ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ, ಕೋಮುವಾದಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ನಿರ್ಣಾಯಕವಾಗಿ ಸೋಲಿಸುವಂತೆ ಸಿಪಿಐಎಂ ಕರೆ ನೀಡಿದೆ.
ಬೆಂಗಳೂರಿನಲ್ಲಿ ಶನಿವಾರದಂದು ಪತ್ರಿಕೆ ಹೇಳಿಕೆ ನೀಡಿರುವ ಅವರು, “ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ಮತಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಸ್ಥಳೀಯ ಮತದಾರರು ಪ್ರಜಾಪ್ರಭುತ್ವ ವಿರೋಧಿ ಪಕ್ಷಗಳನ್ನು ಹೀನಾಯವಾಗಿ ಸೋಲಿಸಬೇಕು” ಎಂದು ಭಾರತ ಕಮ್ಯುನಿಸ್ಟ್ ಪಕ್ಷದ(ಮಾರ್ಕ್ಸವಾದಿ) ರಾಜ್ಯ ಸಮಿತಿಯು ಕರೆ ನೀಡಿದೆ” ಎಂದು ಪಕ್ಷದ ಕಾರ್ಯದರ್ಶಿ ಯು ಬಸವರಾಜು ತಿಳಿಸಿದ್ದಾರೆ.
“ಈ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ದುಡಿಯುವ ಜನರು ಹಾಗೂ ಎಲ್ಲ ನಾಗರಿಕರನ್ನು ತೀವ್ರ ಸಂಕಷ್ಠಕ್ಕೀಡು ಮಾಡುವ ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಪರವಾದ ಹಣಕಾಸು ನೀತಿಗಳನ್ನು ಅನುಸರಿಸುತ್ತಿವೆ. ಸದರಿ ಲೂಟಿಕೋರರ ಲೂಟಿಗೆ ವಿರುದ್ಧವಾದ ಹೋರಾಟವನ್ನು ಮಟ್ಟ ಹಾಕಲು ಹಾಗೂ ಪ್ರತಿರೋಧದ ಸ್ಥಿತಿ ಹತ್ತಿಕ್ಕಲು ಇವು ಒಂದೆಡೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಮತ್ತು ಜನತೆ ಒಗ್ಗೂಡದಂತೆ ತಡೆಯಲು, ಪರಸ್ಪರರು ಹೊಡೆದಾಡಿಕೊಳ್ಳುವಂತಹ ವಿಭಜನಕಾರಿ ಕೋಮುವಾದಿ ದ್ವೇಷಕ್ಕೆ ನೆರವಾಗುತ್ತಿದ್ದು, ಮೌನ ಬೆಂಬಲ ನೀಡುತ್ತಿವೆ” ಎಂದರು.
“ಭಾರತದ ಸಂವಿಧಾನ ವಿರೋಧಿಯಾದ ಇಂತಹ ನಡೆಗಳನ್ನು ತಡೆಯುವುದು ತುರ್ತು ಅಗತ್ಯವಾಗಿದೆ. ಹೀಗಾಗಿ, ಇವುಗಳ ಬೆಳವಣಿಗೆಯನ್ನು ತಡೆಯಲು ಇವುಗಳನ್ನು ಸೋಲಿಸುವುದು ಅಗತ್ಯವಾಗಿದೆ. ಇವುಗಳನ್ನು ಸೋಲಿಸಲು ಶಕ್ತವಾದ ಕಾಂಗ್ರೆಸ್ ಪಕ್ಷ ಬಿಟ್ಟರೆ ಅನ್ಯರಿಲ್ಲದ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಮೂರು ಕ್ಷೇತ್ರಗಳಲ್ಲಿ ಮತ ನೀಡಬೇಕು” ಎಂದು ಸಿಪಿಐಎಂ ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ; ವಿದ್ಯುತ್ ಸ್ಪರ್ಷದಿಂದ ಬಾಲಕ ಸಾವು
“ಕಾಂಗ್ರೆಸ್ ಪಕ್ಷವೂ ಕೂಡಾ ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಪರವಾದ, ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವುದು ಅನುಭವವೇದ್ಯವಾಗಿದೆ. ಅದು ಅನುಭವದಿಂದ ಪಾಠ ಕಲಿಯುತ್ತಿಲ್ಲ. ಹೀಗಾಗಿ, ಕಾಂಗ್ರೆಸ್ ಪಕ್ಷದ ಈ ಜನ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಜನತೆ, ಪ್ರಜಾಪ್ರಭುತ್ವ ಹಾಗೂ ಸೌಹಾರ್ದತೆಯ ರಕ್ಷಣೆಗಾಗಿಯೂ ಜನ ಚಳುವಳಿಯಲ್ಲಿ ತೊಡಗಿ ಬಲಗೊಳಿಸಬೇಕು” ಎಂದು ಸಿಪಿಐಎಂ ಮತದಾರರಲ್ಲಿ ಮನವಿ ಮಾಡಿದೆ.