ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿರುವ ಮಾಧ್ಯಮ ಹಬ್ಬಕ್ಕೆ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರನ್ನು ಆಹ್ವಾನಿಸುತ್ತಿದೆ. ಅಜಿತ್ ಅವರನ್ನು ಆಹ್ವಾನಿಸುವ ವಿಶ್ವವಿದ್ಯಾನಿಲಯ ನಿರ್ಧಾರವನ್ನು ಪ್ರಗತಿಪರ ಚಿಂತಕರು, ಹೋರಾಟಗಾರರು, ವಿದ್ಯಾರ್ಥಿ ಯುವಜನರು, ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.
ಕುಲಪತಿಗಳು ಮತ್ತು ಕುಲಸಚಿವರನ್ನು ಶುಕ್ರವಾರ ಭೇಟಿ ಮಾಡಿದ ಮುಖಂಡರು, “ತುಮಕೂರು ವಿಶ್ವವಿದ್ಯಾಲಯ ಜಾತ್ಯತೀತ ಪರಂಪರೆಯನ್ನು ಹೊಂದಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಇಂತಹ ಮಹತ್ವದ ಪರಂಪರೆಯನ್ನು ಸಾರುತ್ತಿರುವ ವಿಶ್ವವಿದ್ಯಾಲಯದಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ, ವಿಛಿದ್ರಕಾರಿ ಸಂಗತಿಗಳನ್ನು ಪ್ರತಿಪಾದಿಸುವ ಕೋಮುವಾದಿ ಪತ್ರಕರ್ತ ಅಜಿತ್ ಹನುಮಕ್ಕನವ್ ಅವರನ್ನು ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು” ಎಂದು ಒತ್ತಾಯಿಸಿದ್ದಾರೆ.
“ತುಮಕೂರು ವಿವಿಯಲ್ಲಿ ರಾಜ್ಯಮಟ್ಟದ ಮಾಧ್ಯಮ ಹಬ್ಬ ನಡೆಯುತ್ತಿದೆ. ಇಂತಹ ಹಬ್ಬಕ್ಕೆ ಅಜಿತ್ ಹನುಮಕ್ಕನವರ್ ಅವರಿಂದ ಕೋಮುವಾದಿ ಭಾಷಣ ಮಾಡಿಸಲು ಹೊರಟಿರುವ ವಿವಿಯ ಕ್ರಮ ಪ್ರಶ್ನಾರ್ಹವಾಗಿದೆ. ಅಲ್ಲದೆ ವಿವಿಯ ಪರಂಪರೆಯನ್ನು ನಾಶ ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಶಾಂತಿ-ಸುವ್ಯವಸ್ಥೆಯನ್ನು ಹದಗೆಡಿಸುವ ಕೆಲಸ ಮಾಡಲಾಗುತ್ತಿದೆ” ಎಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿಶ್ವವಿದ್ಯಾನಿಲಯವು ತನ್ನ ನಿರ್ಧಾರ ಹಿಂಪಡೆಯದಿದ್ದರೆ, ವಿಶ್ವವಿದ್ಯಾನಿಲಯದ ಕ್ರಮವನ್ನು ಖಂಡಿಸಿ ಮತ್ತು ಇತ್ತೀಚೆಗೆ ಕೋಮುವಾದಿ ಚಟುವಟಿಕೆಗಳು ಹೆಚ್ಚಳವಾರುವುದರ ವಿರುದ್ಧ ಜುಲೈ 20ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.
ಭೇಟಿಯ ಸಮಯದಲ್ಲಿ ಸಿಂಡಿಕೇಟ್ ಮಾಜಿ ಸದಸ್ಯ ಕೊಟ್ಟಶಂಕರ್, ಪ್ರಗತಿಪರ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ, ಗೋಪಿನಾಥ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅರುಣ್, ವಕೀಲ ರಂಗಧಾಮಯ್ಯ, ಉಪನ್ಯಾಸಕ ಮೂರ್ತಿ, ವಕೀಲ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ಈ ಶಿವಣ್ಣ, ಹಳೆಯ ವಿದ್ಯಾರ್ಥಿ ಒಕ್ಕೂಟದ ಮುಖಂಡ ಎಚ್.ವಿ.ರಮೇಶ್, ಬಂಡೆಕುಮಾರ, ಮೂರ್ತಿ ಕೆಸ್ತೂರು, ವಾಸುದೇವ್ ಎನ್ ನಾದೂರ್, ಛಲವಾದಿ ಮಹಾಸಭಾದ ಶೇಖರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಇದ್ದರು.