ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ರಕ್ತದೊತ್ತಡದಲ್ಲಿ ಪದೇ ಪದೆ ಭಾರೀ ಏರುಪೇರು ಕಂಡುಬರುತ್ತಿದೆ ಎಂದು ಅವರ ಪರ ಹಿರಿಯ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, 2ನೇ ಆರೋಪಿ ದರ್ಶನ್, 6ನೇ ಆರೋಪಿ ಜಗದೀಶ್, 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು, 11ನೇ ಆರೋಪಿ ನಾಗರಾಜ್ ಮತ್ತು 12ನೇ ಆರೋಪಿ ಎಂ.ಲಕ್ಷ್ಮಣ್, ಪ್ರತ್ಯೇಕವಾಗಿ ಸಲ್ಲಿಸಿರುವ ನಿಯಮಿತ(ರೆಗ್ಯುಲರ್) ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಸಿ ವಿ ನಾಗೇಶ್ ತಮ್ಮ ವಾದ ಮುಂದುವರಿಸಿದ್ದು, “ದರ್ಶನ್, ತಮ್ಮ ಬೆನ್ನುಹುರಿ ನೋವಿಗೆ ಶಸ್ತ್ರಚಿಕಿತ್ಸೆ ಪಡೆಯಲು ಪದೇ ಪದೆ ಏರಿಳಿತದ ರಕ್ತದೊತ್ತಡ ಅಡ್ಡಿ ಮಾಡುತ್ತಿದೆ. ಹಾಗಾಗಿ ವೈದ್ಯಕೀಯ ಕಾರಣಕ್ಕಾಗಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಗೆ ದಾಖಲಾಗಿರುವ ಅವರು ಹೆಚ್ಚಿನ ವಿವರಗಳನ್ನು ಈವರೆಗೆ ಹಂಚಿಕೊಂಡಿಲ್ಲ” ಎಂದು ನ್ಯಾಯಪೀಠದ ಪ್ರಶ್ನೆಯೊಂದಕ್ಕೆ ವಿವರಿಸಿದ್ದಾರೆ.
“ದರ್ಶನ್ಗೆ ಶಸ್ತ್ರಚಿಕಿತ್ಸೆ ನಡೆಸಲು ಯಾವುದೇ ಸಮಸ್ಯೆಯಿಲ್ಲವೆಂದು ವೈದ್ಯರೇ ನೀಡಿರುವ ಪ್ರಮಾಣ ಪತ್ರದಲ್ಲಿ ಇದೆಯಲ್ಲಾ” ಎಂದು ನ್ಯಾಯಪೀಠವು ಪ್ರಶ್ನಿಸಿದೆ.
ನ್ಯಾಯಪೀಠದ ಪ್ರಶ್ನೆಯನ್ನು ನಿರಾಕರಿಸಿದ ವಕೀಲ ನಾಗೇಶ್, “ದರ್ಶನ್ಗೆ ಎಂಆರ್ಐ ಮಾಡಿಸಲಾಗಿದೆ. ರಕ್ತದೊತ್ತಡದಲ್ಲಿ ಪದೇ ಪದೆ ಏರಿಳಿತ ಕಂಡುಬರುತ್ತಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿಲ್ಲ. ಯಾವಾಗ ಶಸ್ತ್ರಚಿಕಿತ್ಸೆ ಮಾಡಬೇಕೆಂಬುದನ್ನು ವೈದ್ಯರು ನಿರ್ಧರಿಸಬೇಕಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ದರ್ಶನ್ ಉತ್ತಮ ನಡತೆ ಹೊಂದಿದ ವ್ಯಕ್ತಿ ಎಂಬುದನ್ನು ಮಂಡಿಸಿದ ನಾಗೇಶ್, “ಒಂದು ವೇಳೆ ದರ್ಶನ್ಗೆ ರೇಣುಕಸ್ವಾಮಿಯನ್ನು ಕೊಲೆಮಾಡುವ ಉದ್ದೇಶವಿದ್ದಿದ್ದರೆ, ರೇಣುಕಸ್ವಾಮಿಗೆ ನೀರು ಕೊಡಿ, ಊಟ ತಂದು ಕೊಡಿ, ಆತನ ಚಿತ್ರ ಸೆರೆ ಹಿಡಿಯಿರಿ, ವಿಡಿಯೊ ಮಾಡಿ, ಅವನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದೆಲ್ಲಾ ಹೇಳುತ್ತಿದ್ದರೇ” ಎಂದು ಪ್ರಶ್ನಿಸಿದರು.
“ಘಟನೆಯ ಕುರಿತಂತೆ ಪ್ರಾಸಿಕ್ಯೂಷನ್ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಿದೆ. ಅಲ್ಲದೆ, ಸಾಕ್ಷಿಗಳ ಹೇಳಿಕೆಗಳಲ್ಲಿ ಸಾಕಷ್ಟು ವಿರೋಧಾಭಾಸವಿದೆ. ಸುಳ್ಳು ಹೇಳುವುದಕ್ಕೂ ಒಂದು ಮಿತಿಯಿದೆ. ಆದರೆ, ಪ್ರಾಸಿಕ್ಯೂಷನ್ ಅರ್ಜಿದಾರರ ವಿರುದ್ಧ ಮಿತಿಮೀರಿದ ಸುಳ್ಳುಗಳನ್ನೊಳಗೊಂಡ ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಚಿವ ಜಮೀರ್, ಸಿಎಂ ಬಗ್ಗೆ ಅವಹೇಳನ; ಮೋಹಿತ್ ನರಸಿಂಹ ಮೂರ್ತಿ ಬಂಧನ
ಪ್ರಕರಣದ 11ನೇ ಆರೋಪಿ ದರ್ಶನ್ ಅವರ ವ್ಯವಸ್ಥಾಪಕ ಆರ್ ನಾಗರಾಜು ಪರ ಮತ್ತೊಬ್ಬ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, “ಯಾವ ಕಾರಣಕ್ಕಾಗಿ ಆರೋಪಿಯನ್ನು ಬಂಧಿಸಲಾಗಿದೆಯೆಂಬ ವಿಚಾರವನ್ನು ತನಿಖಾಧಿಕಾರಿಗಳು ತಮ್ಮ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿಲ್ಲ. ಈ ಲೋಪವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ” ಎಂದು ಆಕ್ಷೇಪಿಸಿದರು. ದಿನದ ಕಲಾಪ ಮುಗಿದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.