ಔರಾದ, ಕಮಲನಗರ ತಾಲ್ಲೂಕಿನಲ್ಲಿ ಕಳೆದ ಕೆಲ ದಿನಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದ ಅಪಾರ ಬೆಳೆ ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ತಾಲೂಕುಗಳನ್ನು ಅತಿವೃಷ್ಟಿ ಪ್ರದೇಶಗಳೆಂದು ಘೋಷಿಸಿ, ಹಾನಿಗೊಳಗಾದ ಜನತೆಗೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ ಸಚಿವ, ಔರಾದ(ಬಿ) ಶಾಸಕ ಪ್ರಭು ಬಿ.ಚವ್ಹಾಣ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕರು ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ʼಕೆಲವು ದಿನಗಳಿಂದ ನಿರಂತರ ಧಾರಾಕಾರ ಮಳೆಯಾಗುತ್ತಿದೆ. ಆ.17ರಂದು ಒಂದೇ ದಿನ ಎರಡು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 300 ಎಂ.ಎಂ ಮಳೆ ದಾಖಲಾಗಿದೆ. ಪ್ರತಿ ವರ್ಷ ಬರಗಾಲ ಆವರಿಸುವ ಕ್ಷೇತ್ರದಲ್ಲಿ ಈ ಬಾರಿ ಸುರಿದ ಮಳೆಯ ಪ್ರಮಾಣವು ಸಾಮಾನ್ಯ ಮಿತಿಯನ್ನು ಮೀರಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಸೋಯಾಬೀನ್, ಉದ್ದು, ಹೆಸರು, ತೊಗರಿ, ಹತ್ತಿ ಮುಂತಾದ ಪ್ರಮುಖ ಕೃಷಿ ಬೆಳೆಗಳು ನೀರುಪಾಲಾಗಿವೆ. 100ಕ್ಕೂ ಮೇಲ್ಪಟ್ಟು ಜಾನುವಾರುಗಳು ಸಾವನಪ್ಪಿವೆʼ ಎಂದು ತಿಳಿಸಿದ್ದಾರೆ.
ಸಾಲ ಮಾಡಿ ಬೆಳೆದ ಬೆಳೆ ಹಾನಿಯಾದ ಪರಿಣಾಮ ರೈತರು ಕಂಗಲಾಗಿದ್ದಾರೆ. ಕೆಲವು ಗ್ರಾಮಗಳಿಗೆ ನೀರು ನುಗ್ಗಿದ ಪರಿಣಾಮ 50ಕ್ಕೂ ಅಧಿಕ ಮನೆಗಳು ಕುಸಿದು ಕುಟುಂಬಗಳು ಬೀದಿಗೆ ಬಂದಿವೆ. ಅಷ್ಟೇ ಅಲ್ಲದೆ, ನಂದಿ ಬಿಜಲಗಾಂವ-ಚಿಕ್ಲಿ ಸೇತುವೆ, ಸಾವರಗಾಂವ-ಹಂಗರಗಾ ಸೇತುವೆ ಸೇರಿ ಹಲವು ಸೇತುವೆ, ಕೆರೆ-ಕಟ್ಟೆಗಳು ಒಡೆದು ಹಾನಿ ಸಂಭವಿಸಿದೆ. ರಸ್ತೆ, ವಿದ್ಯುತ್ ಲೈನ್ಗಳು, ನೀರು ಸರಬರಾಜು ವ್ಯವಸ್ಥೆಗಳು ಹಾನಿಗೊಳಗಾಗಿದ್ದು, ಸಾರಿಗೆ, ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉಗ್ರಾಣ, ಶಾಲೆ, ಅಂಗನವಾಡಿಗಳು, ಸರ್ಕಾರಿ ಕಚೇರಿಗಳು ನೀರಿನಿಂದ ಹಾನಿಗೊಂಡು ಕಚೇರಿ ಕೆಲಸಗಳಿಗೂ ಅಡೆತಡೆಯಾಗುತ್ತಿದೆʼ ಎಂದರು.
ಈ ತುರ್ತು ಪರಿಸ್ಥಿತಿಯನ್ನು ಮನಗಂಡು, ಔರಾದ(ಬಿ) ವಿಧಾನಸಭಾ ಕ್ಷೇತ್ರದ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಕೂಡಲೇ ಅತಿವೃಷ್ಟಿ ಪೀಡಿತ ಪ್ರದೇಶಗಳೆಂದು ಘೋಷಿಸಿ, ಹಾನಿಗೊಳಗಾದ ಜನತೆಗೆ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾರೆ. ಇದೇ ವೇಳೆ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರಿಗೂ ಮನವಿ ಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಅಧಿಕ ಮಳೆ : 4 ತಿಂಗಳಲ್ಲಿ 101 ಜನ, 843 ಜಾನುವಾರು ಸಾವು; 15 ಸಾವಿರ ಹೆಕ್ಟೇರ್ ಬೆಳೆ ಹಾನಿ
ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಅತಿವೃಷ್ಟಿ ಪ್ರದೇಶಗಳೆಂದು ಘೋಷಿಸುವ ಭರವಸೆಯಿದೆʼ ಎಂದು ಶಾಸಕರು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.