ರಾಜ್ಯದಲ್ಲಿ ಕೋಮು ಸಾಮರಸ್ಯ ಪರಿಣಾಮಕಾರಿಯಾಗಿ ಸ್ಥಾಪನೆಯಾಗಲು ಸರ್ಕಾರ ಅನುಸರಿಸಬೇಕಾದ 27 ಅಂಶಗಳ ಕಾರ್ಯಸೂಚಿಯನ್ನು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಸ್ತಾಂತರಿಸಿ ಅನುಷ್ಠಾನಿಸುವ ಮಾರ್ಗವನ್ನು ಮನವರಿಕೆ ಮಾಡಿಸಿತು.
ಸಮುದಾಯಗಳ ನಡುವೆ ಸಮಸ್ಯೆ ಏರ್ಪಡಿಸುವುದೇ ನಿಜವಾದ ದೇಶದ್ರೋಹ. ಇಂತಹ ದೇಶದ್ರೋಹದ ಕೃತ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಭಾಗಿಯಾಗುವವರ ಕುರಿತು ಸರ್ಕಾರ ಶೂನ್ಯ ಸಹನೆಯನ್ನು ಹೊಂದಬೇಕು. ಸಮುದಾಯಗಳ ನಡುವೆ ರಾಜಕೀಯ ಸಾಮಾಜಿಕ ಧಾರ್ಮಿಕ ಕಾರಣಗಳನ್ನು ಮುಂದೊಡ್ಡಿಕೊಂಡು ಗಲಭೆ ಸೃಷ್ಟಿಸುವವರನ್ನು ಜಾತಿ ಧರ್ಮ ಭಾಷೆಗಳ ತಾರತಮ್ಯ ಮಾಡದೆ ಕಠಿಣವಾಗಿ ಶಿಕ್ಷಿಸುವ ನೀತಿಗಳನ್ನು ರೂಪಿಸಬೇಕೆಂದು ವೇದಿಕೆ ಆಗ್ರಹಿಸಿತು.
ನಿತ್ಯ ನಿರಂತರ ಸೌಹಾರ್ದ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಮಾಡುತ್ತಿರುವ ವೇದಿಕೆಯ ಕಾರ್ಯಕ್ರಮಗಳ ವಿವರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಕಾರ್ಯಸೂಚಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಬೆಂಗಳೂರು | ತಾಯಿ ಪ್ರೀತಿಗೆ ಅಗ್ನಿಪರೀಕ್ಷೆ ತಂದೊಡ್ಡುವ ʼಸುಣ್ಣದ ಸುತ್ತುʼ; ಇದೇ ಮಾ.06ಕ್ಕೆ ಪ್ರದರ್ಶನ
ವೇದಿಕೆ ನಿಯೋಗದಲ್ಲಿ ಗೌರವಾಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್, ಅಧ್ಯಕ್ಷ ಸುಹೇಲ್ ಅಹಮದ್ ಮರೂರ್, ಕಾರ್ಯದರ್ಶಿ ಡಾ. ಹಕೀಮ್ ತೀರ್ಥಹಳ್ಳಿ, ವಕ್ತಾರ ಮುಷ್ತಾಕ್ ಹೆನ್ನಾಬೈಲ್, ಮಾಜಿ ಅಧ್ಯಕ್ಷ ಅನೀಸ್ ಪಾಶ ದಾವಣಗೆರೆ, ಮುಝಫ್ಫರ್ ಹುಸೇನ್ ಪಿರಿಯಾಪಟ್ಟ ಜಾಕಿರ್ ಹುಸೇನ್ ಮಂಗಳೂರು, ಅಬ್ದುಲ್ ರೆಹಮಾನ್ ಬಿದರಕುಂದಿ, ಡಾ. ಶಫಿ ಮುಲ್ಲಾ ವಿಜಯಪುರ, ಚಮನ್ ಶರೀಫ್ ಹಿರಿಯೂರು, ರಫೀಕ್ ನಾಗೂರ್, ನಜೀರ್ ಬೆಳುವಾಯಿ, ಎಸ್ ಕೆ ಇಬ್ರಾಹಿಂ, ಮುಹಮ್ಮದ್ ರಿಯಾಜ್ ಕಾರ್ಕಳ, ರಫೀಕ್ ಅಹಮದ್ ಹುಲಿಯಾಳ, ದಸ್ತಗೀರ್ ಕಲಹಳ್ಳಿ ತುಮಕೂರು, ರೆಹ್ಮತ್ ದಾವಣಗೆರೆ, ಸಯ್ಯದ್ ಘನಿ ಖಾನ್ ಮಂಡ್ಯ ಮುಂತಾದವರು ಉಪಸ್ಥಿತರಿದ್ದರು.
