ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ, ಬೇಡರಬೂದಿಹಾಳ, ಹಂಗರಗಿ ಗ್ರಾಮಗಳಲ್ಲಿ ರೈತರ ಒಪ್ಪಿಗೆ ಇಲ್ಲದೆ ಕೈಗಾರಿಕೆ ವಸಾಹತು ಸ್ಥಾಪನೆಗೆ ಕೆಐಎಡಿಬಿ 2218 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಜೆ.ಟಿ ಪಾಟೀಲ ಮನವಿ ಸಲ್ಲಿಸಿದ್ದಾರೆ.
ಶಾಸಕರಾಗಿ ಆಯ್ಕೆಯಾದ ಬಳಿಕ ಹಲಕುರ್ಕಿ ಗ್ರಾಮದ ನೂರಾರು ರೈತರು ಪಾಟೀಲ ಅವರನ್ನು ಬಾಗಲಕೋಟೆ ಐಬಿಯಲ್ಲಿ ಭೇಟಿಯಾಗಿ ತಮ್ಮ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ರದ್ದು ಪಡಿಸಬೇಕೆಂದು ಮನವಿ ಸಲ್ಲಿಸಿದ್ದರು. ಈ ಮನವಿ ಸ್ವೀಕರಿಸಿದ ಶಾಸಕ ಜೆ ಟಿ ಪಾಟೀಲ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಖುದ್ದು ಭೇಟಿಯಾಗಿ ಹಲಕುರ್ಕಿ ರೈತರ ಭಾವನೆಗಳನ್ನು ಅವರ ಗಮನಕ್ಕೆ ತಂದು ಭೂಸ್ವಾಧೀನ ಪ್ರಕ್ರಿಯೆ ರದ್ದು ಪಡಿಸಲು ವಿನಂತಿಸುವುದಾಗಿ ಭರವಸೆ ನೀಡಿದ್ದರು.
ಆರು ತಿಂಗಳುಗಳ ಹಿಂದೆ ರೈತರು ಭೂಸ್ವಾಧೀನ ವಿರುದ್ಧ ಹೋರಾಟ ಆರಂಭಿಸಿದಾಗ ಜೆ ಟಿ ಪಾಟೀಲ ಅವರು ಮೊದಲ ದಿನದಿಂದಲೂ ರೈತರ ಜತೆಗಿದ್ದು ಬೆಂಬಲ ವ್ಯಕ್ತಪಡಿಸಿದ್ದರು. ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಲಕುರ್ಕಿ ರೈತರು ಬಾದಾಮಿಯಲ್ಲಿ ಭೇಟಿಯಾಗಿ ಮನವಿ ಕೊಟ್ಟಾಗ ಭೂಸ್ವಾಧೀನ ಪ್ರಕ್ರಿಯೆ ರದ್ದು ಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಭರವಸೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಮಗ್ರ ಅಭಿವೃದ್ಧಿಗೆ 21 ಅಂಶಗಳ ಪ್ರಸ್ತಾವನೆ ಸಲ್ಲಿಕೆ
ಭೂಸ್ವಾಧೀನ ಪ್ರಕ್ರಿಯೆ ರದ್ದು ಪಡಿಸುವಂತೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದರು. ಈಗ ಅವರದೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನಾಯಕರ ಮೇಲೆ ಭರವಸೆ ಇಟ್ಟು ಹಲಕುರ್ಕಿ ಗ್ರಾಮದ ಮತದಾರರು ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಮತಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲಕುರ್ಕಿ ಗ್ರಾಮದ ರೈತರು ಭೂಸ್ವಾಧೀನ ಪ್ರಕ್ರಿಯೆ ರದ್ದಾಗುತ್ತದೆ. ನೆಮ್ಮದಿಯ ನಿಟ್ಟುಸಿರು ಬಿಡುವ ದಿನಗಳು ಹತ್ತಿರದಲ್ಲಿವೆ ಎಂದು ಕಾತರದಿಂದ ಕಾಯುತ್ತಿದ್ದಾರೆ.