ಮಹಿಳೆಯೊಬ್ಬರು ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಎಸ್ಡಿಪಿಐ ಮುಖಂಡರೊಬ್ಬರು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹನಿಟ್ರ್ಯಾಪ್ ಮೂಲಕ ಮಹಿಳೆ 10 ಲಕ್ಷ ರೂ ನೀಡುವಂತೆ ಬೆದರಿಕೆ ಹಾಕುತ್ತಿದ್ದು, ಹಣ ನೀಡದಿದ್ದರೆ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆಂದು ನೆಲಮಂಗಲದ ಲೋಹಿತ್ ನಗರದ ನಿವಾಸಿ ಬಿಆರ್ ಭಾಸ್ಕರ್ ಪ್ರಸಾದ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
2 ವರ್ಷಗಳ ಹಿಂದೆ ಹೋರಾಟ, ಪ್ರತಿಭಟನೆಗಳಲ್ಲಿ ಮಹಿಳೆ ಪರಿಚಯವಾಗಿದ್ದರು. ಆಗಸ್ಟ್ 28 ರಂದು ವಾಟ್ಸಾಪ್ ಮೂಲಕ ಸಂದೇಶ ರವಾನಿಸಿದ ಮಹಿಳೆ, ಲೈಂಗಿಕ ಸಂಪರ್ಕಕ್ಕೆ ಆಹ್ವಾನಿಸಿದ್ದಳು. ನಂತರ ಸಂದೇಶ ಹಾಗೂ ವಿಡಿಯೋ ಇಟ್ಟುಕೊಂಡು ಮಾನಹರಣ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ.
ಭಾನುವಾರ ಶಿವಾಜಿನಗರದ ಚಿನ್ನಸ್ವಾಮಿ ಮುದಲಿಯಾರ್ ರಸ್ತೆಯಲ್ಲಿರುವ ಸುದ್ದಿವಾಹಿನಿಯೊಂದರ ಬಳಿ ನಿಂತಿದ್ದಾಗ ಅಪಪ್ರಚಾರ ಮಾಡಿ, ಅವಾಚ್ಯವಾಗಿ ನಿಂದಿಸಿದ್ದಾಳೆ. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಭಾಸ್ಕರ್ ಪ್ರಸಾದ್ ಅವರು ಆರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದ 7 ಜಿಲ್ಲೆಗಳಲ್ಲಿ ಇಂದಿನಿಂದ ಧಾರಾಕಾರ ಮಳೆ
ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಇತರ ಆರೋಪ ಹಿನ್ನೆಲೆಯಲ್ಲಿ ಶಿವಾಜಿನಗರ ಪೊಲೀಸರು ಇದೀಗ ಮಹಿಳೆ ವಿರುದ್ಧ ಐಟಿ ಕಾಯ್ದೆ ಮತ್ತು ಬಿಎನ್ಎಸ್(ಭಾರತೀಯ ನ್ಯಾಯ ಸಂಹಿತೆ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಮಹಿಳೆಯ ವಿವರಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
