ಮಲೆನಾಡು-ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಜನರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳ ಕುರಿತು ಸಮಾಲೋಚಿಸಿ ಪರಿಹಾರ ಹುಡುಕಲು ಮತ್ತು ವಿವಿಧ ಹಕ್ಕುಗಳ ಹಕ್ಕೊತ್ತಾಯವನ್ನು ಸರ್ಕಾರದ ಮುಂದಿಡಲು ಮಲೆನಾಡು ಕರಾವಳಿ ಜನಪರ ಒಕ್ಕೂಟ ತೀರ್ಮಾನಿಸಿದೆ. ಅಕ್ಟೋಬರ್ 31ರ ಬೆಳಗ್ಗೆ 10ಗಂಟೆಗೆ ಬೆಂಗಳೂರಿನ ಆದಿಚುಂಚನಗಿರಿ ಮಠದ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸುವುದಾಗಿ ತಿಳಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಒಕ್ಕೂಟದ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ, “ಮಲೆನಾಡು-ಕರಾವಳಿ ಜನಪರ ಒಕ್ಕೂಟ ಅನೇಕ ವರ್ಷಗಳಿಂದ ಏಳು ಜಿಲ್ಲೆಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತುಕೊಟ್ಟು ಹೋರಾಟ ಮಾಡುತ್ತಾ ಬಂದಿದೆ. ಸ್ಥಳೀಯ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿ ಪರಿಹಾರಗಳನ್ನು ಹುಡುಕಿಕೊಳ್ಳುವಲ್ಲಿ ಶ್ರಮಿಸುತ್ತಿದೆ” ಎಂದು ತಿಳಿಸಿದ್ದಾರೆ.
“ಕರಾವಳಿ-ಮಲೆನಾಡು ಭಾಗದಲ್ಲಿ ರೈತಾಪಿ ವರ್ಗ, ಮೀನುಗಾರರು ಸೇರಿದಂತೆ ಅನೇಕರು ಕಟ್ಟಿಕೊಂಡಿದ್ದಾರೆ. ಕರಾವಳಿ ಮತ್ತು ಕಾಡು ಇಲ್ಲಿನ ಜನರಿಗೆ ಹೆಚ್ಚು ಉದ್ಯೋಗವನ್ನು ಒದಗಿಸಿ ಕೊಟ್ಟಿದ್ದು, ಸರ್ಕಾರಗಳಿಂದ ಸೂಕ್ತ ಮಾನ್ಯತೆ ಸಿಕ್ಕಿಲ್ಲ. ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಜನಪರ ಕಾಯ್ದೆಗಳು ಇಲ್ಲದಿರುವುದು ಇಲ್ಲಿನ ಸಾಮಾನ್ಯ ಜನರಿಗೆ ಅನಾನುಕೂಲವಾಗಿದೆ. ಈ ಭಾಗದಿಂದ ಸಂಸ್ಕೃತಿ, ಭಾಷೆ, ರಾಜಕೀಯ, ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಅಪಾರವಾದ ಕೊಡುಗೆ ಇದ್ದರೂ, ಈ ಭಾಗದ ಜನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ
“ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಸಮಸ್ಯೆ, ಮೀನುಗಾರರ ಸಮಸ್ಯೆಗಳನ್ನು ಪರಿಹರಿಸಬೇಕು. ಅರಣ್ಯ ಹೊತ್ತುವರಿ ಪರಿಹಾರ, ಕಸ್ತೂರಿ ರಂಗನ್ ವರದಿಗಾಗಿ ಹೊಸ ಸೂತ್ರ ರಚನೆ, ಹೊಸ ತಾಲೂಕುಗಳ ಅಭಿವೃದ್ಧಿ, ಉಡುಪಿ ಆಗುಂಬೆ ಹೆದ್ದಾರಿ ನವೀಕರಣ, ನದಿ ಮೂಲಗಳ ರಕ್ಷಣೆ ಪ್ರಕೃತಿ ಸಹಜ ನದಿ ಜೋಡಣೆಗೆ ಮಹತ್ವ, ಚಿಕ್ಕಮಗಳೂರು ಮಡಿಕೇರಿ ಹಾಗೂ ಸೂಕ್ತ ಪ್ರದೇಶಕ್ಕೆ ರೈಲ್ವೆ ಪಥ ವಿಸ್ತರಣೆಯ ಕಡೆಗೆ ಸರಕಾರ ಗಮನ ಹರಿಸಬೇಕು” ಎಂದು ಅವರು ಒತ್ತಾಯಿಸಿದರು.
ಮಲೆನಾಡು-ಕರಾವಳಿ ಭಾಗಕ್ಕೆ ಮೆಡಿಕಲ್ ಕಾಲೇಜು, ಐಐಟಿ ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಬೇಕು. ಜಾತಿ, ಮತ, ಭೇದ ಇಲ್ಲದೆ ಅಸ್ಪೃಶ್ಯತೆ ವಿರುದ್ಧ ಸಂಘಟನೆ ಮಾಡುತ್ತಾ ಶೋಷಿತರ ಕೂಗಾಗಿದ್ದ ಕ್ರಾಂತಿಕಾರಿ ಸಾಮಾಜಿಕ ಸಮಾನತೆಯ ಹರಿಕಾರ ನಾರಾಯಣ ಗುರುಗಳ ಹೆಸರಲ್ಲಿ ವಿಶ್ವವಿದ್ಯಾನಿಲಯ ನಿರ್ಮಾಣ ಆಗಬೇಕು ಎಂಬ ಇನ್ನಿತರ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ಮಲೆನಾಡು-ಕರಾವಳಿ ಜನಪರ ಒಕ್ಕೂಟ ಸಂಚಾಲಕ ಅನಿಲ್ ಹೊಸಕೊಪ್ಪ ಮಾತನಾಡಿ, ಜನಪರ ಒಕ್ಕೂಟದ ಮೂಲಕ ಏಳು ಜಿಲ್ಲೆಗಳನ್ನು ಒಳಗೊಂಡ ಮಲೆನಾಡು ಕರಾವಳಿ ಪ್ರದೇಶದ ಸಮಸ್ಯೆಗಳನ್ನು ಹೋರಾಟಗಳ ಮೂಲಕ ಸರ್ಕಾರಕ್ಕೆ ತಿಳಿಸುವುದು ನಮ್ಮ ಮುಖ್ಯ ಉದ್ದೇಶ. ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದಲ್ಲಿ ರೈತರು ಸಾರ್ವಜನಿಕರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತಷ್ಟು ಸದೃಢರಾಗಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಕಣ್ಣು ತೆರೆಸುಲು ನಾವು ಶ್ರಮಿಸುತ್ತಿದ್ದೇವೆ ಎಂದರು.
ಈವೇಳೆ ತೇಜ್ ಶೆಟ್ಟಿ, ಮಹೇಶ್ ಶಿರಸಿ, ಸಂತೋಷ್ ಶೆಟ್ಟಿ, ಅಬ್ಬಾಸ್ ಕೆಗ್ಗ, ಅಬ್ಬಾಸ್ ಧರ್ಮಸ್ಥಳ, ನವೀನ್ ಮಾವಿನಕಟ್ಟೆ, ಕಿರಣ್ ಮಲ್ನಾಡ್ ಉಪಸ್ಥಿತರಿದ್ದರು.