ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಅತ್ಯಾಚಾರದ ವಿಡಿಯೊ ಚಿತ್ರೀಕರಿಸಿಕೊಂಡು ಬೆದರಿಸುತ್ತಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
“ಅಭಿಷೇಕ ದೇವನೂರು, ಆದಿಲ್ ಶಾ ಬಂಧಿತ ಆರೋಪಿಗಳು. ಇನ್ನೊಬ್ಬ ಅರೋಪಿ ಕೌತುಬ್ ಬಾಬುಸಾಬ್ ಬಡಿಗೇರ ತಲೆಮರೆಸಿಕೊಂಡಿದ್ದಾನೆ. ಮೂವರ ಮೇಲೂ ಪೋಕ್ಸೊ ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಬುಧವಾರ ತಿಳಿಸಿದ್ದಾರೆ.
“ಇಬ್ಬರೂ ಯುವತಿಯರು ಜಿಲ್ಲೆಯ ಕಾಲೇಜೊಂದರಲ್ಲಿ ಪಿಯುಸಿ(17 ವರ್ಷದ ಇಬ್ಬರು ಯುವತಿಯರು) ಓದುತ್ತಿದ್ದಾರೆ. ಅಭಿಷೇಕ ದೇವನೂರು ಎಂಬಾತ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಒಬ್ಬ ಯುವತಿಯ ಪರಿಚಯ ಮಾಡಿಕೊಂಡಿದ್ದ. ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿದ ಯುವತಿ ಆರೋಪಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಜನವರಿ 3ರಂದು ಅಥಣಿ ತಾಲೂಕಿನ ಕೊಕಟನೂರು ಜಾತ್ರೆಯಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿ
ಪರಿಚಯ ಮಾಡಿಕೊಂಡಿದ್ದರು. ಎರಡನೇ ಭೇಟಿಯಲ್ಲಿ ಯುವತಿಯನ್ನು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿಬರುವುದಾಗಿ ಅಭಿಷೇಕ ಆಹ್ವಾನಿಸಿದ್ದ. ಆಗ ಯುವತಿ ತನ್ನ ಸಹಪಾಠಿಯಾದ ಇನ್ನೊಬ್ಬ ಯುವತಿಯನ್ನೂ ಕರೆದಕೊಂಡು ಬಂದಿದ್ದಳು” ಎಂದು ತಿಳಿಸಿದ್ದಾರೆ.
ಅಭಿಷೇಕ ಕೂಡ ತನ್ನ ಇಬ್ಬರು ಸ್ನೇಹಿತರಾದ ಆದಿಲ್ ಶಾ ಮತ್ತು ಕೌತುಕ್ನನ್ನು ಕರೆದುಕೊಂಡು ಬಂದಿದ್ದ. ಕಾರೊಂದರಲ್ಲಿ ಎಲ್ಲರೂ ಪ್ರಯಾಣ ಬೆಳೆಸಿದ್ದರು.
“ಮೂವರು ಯುವಕರು ಯುವತಿಯರನ್ನು ಸವದತ್ತಿ ಹೊರವಲಯದ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಗುಡ್ಡದಲ್ಲಿ ಅಭಿಷೇಕ ಹಾಗೂ ಆದಿಲ್ ಶಾ ಸೇರಿಕೊಂಡು ಒಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು, ಕೌತುಬ್ ಎಂಬಾತ ಇನ್ನೊಬ್ಬ ಕಾರಿನಲ್ಲಿ ಇನ್ನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದರು.
ಈ ಸುದ್ದಿ ಓದಿದ್ದೀರಾ? ಉದ್ಯೋಗ ಮಾಹಿತಿ | ವೈದ್ಯಕೀಯ ವಿಭಾಗದ ಪ್ರೊಫೆಸರ್ ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಸಲು ಜ.30 ಕೊನೆಯ ದಿನ
“ಅತ್ಯಾಚಾರ ಮಾಡಿದ ಸಂದರ್ಭದ ಪ್ರತಿ ಕ್ಷಣಗಳನ್ನೂ ಯುವಕರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ವಿಡಿಯೊಗಳನ್ನು ಇಟ್ಟುಕೊಂಡು ಪದೇಪದೆ ತಮ್ಮೊಂದಿಗೆ ಬರುವಂತೆ ಬೆದರಿಕೆ ಒಡ್ಡಲು ಶುರು ಮಾಡಿದ್ದರು. ʼಮುಂದಿನ ವಾರ ಎಲ್ಲರೂ ಸೇರಿ ಗೋವಾಗೆ ಹೋಗೋಣ, ಬರದೇ ಇದ್ದರೆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆʼ ಎಂದು ಬ್ಲ್ಯಾಕ್ಮೇಲ್ ಮಾಡಿದ್ದು, ಇದರಿಂದ ಹೆದರಿದ ಒಬ್ಬ ಯುವತಿ ಜನವರಿ 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದರು. ಬಳಿಕ ಪ್ರಕರಣ ಗೊತ್ತಾಗಿದೆ” ಎಂದು ಎಸ್ಪಿ ತಿಳಿಸಿದರು.
“ಅತ್ಯಾಚಾರ ಹಾಗೂ ವಿಡಿಯೊ ಮಾಡಿಕೊಂಡ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುತ್ತೇವೆಂದು ಯುವತಿಯರನ್ನು ಹೆದರಿಸಿದ್ದರು. ಹೀಗಾಗಿ, ಯುವತಿ ತಡವಾಗಿ ದೂರು ನೀಡಿದ್ದಾರೆ” ಎಂದು ವಿವರಿಸಿದರು. ಇನ್ನೊಬ್ಬನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ” ಎಂದರು.