ಹಾವು ಕಚ್ಚಿದ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿಗಳು ಹೆದರಬಾರದು, ಆಂಬುಲೆನ್ಸ್ ಅಥವಾ ಇನ್ನಿತರ ವಾಹನದಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಹಾವು ಕಡಿತ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕುರಿತ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾವು ಕಡಿತ ಎಂದರೆ ಹಾವಿನ ಕೋರೆ ಹಲ್ಲುಗಳು ಚರ್ಮವನ್ನು ಚುಚ್ಚುವುದರಿಂದ ಉಂಟಾಗುವ ಗಾಯವಾಗಿದೆ. ಹಾವು ಭೇಟೆಯನ್ನು ಹಿಡಿಯಲು ಅಥವಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಚ್ಚುತ್ತದೆ. ಹಾವಿನ ಕಡಿತವು ಗಾಯವನ್ನು ಉಂಟುಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಜೀವಕ್ಕೆ ಅಪಾಯವನ್ನು ಉಂಟುಮಾಡಬಹುದು ವಿಷಕಾರಿ ಅಲ್ಲದ ಹಾವು ಕಡಿತದಿಂದ ಸೌಮ್ಯವಾದ ಊತ, ಚರ್ಮದಲ್ಲಿ ಬದಲಾವಣೆಗಳು (ಕೆಂಪು ಅಥವಾ ನಿಮ್ಮ ನೈಸರ್ಗಿಕ ಚರ್ಮದ ಬಣ್ಣಕ್ಕಿಂತ ಗಾಢವಾದ ಬಣ್ಣ), ಕಚ್ಚಿದ ಸ್ಥಳದಲ್ಲಿ ರಕ್ತಸ್ರಾವವಾಗುವ ಲಕ್ಷಣಗಳು ಕಂಡುಬರುತ್ತದೆ.
ವಿಷಪೂರಿತ ಹಾವು ಕಡಿತವು ಚರ್ಮದ ಮೇಲೆ ಕಚ್ಚಿದ ಗುರುತುಗಳಿಂದ ಉಂಟಾದ ಗಾಯಗಳು ಆಗುತ್ತವೆ, ಕಚ್ಚಿದ ಸ್ಥಳದಲ್ಲಿ ಅಥವಾ ನಿಮ್ಮ ಕೈಕಾಲು ಅಥವಾ ಕಚ್ಚಿದ ದೇಹದಾದ್ಯಂತ ನೋವು ಎಲ್ಲಾ ವಿಷಕಾರಿ ಹಾವು ಕಡಿತ ನೋವನ್ನು ಉಂಟುಮಾಡುವುದಿಲ್ಲ. ಚರ್ಮದ ಬಣ್ಣ ಬದಲಾಗುತ್ತದೆ, ಬೆವರುವುದು ಮತ್ತು ಜೊಲ್ಲು ಸುರಿಸುವಿಕೆ, ವಾಕರಿಕೆ ಮತ್ತು ವಾಂತಿ, ತಲೆ ನೋವು, ತಲೆ ತಿರುಗುವಿಕೆ ಮತ್ತು ದೃಷ್ಟಿ ಮಂದವಾಗುವಿಕೆ ಹಾಗೂ ನಿಲ್ಲದ ರಕ್ತಸ್ರಾವ (ಅಸಹಜ ರಕ್ತ ಹೆಪ್ಪುಗಟ್ಟುವಿಕೆ), ಕಡಿಮೆ ರಕ್ತದೊತ್ತಡ, ವೇಗವಾದ ಹೃದಯ ಬಡಿತ ಮತ್ತು ದುರ್ಬಲ ನಾಡಿ, ಉಸಿರಾಟದ ತೊಂದರೆ, ಮುಖ ಮತ್ತು ಕೈಕಾಲುಗಳಲ್ಲಿ ಸ್ನಾಯು ದೌರ್ಬಲ್ಯ ಅಥವಾ ಸೆಳೆತ ಮತ್ತು ಮರಗಟ್ಟುವಿಕೆ, ತೀವ್ರ ಊತ ಇಂತಹ ಲಕ್ಷಣಗಳಿಂದ ಕಂಡುಬರಬಹುದು ಎಂದು ತಿಳಿಸಿದರು.
ಮಾಡಬೇಕಾದ ಕಾರ್ಯಗಳು:
ಹೆದರಬೇಡಿ, ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮಾಧಾನವಾಗಿರಿಸಬೇಕು. ಹಾವಿನಿಂದ ನಿಧಾನವಾಗಿ ದೂರ ಸರಿಯಬೇಕು. ಹಾವು ಕಚ್ಚಿದ ದೇಹದ ಭಾಗವನ್ನು ಏನೂ ಮಾಡಬಾರದು. ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗರ, ಬೆಲ್ಟ್, ಆಭರಣಗಳು, ವಾಚ್, ಬಿಗಿಯಾದ ಬಟ್ಟೆಗಳನ್ನು ಕಳಚಬೇಕು. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಬೇಕು. ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ತಕ್ಷಣವೇ ನೇರವಾಗಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಬೇಕೆಂದರು.
ಮಾಡಬಾರದ ಕಾರ್ಯಗಳು:
ಗಾಬರಿಯಾಗಬಾರದು. ರಕ್ತ ಬಂಧಕ ಪಟ್ಟಿ, ಬಿಗಿಯಾದ ಬಟ್ಟೆಯನ್ನು ಕಟ್ಟಬಾರದು. ಗಾಯವನ್ನು ಕೊಯ್ಯಬಾರದು ಹಾಗೂ ಏನನ್ನು ಹಚ್ಚಬಾರದು. ನಿಮ್ಮ ಬಾಯಿಯಿಂದ ವಿಷವನ್ನು ಹೀರಬಾರದು. ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಾಟಿ ಮದ್ದು ಸೇರಿದಂತೆ ಇನ್ಯಾವುದೇ ಅಸುರಕ್ಷಿತ ಚಿಕಿತ್ಸಾ ಪದ್ಧತಿಗಳನ್ನು ಅವಲಂಬಿಸಬಾರದು. ಹಾವನ್ನು ಹಿಡಿಯುವ ಅಥವಾ ಕೊಲ್ಲುವ ಪ್ರಯತ್ನ ಮಾಡದಿರಿ, ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಮದುವೆ ನೆಪದಲ್ಲಿ ಮಹಿಳೆಯರಿಗೆ ವಂಚನೆ; ಆರೋಪಿ ಸುರೇಶ್ ಬಂಧನ
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕೃಷ್ಣಪ್ರಸಾದ್, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.