ಪ್ರವಾಸದ ಮಾರ್ಗ ಮಧ್ಯೆ ನಿರ್ಗತಿಕ ಅಜ್ಜಿಯ ಕುಟುಂಬವನ್ನು ಕಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹಾಯ ಮಾಡಿದ್ದು, ಸರ್ಕಾರಿ ಯೋಜನೆಗಳನ್ನು ದೊರಕಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮದ ನಿಮಿತ್ಯ ವಿಜಯಪುರಕ್ಕೆ ಪ್ರವಾಸ ಕೈಗೊಂಡಿದ್ದರು. ಬಳಿಕ ಬೆಳಗಾವಿಗೆ ವಾಪಸ್ ಬರುವಾಗ ವಿಜಯಪುರ-ಬಾಗಲಕೋಟೆಯ ಹೆದ್ದಾರಿಯ ಪಕ್ಕದ ಹನಗನಹಳ್ಳಿಯ ರಸ್ತೆ ಪಕ್ಕದಲ್ಲಿ ಊಟಕ್ಕೆಂದು ವಾಹನ ನಿಲ್ಲಿಸಿದರು. ಈ ವೇಳೆ ಊಟ ಮಾಡುವಾಗ ಪಕ್ಕದಲ್ಲಿದ್ದ ಸಣ್ಣ ಮನೆಯ ಮುಂದೆ ಅಜ್ಜಿಯೊಬ್ಬರು ಬಾಟಲಿಗಳಲ್ಲಿ ನೀರು ತುಂಬಿಸಿ ಮನೆಯ ಮುಂದೆ ಇಡುತ್ತಿರುವುದನ್ನು ಗಮನಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ವಿಚಾರಿಸಿದಾಗ ರಸ್ತೆಯಲ್ಲಿ ಹೋಗುವ ಜನರು ನೀರು ಕುಡಿಯಲು ಬರುತ್ತಾರೆ. ಅವರಿಗೆ ಸಹಾಯವಾಗಲೆಂದು ಬಾಟಲಿಗಳಲ್ಲಿ ತುಂಬಿ ಇಡುತ್ತಿರುವುದಾಗಿ ಅಜ್ಜಿ ತಿಳಿಸಿದ್ದಾರೆ.
ಗೌರಮ್ಮ ವಾಡೆದ್ ಎಂಬ ಅಜ್ಜಿ ಹಾಗೂ ಜೊತೆಗಿದ್ದ ಮಗ ಮಲ್ಲು ಎಂಬುವವರನ್ನು ಕುರಿತು ವಿಚಾರಿಸಿದಾಗ ಮಾತನಾಡಿದ ಅವರು, “ಹಳ್ಳಿಯಲ್ಲಿ ಹೊಂದಿದ್ದ ಮನೆಯ ಜಾಗ ರಸ್ತೆ ಮಾಡುವಾಗ ಕೈ ತಪ್ಪಿದೆ. ಇದರಿಂದಾಗಿ ವಾಸಿಸಲು ಮನೆ ಇರಲಿಲ್ಲ. ನಂತರ ಈ ಸ್ಥಳದಲ್ಲಿದ್ದ ತೋಟದ ಮಾಲೀಕರು ಒಂದೇ ಕೊಠಡಿಯಿರುವ ಮನೆಯನ್ನು ನೀಡಿದ್ದು, ವಾಸಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಅಡುಗೆ ಮಾಡಲು ಪಾತ್ರೆಗಳಾಗಲಿ, ಹಾಸಿಗೆ- ಹೊದಿಕೆಗಳಾಗಲಿ, ಕಾಳು ಕಡ್ಡಿಗಳಾಗಲಿ ಏನೂ ಇಲ್ಲದೆ ಊಟಕ್ಕೂ ಸರಿಯಾಗಿ ಗತಿ ಇಲ್ಲದಂತಾಗಿದೆ. ಈ ಮೊದಲು ಹೊಂದಿದ್ದ ಪಡಿತರ ಕಾರ್ಡ್ ಕೂಡ ಕಳೆದುಹೋಗಿದ್ದರಿಂದ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡಲೇ ಅವರಿಗೆ ಸ್ವಲ್ಪಮಟ್ಟಿಗೆ ಆರ್ಥಿಕ ನೆರವು ನೀಡಿ, ಆದಷ್ಟು ಬೇಗ ರೇಷನ್ ಕಾರ್ಡ್ ಮತ್ತು ಗೃಹಲಕ್ಷ್ಮೀ ಯೋಜನೆಯ ಹಣ ಸಿಗುವ ಬಗ್ಗೆ ತಿಳಿಸಿ, ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನೆರವು ನೀಡಿದ ಪೊಲೀಸ್ ಅಧಿಕಾರಿ
ಇದೇ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಎಎಸ್ಐ ಎಚ್ ಎಸ್ ಗೌಡರ್ ಅಧಿಕಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿದ್ದು, ಅಜ್ಜಿಯ ಕುಟುಂಬದ ಪರಿಸ್ಥಿತಿ ವಿವರಿಸಿದರು. ಆಗ ಅಜ್ಜಿ, ತಾವು ಉಪವಾಸವಿದ್ದ ಸಂದರ್ಭದಲ್ಲಿ ಎಎಸ್ಐ ತಮಗೆ ಅಕ್ಕಿ ನೀಡಿ, ಸಹಾಯ ಮಾಡಿರುವ ಬಗ್ಗೆ ಮಾತನಾಡಿದರು. ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದಕ್ಕಾಗಿ ಸರ್ಕಾರದ ಪರವಾಗಿ ಎಎಸ್ಐ ಗೌಡರ್ಗೆ ಹೆಬ್ಬಾಳ್ಕರ್ ಧನ್ಯವಾದ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಂಗಯ್ಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಕಚ್ಚಾಬಾಂಬ್ ಸ್ಫೋಟ; ಹಸು ಸಾವು
“ಸರ್ಕಾರ ನಿರ್ಗತಿಕರಿಗಾಗಿಯೇ ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿಗಳು ಬಡವರಿಗಾಗಿಯೇ ಯೋಜನೆಗಳನ್ನು ತಂದಿದ್ದಾರೆ. ಅದು ಯಾರಿಗೆ ತಲುಪಿಲ್ಲವೋ ಅಂತಹವರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಆ ಕೆಲಸವನ್ನು ಶೀಘ್ರದಲ್ಲೇ ಮಾಡಲಾಗುವುದು” ಎಂದು ತಿಳಿಸಿದ್ದಾರೆ.