ಕವಿ, ಬರಹಗಾರನಿಗೆ ಬದ್ಧತೆ ಮತ್ತು ಬರವಣಿಗೆಯ ಮೇಲೆ ವಿಶ್ವಾಸವಿದ್ದಾಗ ಮಾತ್ರ ಉತ್ತಮ ಕವಿಯಾಗಬಲ್ಲ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಕಮಲನಗರ ಪಟ್ಟಣದ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬುಧವಾರ ಆಯೋಜಿಸಿದ್ದ ಸಾಹಿತಿ ಮಲ್ಲಿಕಾರ್ಜುನ ಮಾಲಿ ಪಾಟೀಲ್ ರಚಿಸಿದ ʼಚಲನಶೀಲʼ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ಸಾಹಿತಿಗೆ ಬರವಣಿಗೆ ನಿತ್ಯಕರ್ಮವಾಗಬೇಕು. ಬದ್ಧತೆ ಇಟ್ಟುಕೊಂಡವರೇ ನಿಜವಾದ ಸಾಹಿತಿಗಳು. ಬರಹಗಾರ ಮೊದಲು ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳಬೇಕು. ಎಲ್ಲಿಯವರೆಗೆ ಅಧ್ಯಯನಶೀಲ, ಸಂವೇದನಾಶೀಲರು ಆಗುವುದಿಲ್ಲವೋ ಅಲ್ಲಿಯವರೆಗೆ ಪರಿಪೂರ್ಣತೆ ಪಡೆಯಲಾರ” ಎಂದರು.
ಹಲಬರ್ಗಾ ಸಂಸ್ಥಾನ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, “ಸಾಹಿತಿ ಮಲ್ಲಿಕಾರ್ಜುನ ಮಾಲಿ ಪಾಟೀಲ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರ ಗ್ರಂಥಪಾಲಕರಾಗಿ ಸೇವೆ ಮುಂದುವರಿಸಿ, ಇದೀಗ ಅದ್ಭುತವಾದ ಕವನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ” ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾಲ್ಕಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರ ಬಿರಾದಾರ ಕೃತಿ ಪರಿಚಯ ಮಾಡಿದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ, ಸಾಹಿತಿ ಸಂಗಮೇಶ ಮುರ್ಕೆ ಮಾತನಾಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ದಿಲ್ಲಿ ಚಲೋ ಮತ್ತು ಬಿಜೆಪಿಯ ಭಂಡತನ
ಭಾಲ್ಕಿ ಹಿರೇಮಠದ ಬಸವಲಿಂಗ ಸ್ವಾಮೀಜಿ, ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ್, ಎಡಿ ಹಣಮಂತರಾಯ ಕೌಟಗೆ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಶಿವಶಂಕರ ಟೋಕರೆ,
ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಮಾಣಿಕಪ್ಪಾ ಗೊರನಾಳೆ, ಪ್ರೊ.ಎಸ್.ಎನ್.ಶಿವಣಕರ, ಪ್ರಾಚಾರ್ಯ ಓಂಕಾಂತ ಪಾಟೀಲ್, ಬಸವರಾಜ ಪಾಟೀಲ್, ಪ್ರಕಾಶ ಮಾನಕರಿ, ಚಂದ್ರಕಾಂತ ಸಂಗಮೆ, ಶ್ರೀರಂಗ
ಪರಿಹಾರ, ಶಿವಕುಮಾರ ಧರಣೆ, ಯಶವಂತ ಬಿರಾದಾರ, ಧನರಾಜ ಭವರಾ, ಸಾಯಿನಾಥ ಕಾಂಬಳೆ, ಸಂತೋಷ ಸುಲಾಕೆ, ಪ್ರಶಾಂತ ಖಾನಾಪುರೆ, ಜನಾರ್ದನ ಸಾವರ್ಗೇಕರ್, ಸಂತೋಷ ಸುಲಾಕೆ ಇತರರಿದ್ದರು. ಸಾಕ್ಷಿ ಖಾನಾಪುರೆ ಪ್ರಾರ್ಥನೆ ಗೀತೆ ಹಾಡಿದರು. ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಸ್ವಾಗತಿಸಿದರು. ಡಾ.ಶ್ರೀನಿವಾಸ ಬೇಂದ್ರೆ ವಂದಿಸಿದರು. ಪ್ರಾಂಶುಪಾಲ ಶಿವಾಜಿ ಆರ್.ಎಚ್ ನಿರೂಪಿಸಿದರು.