ಭಾರತೀಯ ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 150 ಯುವಕರಿಂದ ಒಂದು ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಮೂಲದ ಶಿವರಾಜ್ ವಟಗಲ್ ಮತ್ತು ಆತನ ಸಂಗಾತಿ ಭೀಮವ್ವ ವಿರುದ್ಧ ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೂಲತಃ ದಾವಣಗೆರೆ ಜಿಲ್ಲೆಯವನಾದ ಆರೋಪಿ ಶಿವರಾಜ್ ವಟಗಲ್ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಸುಳ್ಳು ಹೇಳಿ ಯುವಕರನ್ನು ನಂಬಿಸುತ್ತಿದ್ದ. ನಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಭಾರತೀಯ ಸೇನೆ, ವಾಯುಸೇನೆ ಹಾಗೂ ನೌಕಾಪಡೆಯಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಹಣ ತೆಗೆದುಕೊಳ್ಳುತ್ತಿದ್ದ. ಈತನಿಂದ ವಂಚನೆಗೆ ಒಳಗಾದ ಪ್ರಕಾಶ್ ಎಂಬುವವರು ಶಿವರಾಜ್ ವಟಗಲ್ ವಿರುದ್ಧ ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ದಳ ಜಂಟಿಯಾಗಿ ಕಾರ್ಯಾಚರಣೆಗಿಳಿದಿತ್ತು. ಅಕ್ಟೋಬರ್ 20ರಂದು ಚಿತ್ರದುರ್ಗದಲ್ಲಿ ವಂಚಕ ಶಿವರಾಜ್ ಮತ್ತು ಆತನ ಸಂಗಾತಿ ಭೀಮವ್ವರನ್ನು ಬಂಧಿಸಿ, ಆತನ ಬಳಿ ಇದ್ದ ನಕಲಿ ಗುರುತಿನ ಚೀಟಿಗಳು ಮತ್ತು ಸೇನಾ ನೇಮಕಾತಿ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ, ಚಿತ್ರದುರ್ಗ ಮಾತ್ರವಲ್ಲದೇ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಶಿವರಾಜ ವಂಚನೆ ಮಾಡಿರುವುದು ಬಯಲಾಗಿದೆ.