ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಕಲಾವಿದರ ಮಾಶಾಸನ ಎರಡು ಸಾವಿರದಿಂದ ₹5 ಸಾವಿರಕ್ಕೆ ಏರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಕರ್ನಾಟಕ ಜಾನಪದ ಅಕಾಡೆಮಿ ಸಹಕಾರದೊಂದಿಗೆ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ಒಕ್ಕೂಟದ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ, ಕ.ಕ. ವಿಭಾಗ ಮಟ್ಟದ ತತ್ವಪದಕಾರರ ಸಮಾವೇಶ, ಭಜನೆ ಸ್ಪರ್ಧೆ, ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ʼತತ್ವಪದಕಾರರ ಸಮಾವೇಶದಲ್ಲಿ ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ವೈಯಕ್ತಿಕವಾಗಿ ₹51 ಸಾವಿರ ಬಹುಮಾನ ಕೊಡುವುದಾಗಿ ಹೇಳಿದರು. ಕಲಾವಿದರ ಸಂಭಾವನೆ ಹೆಚ್ಚಳ ಬೇಡಿಕೆ, ಬೀದರನಲ್ಲಿ ಕಲಾವಿದರಿಗಾಗಿ ಸಮುದಾಯ ಭವನ ನಿರ್ಮಾಣಕ್ಕಾಗಿ 18 ಗುಂಟೆ ಜಮೀನು ಮಂಜೂರು ಮಾಡಿಸಲು ಪ್ರಯತ್ನ ಮಾಡಲಾಗುವುದುʼ ಎಂದು ಭರವಸೆ ನೀಡಿದರು.
ʼಆಧುನಿಕತೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಜನಪದ, ತತ್ಪಪದ, ಶರಣರ, ದಾಸರ ಹಾಡುಗಳ ಕೇಳುತ್ತಿದ್ದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ದುರಾಸೆ, ದುರ್ಗುಣಗಳಿಂದ ಸಂಬಂಧಗಳು ಕಲುಷಿತಗೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ ಭಜನೆ ತತ್ವಪದಗಳು ವ್ಯಕ್ತಿಯ ಮನಸ್ಸು ಹೃದಯ ಶಾಂತಗೊಳಿಸುತ್ತವೆ. ಈ ನಿಟ್ಟಿನಲ್ಲಿ ಒಕ್ಕೂಟ ಆಯೋಜಿಸಿದ ಸಮಾವೇಶ ಶ್ಲಾಘನೀಯʼ ಎಂದರು.

ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿ, ʼಪಾಶ್ಚಿಮಾತ್ಯ ಹಾಡುಗಾರರಿಗೆ, ನೃತ್ಯ ಮಾಡುವವರಿಗೆ ₹25 ಲಕ್ಷದವರೆಗೆ ಸಂಭಾವನೆ ನೀಡಲಾಗುತ್ತಿದೆ. ಆದರೆ ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಜನಪದ ಕಲಾವಿದರ ಬದುಕು ದಯನೀಯವಾಗಿದೆ. ಕಲಾವಿದರ ಏಳಿಗೆಗ ಸರ್ಕಾರ ಪ್ರಯತ್ನಿಸಬೇಕುʼ ಎಂದು ಆಗ್ರಹಿಸಿದರು.
ʼ2026ರಲ್ಲಿ ಯಾದಗಿರಿಯಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ತತ್ವಪದಕಾರರ ಸಮಾವೇಶ ಮತ್ತು ಭಜನಾ ಸ್ಪರ್ಧೆ ನಡೆಸುವ ಕುರಿತು ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಘೋಷಣೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ತಂಡಕ್ಕೆ ₹1 ಲಕ್ಷ ನೀಡುವುದಾಗಿ ಘೋಷಣೆ ಸಂತಸ ತಂದಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸರ್ಕಾರದ ಭರವಸೆ : ಕಾರಂಜಾ ಸಂತ್ರಸ್ತರ 926 ದಿನಗಳ ಹೋರಾಟ ಅಂತ್ಯ
ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸಿದರು. ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು ನೇತೃತ್ವ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ರಂಗ ಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ, ಡಾ.ಗುರಮ್ಮಾ ಸಿದ್ಧಾರೆಡ್ಡಿ, ಡಾ. ಸಿದ್ದಪ್ಪ ಹೊಟ್ಟಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅಮೃತರಾವ ಚಿಮಕೊಡೆ, ಹಾವಶೆಟ್ಟಿ ಪಾಟೀಲ, ಮಾಳಪ್ಪ ಅಡಸಾರೆ, ಸೇರಿದಂತೆ ಇತರರು ಉಪಸ್ಥಿತರಿದ್ದರು. ನವಲಿಂಗ ಪಾಟೀಲ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ಹಳ್ಳಿ ಸ್ವಾಗತಿಸಿದರು. ಸುನೀಲ ಭಾವಿಕಟ್ಟಿ ವಂದಿಸಿದರು. ಶಿವಕುಮಾರ ಪಾಂಚಾಳ ನಾಡಗೀತೆ ನಡೆಸಿಕೊಟ್ಟರು. ಬಸವರಾಜ ಬಳ್ಳಾರಿ ತಂಡದಿಂದ ಕುಚಿಪುಡಿ ನೃತ್ಯ ಜರುಗಿತು.
ಸಾಧಕರಿಗೆ ಸನ್ಮಾನ:
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ರಾಜೇಂದ್ರಸಿಂಗ್ ಪವಾರ್, ಮಲ್ಲಿಕಾರ್ಜುನ ಬಿರಾದಾರ, ಸೂರಜಸಿಂಗ್ ರಾಜಪುತ, ಭೀಮಸಿಂಗ್ ರಾಠೋಡ್, ನರಸಪ್ಪ ಭೂತೇರ್, ಹೀರಾಚಂದ್ ವಾಘಮಾರೆ, ನರಸಿಂಹಲು ಡಪ್ಪೂರ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರದಿಂದ ನಾಮನಿರ್ದೇಶನಗೊಂಡ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ ರಶ್ಮಿ ಎಸ್, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಪತ್ರಿಕೆಗಳ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಸಮಿತಿ ಸದಸ್ಯ ಪೃಥ್ವಿರಾಜ ಅವರನ್ನು ಸನ್ಮಾನಿಸಲಾಯಿತು.