ಮ ಕೊಂಡಗೋಳಿ, ಸದಸ್ಯರಾದ ಶಿವರಂಜನಿ, ರಾಜ್ಮಾ ಕಲಾದಗಿ ಉಪಸ್ಥಿತರಿದ್ದರು.