ಕಠಿಣ ಸವಾಲಿನ ಜೀವನಶೈಲಿ ಹೊಂದಿರುವ ಕುರಿಗಾಹಿಗಳಿಗೆ ಆತ್ಮರಕ್ಷಣೆಯ ಅಗತ್ಯವಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.
ಜಿಲ್ಲೆಯ ನವನಗರದ ಪೊಲೀಸ್ ಮಂಗಲ ಭವನದಲ್ಲಿ ಕುರಿಗಾಹಿಗಳಿಗಾಗಿ ಆಯೋಜಿಸಿದ್ದ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, “ಮಳೆ, ಬಿಸಿಲು ಎನ್ನದೆ ಗುಡ್ಡಗಾಡು ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ತಮ್ಮ ಕುರಿಗಳನ್ನು ಮೇಯಿಸುತ್ತಾರೆ. ಈ ಹಿನ್ನೆಲೆ ಕುರಿಗಾಹಿಗಳು ಮತ್ತು ಅವರ ಕುರಿಗಳ ರಕ್ಷಣೆಗೆ ಸಹಾಯವಾಗುವಂತೆ ವಿಶೇಷ ಬಂದೂಕು ತರಬೇತಿ ಶಿಬಿರ ಆಯೋಜಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.
“ಕುರಿಗಾಹಿಗಳು ತಮ್ಮ ಕುರಿಗಳನ್ನು ಬೇರೆ ಬೇರೆ ಪ್ರದೇಶಗಳಿಗೆ ಮೇಯಿಸಲು ಹೋಗುವ ಸಂದರ್ಭದಲ್ಲಿ ಅವರ ರಕ್ಷಣೆಗಾಗಿ ಬಂದೂಕು ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ ಏಕಾಗ್ರತೆಯಿಂದ ಪಾಲ್ಗೊಂಡು, ಉತ್ತೀರ್ಣರಾಗಿ ಬಂದೂಕು ಪರವಾ ನಗಿ ಪಡೆಯಬೇಕೆಂದರು.ಬಂದೂಕು ಜತೆ ನಡವಳಿಕೆ ಯಲ್ಲಿ ಅತ್ಯಂತ ಸೂಕ್ಷ್ಮತೆ ಅಗತ್ಯವಾಗಿದೆ. ಬಂದೂ ಕು ಭಾವನೆ ರಹಿತವಾಗಿದೆ. ಅದು ಜೀವಕ್ಕೆ ಅಪಾಯ ತರಬಲ್ಲದು. ಬಂದೂಕನ್ನು ಸರಿಯಾಗಿ ಇಟ್ಟುಕೊಳ್ಳ ಬೇಕು. ಫೋಟೋಗೆ ಇಲ್ಲವೆ ಪ್ರದರ್ಶನಕ್ಕಾಗಿ ಸ್ನೇಹಿತರಿಗೆ ಕೊಡಬಾರದು” ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, “ಏಪ್ರಿಲ್ 13ರವರೆಗೆ ನಡೆಯುತ್ತಿರುವ ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ಕುರಿಗಾಹಿಗಳು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಗುರಿ ನಿಖರವಾಗಿ ಹೇಗೆ ಇಡಬೇಕು. ಬಂದೂಕು ಹಸ್ತಾಂತರಿಸುವ ವಿಧಾನ, ಕಾನೂನು ನಿಯಮಗಳು ಮತ್ತು ಶಿಸ್ತು ಕುರಿತು ತರಬೇತಿ ನೀಡಲಾಗುತ್ತಿದೆ. ತರಬೇತಿಯನಂತರ ಕಾಡುಪ್ರಾಣಿಗಳಿಗೆ ಯಾವುದೇ ರೀತಿಯತೊಂದರೆ ನೀಡಬಾರದು. ದುರುಪಯೋಗ ಪಡಿಸಿಕೊಂಡರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದವರು ಹೇಳಿದರು. ಶಿಬಿರದಲ್ಲಿ ಮೂರು ಮಹಿಳೆಯರು ಸಹ ಭಾಗವಹಿಸಿದ್ದರು.
ಇದನ್ನೂ ಓದಿ: ಬಾಗಲಕೋಟೆ | ಈದ್ ಮಿಲನ್ ಕಾರ್ಯಕ್ರಮ ಯಶಸ್ವಿ
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರೆ, ಕಾಶಿನಾಥ್ ಹುಡೇದ, ಹಾಲುಮತ ಸಮಾಜದ ರಾಜ್ಯ ಕಾರ್ಯದರ್ಶಿ ಸುವರ್ಣ, ತರಬೇತಿದಾರರು ಉಪಸ್ಥಿತರಿದ್ದರು.