ದುಡಿಯುವ ವರ್ಗ, ಕಾಯಕ ಜೀವಿಗಳ, ಜನಸಾಮಾನ್ಯರಿಂದ ಸೃಷ್ಟಿಯಾದ ವೈಚಾರಿಕ ನೆಲೆಯ ಬಸವಧರ್ಮವು ಜಗತ್ತು ಆಳಬಲ್ಲದು ಎಂಬ ಭಯದಿಂದ 12ನೇ ಶತಮಾನದಿಂದ ಇತೀಚಿನವರೆಗೆ ಅದರ ದಮನಕ್ಕೆ ಯತ್ನಿಸಲಾಗಿದೆ ಎಂದು ಹಿರಿಯ ಚಿಂತಕ ಆರ್.ಕೆ.ಹುಡಗಿ ಹೇಳಿದರು.
ಬಸವ ಧರ್ಮ ಪೀಠದಿಂದ ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಆಯೋಜಿಸಿರುವ 23ನೇ ಕಲ್ಯಾಣ ಪರ್ವ ಧರ್ಮ ಚಿಂತನ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ʼ12ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹ ಕಾರಣ ಕಲ್ಯಾಣ ಕ್ರಾಂತಿ ಘಟಿಸಿರುವುದು ಎಂಬುದು ಸುಳ್ಳು. ಮದುವೆಯಾದ ಇಬ್ಬರೂ ಶರಣರು ಲಿಂಗಾಯತರೇ ಆಗಿದ್ದರಿಂದ ಅದು ಅಂತರ್ಜಾತಿ ಮದುವೆ ಹೇಗಾಗುತ್ತದೆ? ಇದಲ್ಲದೆ ಅವರ ವೈಯಕ್ತಿಕ ಕಾರಣಕ್ಕಾಗಿ ವಚನ ಸಾಹಿತ್ಯ ಏಕೆ ಸುಡಲಾಯಿತು. ಶರಣರ ಕಗ್ಗೊಲೆ ಏಕೆ ನಡೆಯಿತುʼ ಎಂದು ಪ್ರಶ್ನಿಸಿದರು.
ʼಕರ್ನಾಟಕ ರಾಜ್ಯ ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಕೇಂದ್ರ ಶಿಪಾರಸು ಮಾಡಿದರೂ ಕೇಂದ್ರ ಸರ್ಕಾರ ಅದಕ್ಕೆ ಒಪ್ಪದೇ ನಿರಾಕರಿಸಿತು. ಇತ್ತೀಚೆಗೆ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ತಡ ಮತ್ತೆ ಬಸವಣ್ಣನವರ ವಿರುದ್ಧ ಪಿತೂರಿ ಶುರುವಾಗಿದೆ. ಬಸವಣ್ಣ ಮುಂದಿನ ದಿನಗಳಲ್ಲಿ ಭಾರತದ ಸಾಂಸ್ಕೃತಿಕ ನಾಯಕರಾಗಿ ಘೋಷಣೆಯಾದರೆ ನಮ್ಮ ಗತಿಯೇನು ಎಂದು ಭಯ ಹುಟ್ಟಿದೆ. ಹೀಗಾಗಿ ಮತ್ತೆ ಅದರ ವಿರುದ್ಧ ಧ್ವನಿ ಎತ್ತಿ ವಚನಗಳನ್ನು ತುಳಿಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆʼ ಎಂದರು.
ʼಇತ್ತೀಚೆಗೆ ವಚನ ದರ್ಶನ ಎಂಬ ಪುಸ್ತಕ ಬಿಡುಗಡೆ ಆಗಿದೆ. 12ನೇ ಶತಮಾನದಲ್ಲಿ ಶರಣರ ತತ್ವ ಒಪ್ಪದ ವಿರೋಧಿಗಳು ವಚನ ಸಾಹಿತ್ಯಕ್ಕೆ ಬೆಂಕಿ ಹಂಚಿ ಸುಟ್ಟಿದ್ದರು. ಅಂದು ಕೈಗೆ ಸಿಗದೇ ಉಳಿದಿರುವ ವಚನಗಳನ್ನು ಈಗ ನಿರ್ನಾಮ ಮಾಡುವ ದುರುದ್ದೇಶದಿಂದ ವಚನ ದರ್ಶನ ಪುಸ್ತಕ ಎಂಬ ಯಗ್ನಕುಂಡ ನಿರ್ಮಾಣ ಮಾಡಿದ್ದಾರೆ. ಶರಣರ ಧ್ಯೇಯ ಉದ್ದೇಶಗಳನ್ನು ದಾರಿ ತಪ್ಪಿಸುವ ಉದ್ದೇಶದಿಂದ ವಚನ ದರ್ಶನ ಗೃಂಥ ರಚಿಸಿ ಲಕ್ಷಾಂತರ ವೆಚ್ಚದಿಂದ ನಾಡಿನಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆʼ ಎಂದರು.

ʼನಾಡಿನಲ್ಲಿ ಲಿಂಗಾಯತ ಧರ್ಮವನ್ನು ಮನೆ-ಮನಕ್ಕೂ ತಲುಪಿಸಿದ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಹಾಗೂ ಲಿಂಗಾಯತ ತತ್ವಕ್ಕಾಗಿ ಜೀವ ಕಳೆದುಕೊಂಡ ಎಂ.ಎಂ.ಕಲಬುರ್ಗಿ ಅವರ ನೆನಪು ಅಜರಾಮರ ಆಗಲಿದೆ. ಲಿಂಗಾಯತ ಧರ್ಮದ ಲಾಂಛನ ಧರಿಸಿ ತೀರ್ಥಕ್ಷೇತ್ರಗಳಿಗೆ ಸುತ್ತಾಡುವ ಬದಲು ಶರಣರ ತತ್ವಕ್ಕೆ ಬದ್ಧರಾಗಿ ಶರಣರ ಆಶಯಗಳನ್ನು ಬದುಕಿನಲ್ಲಿ ಮೈಗೂಡಿಕೊಂಡರೆ ಬಸವಧರ್ಮ ಉಳಿಯುತ್ತದೆ, ಬಸವಣ್ಣ ದೇಶ, ಜಗತ್ತಿನ ಸಾಂಸ್ಕೃತಿಕ ನಾಯಕರಾಗುತ್ತಾರೆʼ ಎಂದು ತಿಳಿಸಿದರು.
ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಡಾ.ಮಾತೆ ಗಂಗಾದೇವಿ ಮಾತನಾಡಿ, ʼಬಸವಕಲ್ಯಾಣದಲ್ಲಿ ಕ್ರಾಂತಿ ನಡೆಸಿದ ಶರಣರು ವಿಶ್ವಕ್ಕೆ ವಚನ ಸಾಹಿತ್ಯ ನೀಡುವ ಮೂಲಕ ಮಾನವೀಯತೆಯನ್ನು ಬಿತ್ತಿದ್ದಾರೆ. ನಾವೆಲ್ಲರೂ ವಚನಗಳಲ್ಲಿ ಅಡಗಿರುವ ಮಾನವೀಯ ಮೌಲ್ಯಗಳನ್ನು ಅರಿಯಬೇಕು. ಡಾ.ಮಾತೆ ಮಹಾದೇವಿ ಅವರು ಬಸವ ತತ್ವ, ವಚನ ಸಾಹಿತ್ಯ ಉಳಿಸಿ ಬೆಳೆಸಲು ಕೈಗೊಂಡಿದ್ದ ಕಾರ್ಯಗಳು ಮುಂದೆವರೆಸಲು ಬಸವ ಭಕ್ತರು ತನು, ಮನ, ಧನದಿಂದ ಸಹಕಾರ ನೀಡಬೇಕುʼ ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದಲಿತರ ಮನೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ; ಪ್ರಶ್ನಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ
ಬೀದರ್ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಬೇಲೂರನ ಶಿವಕುಮಾರ ಸ್ವಾಮೀಜಿ, ಚಿಂತಕ ಸಂಜಯ ಮಾಕಲ್, ವಿಜಯಕುಮಾರ ಪಟ್ಟೆ, ಶಿವಕುಮಾರ ಸ್ವಾಮಿ ಮಾತನಾಡಿದರು. ಬಸವಕಲ್ಯಾಣ ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟಿಸಿದರು. ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಧ್ವಜಾರೋಹಣ ನೆರವೇರಿಸಿದರು. ಹಾಗೂ ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಬಸವಗುರು ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಬಸವ ಭಕ್ತರು ಪಾಲ್ಗೊಂಡಿದ್ದರು.