ಹೆಂಡತಿಗೆ ನಿದ್ರೆ ಮಾತ್ರೆ ನೀಡಿ ಆಕೆ ಗಾಢ ನಿದ್ದೆಯಲ್ಲಿದ್ದಾಗಲೇ ಪತಿಯೇ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವೈಯಾಲಿ ಕಾವಲ್ನಲ್ಲಿ ನಡೆದಿದೆ. ತಾನೇ ಕೊಂದು ಸಹಜ ಸಾವೆಂದು ಕಥೆ ಕಟ್ಟಿ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚೇತನಾ (42) ಕೊಲೆಯಾದ ದುರ್ದೈವಿ. ಆರೋಪಿ ಪತಿ ಶರತ್ ಉತ್ತಂಗಿ (43) ಎಂಬವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತಳ ಸಂಬಂಧಿ ಅಕ್ಷಯ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಮೂಲದ ಶರತ್, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ಒಂದು ಹೆಣ್ಣು ಮಗುವಿದೆ. ಆಗಾಗ ಹಣಕಾಸಿನ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಫೆ.3ರಂದು ದಂಪತಿ ನಡುವೆ ಮತ್ತೆ ಗಲಾಟೆಯಾಗಿದೆ. ಜ್ವರದ ಮಾತ್ರೆಯ ಸೋಗಿನಲ್ಲಿ ಪತ್ನಿಗೆ ನಿದ್ರೆ ಮಾತ್ರೆ ನೀಡಿದ್ದ. ಬಳಿಕ ಗಾಢ ನಿದ್ರೆಯಲ್ಲಿದ್ದ ಪತ್ನಿಯನ್ನು ಕತ್ತುಹಿಸುಕಿ ಪತಿ ಸಾಯಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕಲುಷಿತ ನೀರು ಕುಡಿದು 30 ಮಂದಿ ಅಸ್ವಸ್ಥ; ಜಲಮಂಡಳಿ ವಿರುದ್ಧ ಆಕ್ರೋಶ
“ತಲೆ ಸುತ್ತು ಬಂದಿದೆ ಎಂದು ಪತ್ನಿ ಚೇತನಾ ತನ್ನ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಜ್ವರದ ಮಾತ್ರೆ ನೀಡಿದೆ. ರಾತ್ರಿ ಎಂದಿನಂತೆ ಮಲಗಿದ್ದಳು. ಮಧ್ಯರಾತ್ರಿ 2.30ಕ್ಕೆ ಮಂಚದಿಂದ ಕೆಳಗೆ ಬಿದ್ದಿದ್ದಳು. ಕೂಡಲೇ ನೆಲಮಹಡಿಯಲ್ಲಿ ವಾಸವಿದ್ದವರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಮಾರ್ಗಮಧ್ಯೆದಲ್ಲಿ ಪತ್ನಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದರೆಂದು ಸಂಬಂಧಿಕರ ಮುಂದೆ ಸುಳ್ಳು ಕಥೆ ಕಟ್ಟಿದ್ದ. ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆ ಹಾಗೂ ಕೆನ್ನೆಯಲ್ಲಿ ತರಚಿದ ಗಾಯವಿರುವುದನ್ನು ಗಮನಿಸಿ ಹತ್ಯೆಯ ಶಂಕೆಯ ಮೇಲೆ ಸಂಬಂಧಿಕರು ದೂರು ನೀಡಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
