ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತು ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೆ ಮಾಡಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬೀದರ್ ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಮಾತನಾಡಿ, “ಅಂಗಡಿ, ಮುಂಗಟ್ಟು, ಜಾಹೀರಾತು ಸೇರಿದಂತೆ ಇತರೆ ಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಡಿ.27 ರಂದು ನಡೆದ ಪ್ರತಿಭಟನೆ ವೇಳೆ ಪೊಲೀಸರು ವಿನಾಕಾರಣ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿರುವುದು ಖಂಡನೀಯವಾಗಿದೆ” ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ 25 ವರ್ಷಗಳಿಂದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಡಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕಾವೇರಿ ವಿವಾದ, ಗಡಿ ವಿವಾದ. ಮಹಾದಾಯಿ ವಿವಾದ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕರವೇ ನೇತ್ರತ್ವದ ಹೋರಾಟ ಮತ್ತು ಪಾತ್ರ ಪ್ರಮುಖವಾದದ್ದು, ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂದು ಸುಮಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ” ಎಂದರು.
“ಡಿ.27 ರಂದು ಬೆಂಗಳೂರು ಮಹಾನಗರದಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ನಡೆದ ಬೃಹತ್ ಜನಜಾಗೃತಿ ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದರು. ಈ ಹೋರಾಟಕ್ಕೆ ಸರ್ಕಾರ ಬೆನ್ನಿಗೆ ನಿಲ್ಲಬೇಕಿತ್ತು. ಆದರೆ ಪೋಲಿಸರು ವಿನಾಕಾರಣ ಟಿ.ಎ.ನಾರಾಯಣಗೌಡರ ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ, ಅವರನ್ನು ಬಂಧಿಸಿ ಜೈಲಿಗೆ ಕಳಿಸಿರುವುದು ಖಂಡನೀಯ” ಎಂದು ಕಿಡಿಕಾರಿದರು.

“ಇದು ನಾಡಿನ ನಿಷ್ಠಾವಂತ ಕನ್ನಡಪರ ಹೋರಾಟಗಾರನಿಗೆ ಮಾಡಿದ ಘೋರ ಅವಮಾನವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕರವೇ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಪೋಲಿಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ವಿನಾಕಾರಣ ಟಿ.ಎ. ನಾರಾಯಣಗೌಡರ ಜೊತೆ ಅಸಭ್ಯವಾಗಿ ನಡೆದುಕೊಂಡ ಡಿಸಿಪಿ ಲಕ್ಷ್ಮಿ ಪ್ರಸಾದ ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು. ಟಿ.ಎ.ನಾರಾಯಣಗೌಡ ಮತ್ತು ಕರವೇ ಕಾರ್ಯಕರ್ತರ ಮೇಲೆ ದಾಖಲಾದ ಸುಳ್ಳು ಪ್ರಕರಣ ವಾಪಸ್ ಪಡೆದು, ಕೂಡಲೇ ನಾರಾಯಣಗೌಡರನ್ನು ಬಿಡುಗಡೆಗೊಳಿಸಿ, ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು” ಎಂದು ಒತ್ತಾಯಿಸಿದರು.
“ಫೆಬ್ರುವರಿ 29 ರೊಳಗೆ ಬೀದರ ನಗರದ ಎಲ್ಲಾ ನಾಮಫಲಕಗಳು ಸರ್ಕಾರದ ಮಾರ್ಗಸೂಚಿ ಅನ್ವಯ ಅಳವಡಿಸಲು ನಗರಸಭೆ ಆಯುಕ್ತರು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಡಿ.27 ರಂದು ಬೆಂಗಳೂರಿನಲ್ಲಿ ನಡೆದ ಹೋರಾಟದ ರೀತಿಯಲ್ಲಿಯೇ ಬೀದರ ನಗರದಲ್ಲಿ ಹೋರಾಟವನ್ನು ನಡೆಸುತ್ತೇವೆ” ಎಂದು ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಕೆ ನೀಡಿದರು.
ಆಂಗ್ಲ ಭಾಷೆ ಪ್ಲೆಕ್ಸ್ ಗೆ ಕಪ್ಪು ಮಸಿ ಬಳಿದು ಆಕ್ರೋಶ :
ಪ್ರತಿಭಟನೆ ವೇಳೆ ನಗರದ ಎಸ್ಬಿಐ ಬ್ಯಾಂಕ್ ಮುಂಭಾಗದ ಮುಖ್ಯ ರಸ್ತೆ ಮಧ್ಯೆದಲ್ಲಿ ಕಂಬಕ್ಕೆ ಅಳವಡಿಸಿದ್ದ ಆಂಗ್ಲ ಭಾಷೆಯ ಜಾಹಿರಾತು ಫಲಕವನ್ನು ಕರವೇ ಅಧ್ಯಕ್ಷ ಸೋಮನಾಥ ಮುಧೋಳಕರ್ ಹರಿದು ಹಾಕಿದರು. ನಂತರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದೊಳಗಿನ ಭಾರತೀಯ ಏರ್ ಫೋರ್ಸ್ ಗೆ ಸೇರಿದ ಆಂಗ್ಲ ಭಾಷೆಯ ಜಾಹಿರಾತು ನಾಮಫಲಕ ತೆರೆವುಗೊಳಿಸಬೇಕೆಂದು ಕರವೇ ಕಾರುಕರ್ತರು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ʼಸ್ವಲ್ಪ ಸಮಯ ಕೊಡಿ, ಜಾಹಿರಾತು ಫಲಕ ತೆಗೆದುಹಾಕುತ್ತೇವೆʼ ಎಂದು ತಿಳಿಸಿದರು. ʼನೀವು ಪ್ಲೆಕ್ಸ್ ತೆಗೆಯುವವರೆಗೆ ನಾವು ತೆರಳುವುದಿಲ್ಲ, ನೀವು ತೆಗೆಯದಿದ್ದರೆ ನಾವೇ ತೆಗೆದು ಹಾಕುತ್ತೇವೆʼ ಎಂದು ಪಟ್ಟು ಹಿಡಿದರು. ಆಗ ಅಪರ ಜಿಲ್ಲಾಧಿಕಾರಿಗಳು ʼನೀವೇ ತೆಗೆಯಿರಿʼ ಎಂದು ಹೇಳಿದರು. ಕಾರ್ಯಕರ್ತರು ಆಂಗ್ಲ ಭಾಷೆಯ ನಾಮಫಲಕಕ್ಕೆ ಮಸಿ ಬಳಿದು ಹರಿದು ಬಿಸಾಕಿದರು.
ಈ ಸುದ್ದಿ ಓದಿದ್ದೀರಾ? ಕನ್ನಡ ಹೋರಾಟಗಾರರ ಕೈಗೆ ಕೋಳ ತೊಡಿಸಿದ್ದು ಸರಿಯೇ?
ಪ್ರತಿಭಟನೆಯಲ್ಲಿ ಕರವೇ ಬೀದರ್ ತಾಲೂಕಾಧ್ಯಕ್ಷ ವೀರಶೆಟ್ಟಿ ಗೌಸಾಪುರ, ಯುವ ಘಟಕ ಅಧ್ಯಕ್ಷ ವಿನಾಯಕರೆಡ್ಡಿ ಬುಧೇರಾ, ಜಿಲ್ಲಾ ವಿದ್ಯಾರ್ಥಿ ಘಟಕ ಅಧ್ಯಕ್ಷ ಶಶಾಂಕ ಭಾಲ್ಕೆ, ಔರಾದ ತಾಲೂಕಾಧ್ಯಕ್ಷ ಅನೀಲ ಬೇಲೂರೆ, ಭಾಲ್ಕಿ ತಾಲೂಕಾಧ್ಯಕ್ಷ ಗಣೇಶ ಪಾಟೀಲ್, ಕಮಲನಗರ ತಾಲೂಕಾಧ್ಯಕ್ಷ ಸುಭಾಷ ಗಾಯಕವಾಡ, ಸೇರಿದಂತೆ ಪ್ರಮುಖರಾದ ಸೋಮಶೇಖರ್ ಸಜ್ಜನ, ವಿವೇಕ ನಿರ್ಮಳೆ, ದತ್ತಾತ್ರಿ ಅಲ್ಲಮಕೇರೆ, ಉದಯಕುಮಾರ ಅಷ್ಟೂರೆ, ಸುಭಾಷ ಗಾಯಕವಾಡ , ನವೀನ ಬುಧೇರಾ, ವಿಶ್ವನಾಥ ಆಲೂರೆ, ರಾಕೇಶ ಮನ್ನಳ್ಳಿ ಸೇರಿದಂತೆ ಅನೇಕರಿದ್ದರು.