ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KIA) 2024-25ರ ಹಣಕಾಸು ವರ್ಷದಲ್ಲಿ ಹೊಸ ದಾಖಲೆ ಬರೆದಿದ್ದು, ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮೈಲಿಗಲ್ಲು ಸಾಧಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ, 2024-25ರ ಹಣಕಾಸು ವರ್ಷದಲ್ಲಿ 41 ದಶಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸಿದ್ದು, 500,000 ಮೆಟ್ರಿಕ್ ಟನ್(ಎಂಟಿ) ತೂಕದ ಸರಕುಗಳನ್ನು ಸಾಗಿಸಲಾಗಿದೆ.
ಹಿಂದಿನ ಹಣಕಾಸು ವರ್ಷದಲ್ಲಿ 37.53 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದುದು ದಾಖಲಾಗಿದ್ದು, ಪ್ರಸ್ತುತ ವರ್ಷಕ್ಕೆ ಇದು ಶೇ.11.6ರಷ್ಟು ಅಧಿಕವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2024-25ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿ ಪ್ರಸ್ತುತ ಹಣಕಾಸು ವರ್ಷದಲ್ಲಿ 41.88 ದಶಲಕ್ಷಕ್ಕೆ ತಲುಪಿದೆ. ದೇಶೀಯ ಪ್ರಯಾಣಿಕರ ಸಂಖ್ಯೆಯು ಶೇ.10ರಷ್ಟು ಬೆಳವಣಿಗೆಯಾಗಿ 36.05 ದಶಲಕ್ಷ ತಲುಪಿದ್ದರೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯು ಶೇ.25ರಷ್ಟು ಹೆಚ್ಚಳವಾಗಿ, 5.83 ದಶಲಕ್ಷಕ್ಕೆ ಏರಿಕೆಯಾಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಸಂಚಾರವನ್ನು ವಿಶ್ವಾದ್ಯಂತ ವಿಸ್ತರಿಸಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ಜತೆಗೆ, ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ದೈನಂದಿನ ಹೆಚ್ಚುವರಿ ವಿಮಾನ ಹಾರಾಟ, ಕ್ಯಾಥೆ ಪೆಸಿಫಿಕ್, ಕೆಎಲ್ಎಂ, ಜಪಾನ್ ಏರ್ಲೈನ್ಸ್, ಕ್ವಾಂಟಾಸ್ ಸೇರಿದಂತೆ ಹಲವು ವಿದೇಶಿ ವಿಮಾನಯಾನ ಸಂಸ್ಥೆಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಒದಗಿಸುವ ವಿಮಾನ ಸೇವೆಯನ್ನು ಇನ್ನಷ್ಟು ಹೆಚ್ಚಿಸಿರುವುದೂ ಕೂಡ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ.
ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ಕಳೆದ ನಾಲ್ಕು ತಿಂಗಳುಗಳಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ಸ್ಥಾನ ಪಡೆದುಕೊಂಡಿದೆ. 76 ದೇಶೀಯ ಮತ್ತು 33 ಅಂತಾರಾಷ್ಟ್ರೀಯ ತಾಣಗಳಿಗೆ ಬೆಂಗಳೂರಿನಿಂದ ತಡೆರಹಿತ ವಿಮಾನ ಸೇವೆ ಲಭ್ಯವಿದ್ದು, ಇದೇ ವರ್ಷದ ಮೇ ತಿಂಗಳಿನಿಂದ ವಿಯೆಟ್ನಾಂನ ಹನೋಯಿ ನಗರಕ್ಕೆ ಆರಂಭವಾಗಲಿರುವ ವಿಮಾನ ಸೇವೆಯು 34ನೇ ಅಂತಾರಾಷ್ಟ್ರೀಯ ತಾಣವಾಗಿ ಹೊರಹೊಮ್ಮಲಿದೆ.
ಸರಕು ಸಾಗಣೆಯಲ್ಲೂ ದಾಖಲೆ; 500,000 ಮೆಟ್ರಿಕ್ ಟನ್ ದಾಟಿದ ಸರಕು ಸಾಗಣೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸರಕು ಸಾಗಣೆಯಲ್ಲೂ ದಾಖಲೆ ಸೃಷ್ಟಿಸಿದೆ. ಇದೇ ಮೊದಲ ಬಾರಿ 5 ಲಕ್ಷ ಮೆಟ್ರಿಕ್ಟನ್ಗಿಂತ ಹೆಚ್ಚು ಸರಕು ಸಾಗಣೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. 2024-25ನೇ ಹಣಕಾಸು ವರ್ಷದಲ್ಲಿ 502,480 ಮೆಟ್ರಿಕ್ ಟನ್ ಸರಕನ್ನು ಸಾಗಣೆ ಮಾಡಲಾಗಿದ್ದು, ವರ್ಷದಿಂದ ವರ್ಷಕ್ಕೆ ಗಣನೀಯ ಶೇ.14ರಷ್ಟು ಬೆಳವಣಿಗೆ ದಾಖಲಾಗುತ್ತಿದೆ.
ಈ ಪೈಕಿ, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಶೇ.21ರಷ್ಟು ಏರಿಕೆಯಾಗಿದ್ದು, ಒಟ್ಟು 321,418 ಮೆಟ್ರಿಕ್ ಟನ್ ಸರಕು ಸಾಗಿಸಲಾಗಿದೆ. ದೇಶೀಯ ಸರಕು ಸಾಗಣೆಯಲ್ಲಿ ಶೇ.4ರಷ್ಟು ಏರಿಕೆಯಾಗಿದ್ದು, 181,062 ಮೆಟ್ರಿಕ್ ಟನ್ ತಲುಪಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ನಾಲ್ಕನೇ ವರ್ಷ, ಮಾಂಸ, ಹಣ್ಣು, ತರಕಾರಿ, ಹೂವು ಸೇರಿದಂತೆ ಬೇಗ ಕೊಳೆತುಹೋಗುವ ಪದಾರ್ಥಗಳ ರಫ್ತಿನಲ್ಲಿ ಭಾರತದ ನಂ.1 ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ
ಸಿದ್ಧ ಉಡುಪುಗಳು, ಔಷಧಿಗಳು ಮತ್ತು ಯಂತ್ರೋಪಕರಣಗಳ ಭಾಗಗಳ ಸಾಗಣೆಯಲ್ಲೂ ಹೆಚ್ಚಳ ಕಂಡುಬಂದಿದ್ದು, ಮಾವು ಮತ್ತು ಕೊತ್ತಂಬರಿ ರಫ್ತಿನಲ್ಲಿ ಮುನ್ನಡೆ ಸಾಧಿಸಿದೆ.
ಬೆಂಗಳೂರು ವಿಮಾನ ನಿಲ್ದಾಣವು ಸರಕು ಸಾಗಣೆಗೆ 12 ಮೀಸಲಾದ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಣಾಮಕಾರಿ ಜಾಗತಿಕ ಸಂಪರ್ಕವನ್ನು ಹೊಂದಿದ್ದು, ಸಿಂಗಾಪುರ, ಲಂಡನ್, ಫ್ರಾಂಕ್ಫರ್ಟ್, ಚಿಕಾಗೋ ಮತ್ತು ಮಸ್ಕತ್ನಂತಹ ಪ್ರಮುಖ ರಫ್ತು ಕೇಂದ್ರಿತ ನಗರಗಳನ್ನು ಸಂಪರ್ಕಿಸುತ್ತದೆ. ಆದರೆ ಪ್ರಮುಖ ಆಮದುಗಳು ಶೆನ್ಜೆನ್, ಸಿಂಗಾಪುರ್, ಶಾಂಘೈ, ಹಾಂಗ್ ಕಾಂಗ್ ಮತ್ತು ಫ್ರಾಂಕ್ಫರ್ಟ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಮದು ಸರಕುಗಳು ಬರುತ್ತವೆ.
ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ನಾವು ಸಿದ್ಧ : ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಅವರು ಮಾತನಾಡಿ, “ಬೆಂಗಳೂರು ಮತ್ತು ಭಾರತದಲ್ಲಿ ವಾಯುಯಾನದ ಬೆಳವಣಿಗೆಯ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ದಕ್ಷಿಣ ಮತ್ತು ಮಧ್ಯ ಭಾರತದ ಹೆಬ್ಬಾಗಿಲಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ವಾಯುಯಾನ ಪ್ರದೇಶ, ಲ್ಯಾಂಡ್ಸೈಡ್ ಮತ್ತು ಟರ್ಮಿನಲ್ ಸಾಮರ್ಥ್ಯಗಳ ವಿಸ್ತರಣೆಗೆ ಇನ್ನಷ್ಟು ಹೂಡಿಕೆ ಹೆಚ್ಚಿಸುವತ್ತ ಗಮನಹರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ₹17,000 ಕೋಟಿಗಿಂತಲೂ ಹೆಚ್ಚು ಹೂಡಿಕೆಯೊಂದಿಗೆ, ಈ ಪ್ರದೇಶದಲ್ಲಿ ಪ್ರಯಾಣಿಕರು ಮತ್ತು ಸರಕು ಸಾಗಣೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ನಾವು ಸಿದ್ಧರಾಗಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿಗೆ ಸೇವೆ ಸಲ್ಲಿಸುವ ಪ್ರಮುಖ ವಿಮಾನ ನಿಲ್ದಾಣವಾಗಿದ್ದು, ಇದು ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಅಲ್ಲದೆ ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಪ್ರಮುಖ ಜಾಗತಿಕ ತಂತ್ರಜ್ಞಾನ ಮತ್ತು ನವೋದ್ಯಮ ಕೇಂದ್ರವಾಗಿ ವ್ಯಾಪಕವಾಗಿ ಗುರುತಿಸಿಕೊಂಡಿದೆ. 2008ರಲ್ಲಿ ತೆರೆಯಲ್ಪಟ್ಟ ಇದು ಆಧುನಿಕ ಸೌಲಭ್ಯಗಳು ಮತ್ತು ಸೇವೆಗಳನ್ನು ಹೊಂದಿದ್ದು, ಸುಸ್ಥಿರತೆ ಮತ್ತು ನಡೆಯುತ್ತಿರುವ ವಿಸ್ತರಣೆಗಳ ಮೇಲೆ ಕೇಂದ್ರೀಕರಿಸಿ ಬೆಂಗಳೂರನ್ನು ಜಗತ್ತಿಗೆ ಸಂಪರ್ಕಿಸುವ ಮೂಲಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಪ್ರಮುಖ ಹೆಬ್ಬಾಗಿಲಾಗಿ ಹೊರಹೊಮ್ಮಿದೆ.
ಈ ಸುದ್ದಿ ಓದಿದ್ದೀರಾ? ಕೇಂದ್ರ ಸರ್ಕಾರ ಏರಿಸಿರುವ ಅಡುಗೆ ಅನಿಲ ದರ ಅತಿ ಕಡಿಮೆ: ಪ್ರತಿಪಕ್ಷ ನಾಯಕ ಆರ್.ಅಶೋಕ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಮನಾರ್ಹವಾದ ಬೆಳವಣಿಗೆಯತ್ತ ಮುನ್ನಡೆ ಸಾಧಿಸುತ್ತಿದ್ದು, ಈ ಮೂಲಕ, ಜಾಗತಿಕವಾಗಿ ಪ್ರಮುಖ ವಿಮಾನಯಾನ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿರುವ ಬದ್ಧತೆಯನ್ನು ಹೆಚ್ಚಿಸಿಕೊಂಡಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಮದು, ರಫ್ತು ಕಾರ್ಯಗಳು ಹಾಗೂ ಪ್ರಯಾಣಿಕರು ಹೆಚ್ಚಾಗಿರುವುದರಿಂದ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಬಹುದು. ಇದರಿಂದ ಸ್ಥಳೀಯ ಪ್ರದೇಶಗಳ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ. ಜತೆಗೆ ವಿಮಾನ ನಿಲ್ದಾಣದ ಹಲವು ವಿಭಾಗಗಳಲ್ಲಿಯೂ ಕೂಡ ಯುವಜನರು ಕಾರ್ಯ ನಿರ್ವಹಿಸಲು ಅವಕಾಶ ಸಿಗಬಹುದು. ಅಲ್ಲದೆ ಜಾಗತಿಕ ಮಟ್ಟದಲ್ಲಿ ಸ್ಥಳೀಯ ಪದಾರ್ಥಗಳು ಮಾರಾಟವಾಗುವ ಹೆಗ್ಗಳಿಕೆಯಿದೆ.