ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಅಮನ್ ಗೋಟ್ ಫಾರ್ಮ್ ವತಿಯಿಂದ ಸೋಮವಾರ ಸಾಯಂಕಾಲ ಯಾಸೀನ್ ಗಬ್ಬೂರ ಅವರ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದ ಈದ್ ಮಿಲನ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಬಸವೇಶ್ವರ ಸರ್ಕಲ್ಗೆ ಹೊಂದಿಕೊಂಡಿರುವ ಬ್ರಿಡ್ಜ್ ಪಕ್ಕದ ತೊಂಡಿಹಾಳ ರಸ್ತೆಯ ಯಾಸೀನ್ ಗಬ್ಬೂರ ಅವರ ತೋಟದ ಮನೆಯಲ್ಲಿ ಸ್ಥಳೀಯ ಜನರೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಈದ್ ಮಿಲನ್ ಕಾರ್ಯಕ್ರಮವನ್ನು ನೆರವೇರಿತು.
ಪವಿತ್ರ ರಂಝಾನ್ ತಿಂಗಳಿನಾದ್ಯಂತ ಉಪವಾಸ ಆಚರಿಸಲು ಅನುಗ್ರಹ ಒದಗಿಸಿದ ದೇವನಿಗೆ ಕೃತಜ್ಞತೆ ಸಲ್ಲಿಸುವ ಈದುಲ್ ಫಿತ್ರ್ ಹಬ್ಬದ ಸಂಭ್ರಮ ಮತ್ತು ಸಂದೇಶವನ್ನು ಮುಸ್ಲೀಮೇತರ ಸರ್ವಧರ್ಮೀಯ ಬಂಧುಗಳೊಂದಿಗೆ ಹಂಚಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಕನ್ನಡ ಖ್ಯಾತ ವಾಗ್ಮಿ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ರಂಝಾನ್ ಹಾಗೂ ಈದುಲ್ ಫಿತ್ರ್ ಹಬ್ಬದ ಮಹತ್ವ ಹಾಗೂ ಅದರ ಸಂದೇಶವನ್ನು ವಿವರಿಸಿದರು. ರಂಝಾನ್ ಉಪವಾಸದ ಪ್ರಮುಖ ಉದ್ದೇಶಗಳಾದ ಆಧ್ಯಾತ್ಮಿಕತೆ, ಸಹಾನುಭೂತಿ ಹಾಗೂ ಸೌಹಾರ್ದತೆಯ ಮೌಲ್ಯಗಳ ಕುರಿತು ಮಾತನಾಡಿದರು.
ತಮ್ಮ ಭಾಷಣದುದ್ದಕ್ಕೂ ಈದುಲ್ ಫಿತ್ರ್ ಹಬ್ಬದ ಮೂಲಕ ಸಮಾಜದಲ್ಲಿ ಸಹೋದರತ್ವ, ದಾನಧರ್ಮ ಹಾಗೂ ಮಾನವೀಯತೆಯ ಪ್ರಾಧಾನ್ಯತೆಯನ್ನು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸಲು ಶಾಸಕರು, ಅಧಿಕಾರಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಚರ್ಚೆ
ಈ ಸಂದರ್ಭದಲ್ಲಿ ಜಮಾತ್ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಸಯೀದ್ ಅಹ್ಮದ್ ಕೊತ್ವಾಲ್, ಹಿರಿಯರಾದ ಸೈಯದ್ ಬಾವುದ್ದೀನ್ ಖಾಜಿ, ಮಹಾಂತಗೌಡ ಪಾಟೀಲ್, ಗಂಗಯ್ಯ ಹಿರೇಮಠ ಸರ್, ನಾಗಪ್ಪ ಕಳ್ಳಿಗುಡ್ಡ, ಬಸವರಾಜ ಪಾಟೀಲ್, ಯಮನೂರಸಾಬ ವಾಲಿಕಾರ, ಹಸನಸಾಬ ಕೃಷ್ಣಾಪೂರ ಸೇರಿದಂತೆ ಸ್ಥಳೀಯ ಹಿರಿಯರು ಮತ್ತು ಗ್ರಾಮಸ್ಥರು ಭಾಗವಹಿಸಿ, ಧಾರ್ಮಿಕ ಸೌಹಾರ್ದತೆಯ ಸಂದೇಶವನ್ನು ಹಂಚಿಕೊಂಡರು.
ವಿಶೇಷವಾಗಿ ಹಲವು ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜದಲ್ಲಿ ಸಹೋದರತ್ವ ಮತ್ತು ಸಾಂಸ್ಕೃತಿಕ ಸಾಮರಸ್ಯವು ಎಲ್ಲೆಡೆ ಹರಡಲಿ ಎಂಬ ಆಶಯ ವ್ಯಕ್ತಪಡಿಸಿದರು.