ರೈತ ಹೋರಾಟಗಾರರ ಮೇಲೆ ಹಲ್ಲೆ ನಡೆಸುವ ನಿಮ್ಮ ಧರ್ಮ ಯಾವುದಯ್ಯ, ಕೊಲ್ಲುವ ಸಂಸ್ಕೃತಿ ನಿಮ್ಮದಾದರೆ, ಕಾಯಕ ಸಂಸ್ಕೃತಿ ನಮ್ಮದು ಎಂದು ಭಾರತೀಯ ಶರಣರ ಸೇನೆಯ ರಾಷ್ಟ್ರೀಯ ಸಂಚಾಲಕ ರಾಯಸಂದ್ರ ರವಿಕುಮಾರ್ ಹೇಳಿದರು.
ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಅಹಿಂದ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ತಾಲೂಕಿನ ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ರೈತಪರ ಹೋರಾಟಗಾರ ಯಲ್ಲಪ್ಪ ಹೆಗಡೆಯವರ ಮೇಲಿನ ಮಾರಣಾಂತಿಕ ಕೃತ್ಯ ಖಂಡಿಸಿ ಹಾಗೂ ಅಪರಾಧಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬೀಳಗಿ ಪಟ್ಟಣದ ಕನಕ ವೃತ್ತದ ಬಳಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾ ಅಧ್ಯಕ್ಷ ಬಸವರಾಜ್ ಧರ್ಮಂತಿ ಮಾತನಾಡಿ, “ನಾನು ಪೋಲಿಸರಿಗೆ, ಸರ್ಕಾರಕ್ಕೆ ಮುರಗೇಶ್ ನಿರಾಣಿ ಹಾಗೂ ಅವರ ತಮ್ಮನನ್ನು ಬಂಧಿಸುವಂತೆ ಸವಾಲ್ ಹಾಕಿದ್ದೆ. ಇವತ್ತಿಗೂ ಬಂಧನ ಮಾಡಿಲ್ಲ. ಪೊಲೀಸರು, ಸಚಿವರು, ಶಾಸಕರು ತನಿಖೆ ನಡೆದಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ಸರಿಯಾಗಿ ತನಿಖೆ ನಡೆಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಯಲ್ಲಪ್ಪ ಹೆಗಡೆ ಒಂದು ಶಕ್ತಿ. ಸಮಾಜ, ಜನರ ಮೇಲೆ ಕಾಳಜಿ ಹೊಂದಿದವವರು, ಯಾರೂ ಇಲ್ಲದೇ ಇದ್ದರೂ ಹೋರಾಟವನ್ನು ಮುನ್ನಡೆಸಿಕೊಂಡು ಹೋಗುವ ವ್ಯಕ್ತಿತ್ವ ಅವರದು. ಅಂಥವರ ಮೇಲೆ ಹಲ್ಲೆ ಮಾಡಿದ್ದು ನಾಚಿಕೆಗೇಡಿನ ಸಂಗತಿ. ಹಾಗಾಗಿ ಕೂಡಲೇ ಮುರಗೇಶ್ ನಿರಾಣಿಯನ್ನು ಬಂಧಿಸಿ, ಪ್ರಜಾಪ್ರಭುತ್ವದ ಮೇಲಿರುವ ನಂಬಿಕೆಯನ್ನು ಉಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೃಷಿ ಮೇಳಗಳು ಜಾತ್ರೆಯಾಗದೇ ಕೃಷಿ ಕ್ಷೇತ್ರದ ಅಭಿವೃದ್ಧಿ ಹೆಚ್ಚಿಸಲಿ: ಸಿಎಂ ಸಿದ್ದರಾಮಯ್ಯ
ಎಸ್ ಎಚ್ ತೆಕ್ಕನ್ನವರ ಮಾತನಾಡಿ, “ಹೋರಾಟಗಾರನ ಮೇಲೆ ಹಲ್ಲೆ ಮಾಡಿರುವುದು ಹೇಯ ಕೃತ್ಯ. ಇಂತಹ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಿ ಹೋರಾಟಗಾರರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಪಡಿಯಪ್ಪ ಕರಿಗಾರ, ಸತ್ಯಪ್ಪ ಮೆಲ್ನಾಡ್, ರಾಮನಗೌಡ ಜಕ್ಕನಗೌಡ್ ಪಾಟೀಲ್, ಬಸವರಾಜ್ ಹಳ್ಳದಮನಿ, ಮಹಾದೇವ್ ಹಾದಿಮನಿ, ಡಾ ಎಸ್ ಎಚ್ ತೆಕ್ಕೆನ್ನವರ್, ಸಿದ್ದಪ್ಪ ಬಳಗಾನೂರ, ಕಿರಣ್ ಎ ಬಾಳಾಗೊಳ್, ಹಣಮಂತ ಕಾಖಂಡಕಿ, ಕಾಶಿಮಲಿ ಗೋಟೆ, ಹಾಶಿಂಪೀರ್ ಮುಜಾವರ, ಸಿದ್ದು ಸಾರಾವರಿ, ಅನಿಲ್ ಗಚ್ಚಿನಮಣಿ, ಸದಾಶಿವ ಅಗೋಜಿ ಸೇರದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಇದ್ದರು.