ಮುಧೋಳ ತಾಲೂಕಿನ ಲೋಕಾಪುರ ಗ್ರಾಮದ ಬಳಿ, ರೈತ, ಕಷ್ಟಪಟ್ಟು ಸೇವಂತಿ ಹಾಗೂ ಚೆಂಡು ಹೂ ಕೃಷಿ ಮಾಡಿದ್ದು, ಅಲ್ಪ ಸ್ವಲ್ಪ ನೀರಲ್ಲಿ ಬೆಳೆದ ಸೇವಂತಿ, ಚೆಂಡು ಹೂವಿಗೆ ಪಕ್ಕದಲ್ಲಿರುವ ಕೇಶವ್ ಸಿಮೆಂಟ್ ಕಾರ್ಖಾನೆಯ ಧೂಳು ಕಂಟಕವಾಗಿ ಪರಿಣಮಿಸಿದ್ದು, ಬೆಳೆ ಹಾನಿಯ ಆತಂಕ ಎದುರಿಸುತ್ತಿದ್ದಾರೆ.
ರೈತನಿಗೆ ಒಂದು ಕಡೆ ಮಳೆ ಇಲ್ಲದೆ ತೊಂದರೆ ಆದರೆ, ಇನ್ನೊಂದು ಕಡೆ ಅಂತರ್ಜಲ ಕೂಡ ಬತ್ತಿ ಹೋಗಿದೆ. ಮೊದಲೇ ಬರಗಾಲ ಬಿದ್ದು, ಎಲ್ಲ ಬೆಳೆ ಕೈ ಕೊಟ್ಟು ಬರಗಾಲದಿಂದ ರೈತರು ಕಂಗಲಾಗಿದ್ದಾರೆ. ಇಂಥಹ ಸಂದರ್ಭದಲ್ಲೂ ಕೂಡ ಮಲ್ಲಪ್ಪ ಕುರಿ ಎಂಬ ರೈತ ಹೂವು ಬೆಳೆ ಬೆಳೆದಿದ್ದಾರೆ.
ಬರದಲ್ಲೂ ಸಮೃದ್ಧವಾಗಿ ಬೆಳೆದ ಹೂವಿಗೆ ಪಕ್ಕದಲ್ಲಿರುವ ಕೇಶವ ಸಿಮೆಂಟ್ ಕಾರ್ಖಾನೆಯ ದೂಳು ಮೆತ್ತಿಕೊಂಡು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಿಮ್ಮ ಕಾರ್ಖಾನೆ ಧೂಳಿನಿಂದ ಇಷ್ಟೊಂದು ಪ್ರಮಾಣದಲ್ಲಿ ನಷ್ಟವಾಗಿದೆ. ಪರಿಹಾರ ಕೊಡಿ ಎಂದು ಕೇಳಿದರೆ, ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ರೈತರಿಗೆ ಸ್ಪಂದನೆ ನೀಡಿಲ್ಲ ಎಂದು ರೈತ ಆರೋಪಿಸಿದ್ದಾರೆ.
ಈ ಬಗ್ಗೆ ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಅಲ್ಲದೆ, ಪರಿಸರ ಇಲಾಖೆಗೂ ರೈತ ದೂರು ನೀಡಿದ್ದಾರೆ. ಆದರೇ ಯಾರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಪರಿಹಾರ ನೀಡಬೇಕು ಇಲ್ಲದಿದ್ದರೆ ನಾನು ಕಾರ್ಖಾನೆ ಮುಂದೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರೈತ ತಮ್ಮ ದುಃಖ ಹೋರಹಾಕುತ್ತಾರೆ.
ರೈತ ಮಲ್ಲಪ್ಪ ಮತ್ತೊಬ್ಬ ರೈತನ ಬಳಿ ವರ್ಷಕ್ಕೆ 75 ಸಾವಿರ ಕೊಟ್ಟು ಐದು ಎಕರೆ ಲಾವಣಿ ಮೇಲೆ ಪಡೆದಿದ್ದಾರೆ. ನಾಲ್ಕು ಎಕರೆಯಲ್ಲಿ ಸೇವಂತಿ ಒಂದು ಎಕರೆಯಲ್ಲಿ ಚಂಡು ಹೂವನ್ನು ಬೆಳೆದಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ ಒಂದುವರೆ ಲಕ್ಷ ಖರ್ಚು ಮಾಡಿದ್ದಾರಂತೆ ರೈತ. ಆದರೆ, ಸುಂದರವಾಗಿ ಬೆಳೆದ ಹೂವಿಗೆ ನಿತ್ಯ ನಿರಂತರವಾಗಿ ಕೇಶವ ಸಿಮೆಂಟ್ ಕಾರ್ಖಾನೆಯ ಧೂಳು ಸೇವಂತಿ ಹಾಗೂ ಚಂಡು ಹೂವು ಮೇಲೆ ಬೀಳುತ್ತಿದ್ದು, ಸೇವಂತಿ ಹೂಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಹೂವಿನ ಸೈಜ್ ಕೂಡ ಚಿಕ್ಕದಾಗಿದೆ. ಹೂವು ಕಪ್ಪು ಬಣ್ಣಕ್ಕೆ ತಿರುಗಿದ್ದು, ಮಾರುಕಟ್ಟೆಯಲ್ಲಿ ಇವರ ಹೂವನ್ನು ಖರೀದಿಸಲು ಯಾರು ಮುಂದೆ ಬರುತ್ತಿಲ್ಲ. ಐದು ಎಕರೆಗೆ ಸಂಬಂಧಪಟ್ಟಂತೆ ಸುಮಾರು 8 ಲಕ್ಷ ರೂಪಾಯಿ ಇವರಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ಕೊಡಬೇಕೆಂದು ರೈತ ಆಗ್ರಹಿಸುತ್ತಿದ್ದಾರೆ.
ಈ ಸಮಸ್ಯೆ ಮಲ್ಲಪ್ಪ ಕುರಿ ರೈತರದ್ದು, ಮಾತ್ರವಲ್ಲ, ಅಕ್ಕ ಪಕ್ಕದಲ್ಲಿರುವ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಕೂಡ ಸಿಮೆಂಟ್ ಕಾರ್ಖಾನೆಯ ದೋಳಿಗೆ ಬಲಿಯಾಗಿವೆ. ಇದರಿಂದ ಲೋಕಾಪುರ ಗ್ರಾಮದ ರೈತರು ಕಾರ್ಖಾನೆಯ ವಿರುದ್ದ ತಿರುಗಿ ಬಿದ್ದಿದ್ದಾರೆ.
ಕಾರ್ಖಾನೆ ಧೂಳಿನಿಂದ ಕನಿಷ್ಠ ಎಂದರೂ ಎರಡು ನೂರರಿಂದ ಎರಡುವರೆ ನೂರು ಎಕರೆ ಹಾಳಾಗುತ್ತಿದೆ. ರೈತರಿಗೆ ಕಾರ್ಖಾನೆಗಳು ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಪರಿಹಾರ ಕೇಳಿದರೆ ಇಂದು-ನಾಳೆ ಹಾಗೂ ಮಾಲೀಕರು ವಿದೇಶದಲ್ಲಿದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ಈ ಬಗ್ಗೆ ರೈತರು ಗರಂ ಆಗಿದ್ದು, ಕಾರ್ಖಾನೆ ಆಡಳಿತ ಮಂಡಳಿಗೆ ಎರಡು ದಿನ ಕಾಲಾವಕಾಶ ಕೊಡುತ್ತೇವೆ. ರೈತರಿಗೆ ಸೂಕ್ತ ಪರಿಹಾರ ಕೊಡದಿದ್ದರೆ ಕಾರ್ಖಾನೆ ಬಂದ್ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.