ಮಲೆನಾಡಿನ ಮೂಲನಿವಾಸಿಗಳ ಬದುಕಿಗೆ ಮಾರಕವಾದ ಸರ್ಕಾರಿ ಆದೇಶವನ್ನು ಹಿಂಪಡೆಯಲು ಮತ್ತು ಅರಣ್ಯ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ಮಲೆನಾಡಿನ ಪ್ರಮುಖ ಬಿಕ್ಕಟ್ಟುಗಳು ಮತ್ತು ಪರಿಹಾರದ ಮಾರ್ಗಗಳ ಕುರಿತು ಇಂದು ಸಂಜೆ 4ಕ್ಕೆ ಶಾಸಕರ ಭವನ-2ರಲ್ಲಿ ದುಂಡು ಮೇಜಿನ ಸಭೆ ಏರ್ಪಡಿಸಲಾಗಿದೆ.
ಮಲೆನಾಡಿನ ರೈತ, ಕಾರ್ಮಿಕ ಹಿತ ರಕ್ಷಣಾ ಸಮಿತಿಯಿಂದ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, “ಸರ್ಕಾರದ ಅರಣ್ಯ ಕಾಯ್ದೆ, ಕಾನೂನುಗಳ ಪ್ರಕಾರ ಅರಣ್ಯನಾಶಕರಾಗಿ ಕಂಡಿರುವುದು ದುರಂತವಾಗಿದೆ. ಜನವಿರೋಧಿ ಅರಣ್ಯ ಕಾಯ್ದೆಗಳು ಇಲ್ಲಿ ಬದುಕುತ್ತಿರುವ ಇಲ್ಲಿನ ಮಲೆನಾಡಿಗರಿಗೆ ಉರುಳಾಗಿವೆ” ಎಂದು ಆತಂಕ ವ್ಯಕ್ತಪಡಿಸಿದರು.
“2011ರಿಂದ ಈಚೆಗೆ ಕನಿಷ್ಠ ಈ ಭಾಗದಲ್ಲಿ ಬದುಕುತ್ತಿರುವ ಬಡ ಕುಟುಂಬಗಳಿಗೆ ಒಂದು ಹಕ್ಕುಪತ್ರವನ್ನಾದರೂ ನೀಡಲು ಸಾಧ್ಯವಾಗದ ಕಾರಣ ಅದೆಷ್ಟೋ ಬಡಕುಟುಂಬಗಳಿಗೆ ಈವರೆಗೂ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ. ನಿವೇಶನವನ್ನೂ ಮಂಜೂರು ಮಾಡಲು ಸಾಧ್ಯವಾಗಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಶಾಲೆ, ರಸ್ತೆ, ಆಸ್ಪತ್ರೆ, ಅಂಗನವಾಡಿ ಅಷ್ಟೇ ಅಲ್ಲದೆ ಸಾಮುದಾಯಿಕ ಸಾರ್ವಜನಿಕ ಉದ್ದೇಶಗಳಾದ, ಸ್ಮಶಾನಕ್ಕೂ ಕೂಡ ಒಂದು ಗುಂಟೆ ಜಾಗ ಇಲ್ಲದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮಲೆನಾಡಿನ ಜನ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನುಗಳನ್ನು ಒತ್ತುವರಿಯ ಹಣೆಪಟ್ಟಿ ಹಚ್ಚಿ ತೆರವುಗೊಳಿಸಬಾರದು. ಬದಲಿಗೆ ವೈಜ್ಞಾನಿಕ ಮಾನದಂಡವನ್ನು ಅನುಸರಿಸಿ ಮಿತಿಗೊಳಪಟ್ಟ ಹಕ್ಕುಪತ್ರ ವಿತರಿಸಬೇಕು. ಹಕ್ಕುಪತ್ರ ವಿತರಣೆಗೆ ತಡೆಯಾಗಿರುವ ಅರಣ್ಯ ಕಾಯ್ದೆಗಳಿಗೆ ತಿದ್ದುಪಡಿ ತರಬೇಕು. ಬದುಕಿಗಾಗಿ ಅಲ್ಲದೆ ಸಂಪತ್ತಿನ ಶೇಖರಣೆಗಾಗಿ ಮಾಡಿರುವ ಒತ್ತುವರಿಗಳನ್ನು ಮಾತ್ರವೇ ತೆರವುಗೊಳಿಸಬೇಕು” ಎಂದು ಆಗ್ರಹಿಸಿದರು.
“ಸ್ಥಳೀಯ ಪ್ರತಿನಿಧಿಗಳು, ಮಲೆನಾಡಿನ ಪರಿಸರ ತಜ್ಞರು, ಜನರು, ಜನ ಪ್ರತಿನಿಧಿಗಳನ್ನು ಒಳಗೊಂಡಂತಹ ಅರಣ್ಯ ಹಾಗೂ ಭೂಮಿತಿ ಕಾಯ್ದೆಗಳು ಇವೆಲ್ಲಾವನ್ನು ಸಮಗ್ರವಾಗಿ ಅಧ್ಯಯನ ಮಾಡುವ ಒಂದು ಸಮಿತಿಯನ್ನು ರಚನೆ ಮಾಡಬೇಕು. ಭೌಗೋಳಿಕ ಪ್ರದೇಶ ಹಾಗೂ ಅತಿವೃಷ್ಠಿ, ಅನಾವೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು, ತಜ್ಞರ ಸಮಿತಿ ರಚನೆ ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ಭೂಮಿಯನ್ನು ಹಂಚಿಕೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಲೆನಾಡಿನ ಜನವಿರೋಧಿ ಅರಣ್ಯ ಕಾಯ್ದೆ ಕೈಬಿಡುವಂತೆ ನಿಯೋಗ; ಸಮಸ್ಯೆ ಪರಿಹಾರಕ್ಕೆ ಸಚಿವ ಕೃಷ್ಣೆಬೈರೆಗೌಡ ಭರವಸೆ
“ಈಗಾಗಲೇ ಅರ್ಜಿ ನಮೂನೆ 53 ಮತ್ತು 57ರಲ್ಲಿ ಭೂಮಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಹಾಗೂ ವಸತಿ ಹಕ್ಕಿಗಾಗಿ ಸಲ್ಲಿಸಿರುವ 94 ಸಿ ಮತ್ತು 94ಸಿ ಸಿ, ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ, ಅರ್ಹ ಫಲಾನುಭವಿಗಳಿಗೆ ನೀಡಬೇಕು. ಜಾಗತಿಕ ತಾಪಮಾನದ ಕಾರಣದಿಂದ ಹವಾಮಾನದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಸರಿಮಾಡಲು ಮಲೆನಾಡಿನ ಜನರಿಗೆ ಮಾತ್ರ ಹೊಣೆಗಾರಿಕೆ ನೀಡುವುದು ಸರಿಯಲ್ಲ. ಮುಂದುವರೆದ ದೇಶಗಳು, ಆಧುನಿಕ ಜಗತ್ತಿಗೆ ತೆರೆದುಕೊಂಡು ಪರಿಸರ ಮಾಲಿನ್ಯಕ್ಕೆ ಕಾರಣರಾಗಿರುವ ಎಲ್ಲ ನಾಗರಿಕರ ಜವಾಬ್ದಾರಿಯೆಂದು ಪರಿಗಣಿಸಬೇಕು” ಎಂಬುದು ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ರೈತ ಕಾರ್ಮಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅತ್ತಿಕುಳಿ ಸುಂದರೇಶ್, ಕಾರ್ಯದರ್ಶಿ ಪ್ರಸನ್ನ ಕುಮಾರ್ ಕಿಬ್ಬಳ್ಳಿ, ಮಲೆನಾಡು ಉಳಿಸಿ ಅಭಿಯಾನ ಸಂಚಾಲಕ ಕೆ ಎಲ್ ಅಶೋಕ್, ಜನಶಕ್ತಿ ಸುರೇಶ್, ಮೀಸಲು ಅರಣ್ಯ ವಿರೋಧಿ ಒಕ್ಕೂಟ ಕೌಳಿ ರಾಮು, ಮಲೆನಾಡು ಆದಿವಾಸಿ ಮುಖಂಡ ವೆಂಕಟೇಶ್ ಹಾಗಲಗಂಚಿ, ಸಮಿತಿಯ ಅಭಿಷೇಕ್, ಸುಜಿತ್, ಅವಿನಾಶ್ ಹೇರೂರು ಇದ್ದರು.