ಬಹುತ್ವ ಸಂಸ್ಕೃತಿ ಭಾರತೋತ್ಸವದ ಎರಡನೇ ದಿನದ ಪ್ರಯುಕ್ತ ಶನಿವಾರ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಕಾರದಲ್ಲಿ ‘ಗಾನ ಘಮಲು’ ವಿಶೇಷ ಕಾರ್ಯಕ್ರಮದಲ್ಲಿ ತತ್ವಪದ, ವಚನ, ಖವ್ವಾಲಿ ಮತ್ತಿತರ ಕಲಾ ಪ್ರಕಾರಗಳ ಗಾಯನಗಳು ಶ್ರೋತೃಗಳು ಮನ ತಣಿಸಿದವು.
ಕಲಬುರಗಿಯ ಎಸ್.ಎಮ್.ಪಂಡಿತ್ ರಂಗಮಂದಿರದಲ್ಲಿ ʼಭಾವೈಕ್ಯದ ಹೊನಲು: ಸಮನ್ವಯದ ಗಾಯನ ಗಮಲುʼ ಘೋಷಣೆಯಡಿ ದಿನವಿಡೀ ತತ್ವಪದ, ಸೂಫಿಪದ, ವಚನ ಗಾಯನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶಿಶುನಾಳ ಶರೀಫರ ಪದಗಳು, ಕಡಕೋಳ ಮಡಿವಾಳಪ್ಪನವರ ತತ್ವಪದಗಳು, ವಚನ, ಖವ್ವಾಲಿ ಗೀತಗಾಯನ, ಶಿವ ಭಜನೆ ಸೇರಿದಂತೆ ವಿವಿಧ ಪ್ರಕಾರದ ಗೀತಗಾಯನ ಯಶಸ್ವಿಯಾಗಿ ನಡೆಯಿತು.
ಕಲಬುರಗಿಯ ಅಬ್ದುಲ್ ರೌಫ್ ಗನಿ ಬಂದೇನವಾಜ್ ತಂಡದಿಂದ ಖವ್ವಾಲಿ ನಡೆಸಿಕೊಟ್ಟರು. ವಿಜಯಪುರ ಮೂಲದ ಬಸವೇಶ್ವರ ಭಜನಾ ಮಂಡಳಿಯಿಂದ ಶರೀಫರ, ಮಡಿವಾಳಪ್ಪ ತತ್ವ ಪದಗಳು, ರಾಯಚೂರು ಮೂಲದ ಕಲಾವಿದರಿಂದ ಕೂಡಲೂರು ಬಸಲಿಂಗಪ್ಪನ ಪದಗಳು, ಅಫಜಲಪುರ ತಾಲ್ಲೂಕಿನ ಕಲಾವಿದರಿಂದ ರಾಮಪೂರದ ಬಕ್ಕಪ್ಪಯ್ಯನ ಪದಗಳು, ಕಲಬುರ್ಗಿಯ ಸಂಗೀತ ಕಲಾವಿದ ಸಿದ್ಧಾರ್ಥ್ ಚಿಮ್ಮಾ ಇದಲಾಯಿ ಮತ್ತು ಅವರ ತಂಡದಿಂದ ವಚನ, ತತ್ವಪದ ಗಾಯನ ಜರುಗಿದವು.
ಮೇಘಾ ಚಿಚಕೋಟಿ ವಚನ ಗಾಯನ ಸಭಿಕರನ್ನು ಮಂತ್ರಮುಗ್ದಗೊಳಿಸಿತು. ಸಿದ್ಧಾರ್ಥ್ ಚಿಮ್ಮಾ ಇದಲಾಯಿ ಅವರಿಂದ ದಾಸರ ಗೀತೆಗಳು ಕೇಳುಗರನ್ನು ಆಕರ್ಷಣೆ ಮಾಡಿದವು. ಕೆಲವೊಂದು ಗೀತ ಪದ, ಶ್ರೋತೃಗಳು ಪುನಃ ಹಾಡುವಂತೆ ಒತ್ತಾಯಿಸಿದ ಅಪರೂಪದ ಘಟನೆಯೂ ನಡೆಯಿತು. ಈ ಮೂಲಕ ಪ್ರೇಕ್ಷಕರ ಆಶಯದಂತೆ ವಿವಿಧ ಶೈಲಿಯ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಲಬುರಗಿ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ರಂಗಾಯಣ ಅಧಿಕಾರಿ ಜಗದೇಶ್ವರಿ ಶಿವಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್, ಬಹಮನಿ ಫೌಂಡೇಶನ್ ಮುಖಂಡ ರಿಜ್ವಾನ್ ಸಿದ್ದಿಕಿ, ಮಳಖೇಡ ದರ್ಗಾದ ಪೀಠಾಧಿಪತಿ, ರಂಗಾಯಣ ಮಾಜಿ ನಿರ್ದೇಶಕ ಆರ್.ಕೆ ಹುಡಗಿ, ಚಿಂತಕಿ ಮೀನಾಕ್ಷಿ ಬಾಳಿ ಮತ್ತಿತರರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಹೋರಾಟಗಾರ್ತಿ ಕೆ.ನೀಲಾ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಪ್ರಮುಖರಾದ ದತ್ತಾತ್ರೇಯ ಇಕ್ಕಳಕಿ, ಪ್ರಭು ಖಾನಾಪುರೆ, ಅಬ್ದುಲ್ ಖಾದರ್, ಅಬ್ದುಲ್ ರಹೀಂ, ಡಿ.ಎಂ.ನದಾಫ್, ಶ್ರೀಶೈಲ ಘೂಳಿ, ಶರಣಬಸಪ್ಪ ಮಮಶೆಟ್ಟಿ, ಕೋದಂಡರಾಮ, ಪದ್ಮ ಪಾಟೀಲ್, ಪದ್ಮಿನಿ ಕಿರಣಗಿ, ಫಾತೀಮಾ ಶೇಖ್, ಚಂದಮ್ಮ ಗೋಳಾ, ಪ್ರಿಯಾಂಕ್ ಮಾವಿನಕರ್, ವಿಕ್ರಂ ತೇಜಸ್, ಸಂಗನಗೌಡ ಹಿರೇಗೌಡ, ಲವಿತ್ರ ವಸ್ತ್ರದ್, ಸಲ್ಮಾನ್ ಖಾನ್, ಸುಜಾತಾ, ನಾಗೇಶ್ ಹರಳಯ್ಯ, ದಿಲಶಾದ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಜ.24ರಂದು ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ ಸಮಾರಂಭ
ಇಂದು (ಭಾನುವಾರ) ಬೆಳಿಗ್ಗೆ 10 ಗಂಟೆಗೆ ಕನ್ನಡ ಭವನದಿಂದ ಜಗತ್ ಸರ್ಕಲ್ವರೆಗೆ ಬೃಹತ್ ಮೆರವಣಿಗೆ ನಡೆಯಲಿದ್ದು, ನಂತರ ʼಬಹುತ್ವ ಭಾರತದ ಜಾಗೃತ ಅಭಿಯಾನʼ ಬಹಿರಂಗ ಸಭೆ ಜರುಗಲಿದೆ. ನಾಡಿನ ಸರ್ವಧರ್ಮಗಳ ನೇತಾರರು, ವಿಚಾರವಾದಿಗಳು, ಸಾಮಾಜಿಕ ಕಾರ್ಯಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ.