ಗ್ರಾಮೀಣ ಭಾಗದಲ್ಲಿ ಅವಿಭಕ್ತ ಕುಟುಂಬಗಳು ಇರುವುದರಿಂದಲೇ ಸಮಾಜದಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಿದೆ ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ವೀರಭದ್ರಪ್ಪ ಅಭಿಪ್ರಾಯ ಪಟ್ಟರು
ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಬೀದರ್ ತಾಲೂಕಿನ ಕಂಗನಕೋಟ ಗ್ರಾಮದ ಓಂಕಾರ ಪಾಟೀಲ್ ಅವರ ತೋಟದಲ್ಲಿ ಎಳ್ಳ ಅಮಾವಾಸ್ಯೆ ನಿಮ್ಮಿತ್ತ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಸುಗ್ಗಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಪಟ್ಟಣಗಳಲ್ಲಿ ಒಬ್ಬರಿಗೊಬ್ಬರು ಅಪರಿಚಿತರಂತೆ ಇರುತ್ತಾರೆ. ಆದರೆ ಹಳ್ಳಿ ಗಳಲ್ಲಿ ಜನರು ಒಬ್ಬರಿಗೊಬ್ಬರು ಸೌಹಾರ್ದತೆಯಿಂದ ಬಾಳು ತ್ತಿರುವುದು ಸಂತಸದ ಸಂಗತಿಯಾಗಿದೆ” ಎಂದು ಅಭಿಪ್ರಾಯ ಪಟ್ಟರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ್ ಕುಲಕರ್ಣಿ ಅತಿಥಿಯಾಗಿ ಮಾತನಾಡಿ, “ಎಳ್ಳ ಅಮಾವಾಸ್ಯೆಯು ಸುಗ್ಗಿ ಹಬ್ಬವಾಗಿದೆ, ಕರ್ನಾಟಕದ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂಕೇತವಾಗಿದ್ದು, ಈ ಹಬ್ಬವನ್ನು ರೈತರು ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ. ಭೂಮಿತಾಯಿಗೆ ನೈವೇದ್ಯ ಅರ್ಪಿಸುವುದು, ಚರಗ ಚೆಲ್ಲುವುದು, ಹಳ್ಳಿಯ ಸೊಗಡುಗಳನ್ನು ಹಾಡುವುದು, ಜೋಕಾಲಿ ಆಟ, ಕೋಲಾಟ, ಮುಂತಾದವುಗಳನ್ನು ಏರ್ಪಡಿಸುವುದರಿಂದ, ಪಟ್ಟಣದಲ್ಲಿರುವ ಜನರನ್ನು ಹಳ್ಳಿಯ ಕಡೆ ಗಮನ ಹರಿಸುವಂತೆ ಮಾಡುತ್ತದೆ” ಎಂದರು.
“ಈ ಹಬ್ಬದ ಸುಗ್ಗಿಯಲ್ಲಿ ಬರುವಂತಹ ಬೇಳೆ ಕಾಳುಗಳು, ಕಡಲೆ, ತೊಗರಿ, ಅವರೇ, ಅಲಸಂದಿ ಮುಂತಾದ ಕಾಳುಗಳಿಂದ ತಯಾರಿಸಲ್ಪಟ್ಟ ಭಜ್ಜಿ ಪಲ್ಲೆಯು ವಿಶೇಷ ವಾಗಿರುತ್ತದೆ. ಇದರೊಂದಿಗೆ ಸಜ್ಜಿ ರೊಟ್ಟಿ, ಜೋಳದ ಅನ್ನ, ಅಂಬಲಿ, ನುಚ್ಚು, ಕಡುಬು ಮುಂತಾದವುಗಳು ಗ್ರಾಮೀಣ ಭಾಗದಲ್ಲಿ ತಯಾರಿಸಲ್ಪಡುವ ವಿಶಿಷ್ಟ ಮೃಷ್ಟಾನ್ನ ಭೋಜನ ವನ್ನು ತಯಾರಿಸಿ ಜಾತಿಭೇದ ವಿಲ್ಲದೆ ಎಲ್ಲರೂ ಸಮಾನತೆಯಿಂದ ಕೂಡಿ ಬೆಳೆ ಬೆಳೆದು ನಿಂತ ಹೊಲದಲ್ಲಿ ಆಚರಿಸುವ ಸಂಭ್ರಮದ ಹಬ್ಬವಾಗಿರುತ್ತದೆ. ಇಂತಹ ಹಬ್ಬದಿಂದ ಸಮಾಜದಲ್ಲಿ ಸಮಾನತೆಯಿಂದ ಕೂಡಿ ಬಾಳುವ ಮನೋಭಾವನೆ ಬೆಳೆಯುತ್ತದೆ” ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕರ್ನಾಟಕದ ಉತ್ತರ ಭಾಗದದಲ್ಲಿ ಆಚರಿಸುವ ಎಳ್ಳಮಾಸ್ಯೆಯು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಜನರು ಹಬ್ಬದ ರುಚಿಯನ್ನು ಸವಿಯಲು ಬರುತ್ತಾರೆ” ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ
ಕಾರ್ಯಕ್ರಮದಲ್ಲಿ ಪ್ರಮುಖರಾದ ಅಶೋಕ್ ಬೂದಿಹಾಳ್, ಸುನಿತಾ ಆನಂದ, ಗುರು ಪ್ರಸಾದ್ ಉಪ್ಪೆ, ಸಮ್ಮುಖ ಶಂಭು, ಅಭಿ ಶಂಭು, ಸಂತೋಷ, ಸಂಗೀತ, ಬಸವರಾಜ ದಯಾಸಾಗರ, ಸಿದ್ದರಾಮ್ ವಾಗ್ಮರೆ ಸೇರಿದಂತೆ ಮುಂತಾದವರಿದ್ದರು. ಓಂಕಾರ್ ವಿಜಯ್ ಕುಮಾರ್ ಉಪ್ಪೆ ಸ್ವಾಗತಿಸಿದರು, ಸಂಜುಕುಮಾರ ಸ್ವಾಮಿ ವಂದಿಸಿದರು.