ಒಂಬತ್ತು ತಿಂಗಳ ಗರ್ಭಿಣಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ನಡೆದಿದೆ.
ಚಿಕ್ಕೂಡ ನಿವಾಸಿ ಸುವರ್ಣಾ ಮಾಂತಯ್ಯ ಮಠಪತಿ(36) ಕೊಲೆಯಾದ ಗರ್ಭಿಣಿ. ಇವರು ಶುಕ್ರವಾರ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು, ಮೇವು ತರಲೆಂದು ಹೊಲಕ್ಕೆ ಹೋಗಿದ್ದರು. ಮರಳಿ ಬರುವಾಗ ಮಾರ್ಗಮಧ್ಯೆ ದುಷ್ಕರ್ಮಿಗಳು ಇವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಹೊಟ್ಟೆ, ಮುಖ ಹಾಗೂ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ರಕ್ತಸಿಕ್ತವಾಗಿ ಬಿದ್ದದ್ದ ಮಹಿಳೆಯನ್ನು ಕಂಡ ಜನರು, ಪತಿ ಮಾಂತಯ್ಯ ಅವರಿಗೆ ತಿಳಿಸಿದ್ದಾರೆ. ವಾಹನದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ನೆಲಮಂಗಲ | ಕಾರಿನ ಮೇಲೆ ಕಂಟೇನರ್ ಲಾರಿ ಪಲ್ಟಿ, 6 ಮಂದಿ ದಾರುಣ ಸಾವು
“ಮಾಂತಯ್ಯ ಮತ್ತು ಸುವರ್ಣ ದಂಪತಿಗೆ ಈಗಾಗಲೇ ನಾಲ್ವರು ಹೆಣ್ಣುಮಕ್ಕಳಿದ್ದು, 5ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ವೈದ್ಯರು ಜನವರಿ 30ಕ್ಕೆ ಹೆರಿಗೆ ದಿನಾಂಕ ನೀಡಿದ್ದರು. ಮಹಿಳೆ ಕೊಲೆ ಬಗ್ಗೆ ಯಾರ ಮೇಲೂ ಅನುಮಾನವಿಲ್ಲ ಎಂದು ಪತಿ ಹಾಗೂ ಸುವರ್ಣಾ ಅವರ ತಂದೆ-ತಾಯಿ ತಿಳಿಸಿದ್ದಾರೆ. ಅವರು ಏನಾದರೂ ದೂರು ನೀಡಿದರೆ ಕ್ರಮ ವಹಿಸಲಾಗುವುದು” ಎಂದು ಅಥಣಿ ಪೊಲೀಸರು ಮಾಹಿತಿ ನೀಡಿದರು.
ಘಟನೆಗೆ ಸಂಬಂಧಿಸಿದಂತೆ ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ