ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತದೆ. ಇಲ್ಲಿಗೆ ಯಾವುದೇ ಸಂಘಟನೆ ಬಂದರೂ ಹೊಡೆತ ಬೀಳುವುದು ನಮಗೆ ಎಂಬುದನ್ನು ಗಮನಿಸಬೇಕಾಗುತ್ತದೆ. ಹಾಗಾಗಿ, ʼಬೆಳಗಾವಿ ಚಲೋʼ ಕೈ ಬಿಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪೊಲೀಸರು ಮತ್ತು ಜಿಲ್ಲಾಧಿಕಾರಿ ಮಾಹಿತಿ ಕೊಟ್ಟಿದ್ದಾರೆ. ಇಬ್ಬರ ನಡುವೆ ನಡೆದ ಜಗಳವಷ್ಟೇ ಅದು. ಯಾವುದೇ ಸಂಘಟನೆ, ಭಾಷೆಗೆ ಹೋಗಬಾರದು ಎಂಬುದು ನಮ್ಮ ಮನವಿ. ಈ ರೀತಿಯ ಘಟನೆಗಳು ಹೊಸದೇನೂ ಅಲ್ಲ. ಇಡೀ ರಾಜ್ಯದಲ್ಲಿ ಪ್ರತಿದಿನ ಒಂದು ಕಡೆ ನಡೆಯುತ್ತವೆ. ಆದರೆ, ಅದು ಅಲ್ಲಿಯೇ ಮುಗಿಯುತ್ತದೆ. ಪೊಲೀಸ್ ಠಾಣೆಗೆ ಬಸ್ಸನ್ನೇ ತೆಗೆದುಕೊಂಡು ಹೋದ ಉದಾಹರಣೆಗಳೂ ಸಾಕಷ್ಟಿವೆ. ಪೊಲೀಸರು ಮತ್ತು ಕಾನೂನಿಗೆ ಆ ವಿಚಾರವನ್ನು ಬಿಡಬೇಕು. ಕನ್ನಡ-ಮರಾಠಿ ಸಂಘಟನೆಯೆಂದು ಬಿಂಬಿಸಬಾರದು” ಎಂದರು.
“ಪೊಲೀಸರು ಎರಡೂ ಕಡೆ ತನಿಖೆ ಮಾಡುತ್ತಿದ್ದಾರೆ. ಆದರೆ, ಪೋಕ್ಸೊ ಪ್ರಕರಣ ದಾಖಲಿಸಬಾರದಿತ್ತು. ನೂರು ಜನರ ಮುಂದೆ ನಡೆದಿರುವ ಘಟನೆ ಇದು. ಹಾಗಾಗಿ, ಆ ಪ್ರಶ್ನೆ ಬರುವುದಿಲ್ಲ. ಇದರಲ್ಲಿ ಪೊಲೀಸರಿಂದ ತಪ್ಪಾಗಿದೆ ಎಂಬುದೂ ಕೂಡ ನನ್ನ ಭಾವನೆ. ಮುಂದೆ ಕಾನೂನಿನಲ್ಲಿ ಸರಿಮಾಡಲು ಅವಕಾಶವಿದೆ. ಅದೊಂದು ಸಾಮಾನ್ಯ ಕೇಸ್ ಆಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸರಕಾರದ ಹೆಸರು ಕೆಡಿಸುವ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ – ಕೃಷ್ಣ ಶೆಟ್ಟಿ
“ಎರಡೂ ಕಡೆಯ ಬಸ್ಗಳಿಗೆ ಮಸಿ ಬಳಿಯುವ ಕೆಲಸವಾಗಿದೆ. ಕೊನೆಯದಾಗಿ ತೊಂದರೆಯಾಗುವುದು ಬೆಳಗಾವಿ ಮತ್ತು ಸರ್ಕಾರಕ್ಕೆ. ಇಂಥ ಘಟನೆಗಳು ನಡೆಯುವುದರಿಂದ ನೇರವಾಗಿ ಬೆಳಗಾವಿಗೆ ನಷ್ಟವಾಗುತ್ತದೆ. ಬೆಳೆಯುತ್ತಿರುವ ಬೆಳಗಾವಿಯನ್ನು ನಾವು ಪ್ರೋತ್ಸಾಹಿಸಬೇಕೇ ಹೊರತು ಇಂಥ ಘಟನೆಗಳನ್ನು ಪ್ರೋತ್ಸಾಹಿಸಬಾರದು” ಎಂದು ಹೇಳಿದರು.
“ಜಲಲ್ಪುರದಲ್ಲಿ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ನಾಳೆ ಮೃತದೇಹಗಳು ಬರಲಿವೆ. ನಮ್ಮ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಗೋಕಾಕ್ ಡಿವೈಎಸ್ಪಿ ಅವರು ಈಗಾಗಲೇ ಜಲಲ್ಪುರ ಪೊಲೀಸರ ಜತೆಗೆ ಮಾತನಾಡಿದ್ದಾರೆ. ಇಂದು ಬೆಳಿಗ್ಗೆಯೇ ಜಲಲ್ಪುರದಿಂದ ಮೃತದೇಹಗಳು ಬೆಳಗಾವಿ ಕಡೆ ಬರುತ್ತಿವೆ” ಎಂದು ಮಾಹಿತಿ ನೀಡಿದರು.