ಲೈಂಗಿಕ ಚಟುವಟಿಕೆಗಳಿಗೆ ತಾನು ಒಪ್ಪದಿದ್ದಾಗ ಮಗಳ ಮೇಲೆಯೇ ಎರಗಲೆತ್ನಿಸಿದ ಗಂಡನ ಹೀನಕೃತ್ಯ, ಕಿರುಕುಳಗಳಿಗೆ ಬೇಸತ್ತ ಪತ್ನಿ ಕಲ್ಲಿನಿಂದ ಜಜ್ಜಿ ಪತಿಯನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿಯಲ್ಲಿ ನಡೆದಿದೆ.
ಶ್ರೀಮಂತ ಇಟ್ನಾಳೆ ಕೊಲೆಯಾದ ವ್ಯಕ್ತಿ. ಪತ್ನಿ ಸಾವಿತ್ರಿ ಇಟ್ನಾಳೆ ಈಗ ಜೈಲು ಪಾಲಾಗಿದ್ದಾರೆ.
ಬೈಕ್ ಕೊಡಿಸುವಂತೆ ಕಿರುಕುಳ ಕೊಡುತ್ತಿದ್ದು, ಕುಡಿಯಲು ಹಣ ಕೇಳುತ್ತಿದ್ದ. ಯಾರ ಜೊತೆಗಾದರೂ ಮಲಗಿ ನನಗೆ ಹಣ ತಂದುಕೊಡು ಎಂದು ಪೀಡಿಸುತ್ತಿದ್ದ. ತನ್ನ ಮಗಳ ಮೇಲೆಯೇ ಲೈಂಗಿಕ ಚಟುವಟಿಕೆಗಳಿಗೆ ಮುಂದಾಗುತ್ತಿದ್ದ. ಇಂತಹ ಇವನ ನೀಚ ಕೃತ್ಯಗಳನ್ನು ನೋಡಿ ಸಹಿಸಲಾಗದೆ ಕೊಲೆ ಮಾಡಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾರೆ.
“ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೆತ್ನಿಸಿದ ದುಷ್ಟ ಗಂಡನ ಮೇಲೆ ಸಿಟ್ಟಿಗೆದ್ದ ಪತ್ನಿ ಸಾವಿತ್ರಿ, ಮಕ್ಕಳು ಮಲಗಿದ ಮೇಲೆ ಕಲ್ಲು ಎತ್ತಿ ಹಾಕಿ ಗಂಡನ ಕೊಲೆ ಮಾಡಿದ್ದಾಳೆ. ಗಂಡನನ್ನು ಕೊಂದ ಬಳಿಕ ಮನೆಯಲ್ಲಿ ಶವ ಇದ್ದರೆ ಬಂಧನ ಮಾಡುತ್ತಾರೆಂದು ತಿಳಿದು ದೇಹವನ್ನು ತುಂಡರಿಸಿ, ಚಿಕ್ಕ ಬ್ಯಾರೆಲ್ನಲ್ಲಿ ಹಾಕಿ ಬ್ಯಾರೆಲ್ ಉರುಳಿಸುತ್ತಾ ಶವ ಒಯ್ದು ಪಕ್ಕದ ಗದ್ದೆಗೆ ಹಾಕಿದ್ದಾಳೆ.
ತುಂಡು ಮಾಡಿದ ದೇಹವನ್ನು ಬ್ಯಾರಲ್ ಸಹಾಯದಿಂದ ಪಕ್ಕದ ಗದ್ದೆಗೆ ಸಾಗಿಸಿದ ಪತ್ನಿ ಸಾವಿತ್ರಿ, ತುಂಡಾಗಿದ್ದ ದೇಹವನ್ನು ಮತ್ತೆ ಹೊಲದ ಗದ್ದೆಯಲ್ಲಿ ಜೋಡಿಸಿದ್ದಾಳೆ. ಕೃತ್ಯಕ್ಕೆ ಬಳಸಿದ್ದ ಬ್ಯಾರೆಲ್ ತೊಳೆದು ಬಾವಿಗೆ ಎಸೆದಿದ್ದು, ಮನೆಗೆ ಬಂದು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆಯನ್ನು ಒಂದು ಚೀಲದಲ್ಲಿ ಹಾಕಿ, ಚೀಲ ಮೇಲಕ್ಕೆ ಬಾರದಂತೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾಳೆ.
ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಬಳಿಕ ತನ್ನ ಮೈಮೇಲಿ ರಕ್ತದ ಕಲೆಗಳಿದ್ದ ಬಟ್ಟೆಯನ್ನು ಸುಟ್ಟು ಹಾಕಿ, ಸುಟ್ಟಿದ್ದ ಬೂದಿಯನ್ನ ತಿಪ್ಪೆಗೆ ಎಸೆದು, ಕೊಲೆಗೆ ಬಳಸಿದ್ದ ಕಲ್ಲು ತೊಳೆದು ತಗಡಿನ ಶೆಡ್ನಲ್ಲಿ ಬಚ್ಚಿಟ್ಟಿದ್ದಳು. ಗಂಡನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದಳು. ಗಂಡನ ಕೊಲೆ ಮಾಡುವ ವೇಳೆ ನಿದ್ದೆಯಿಂದ ಎಚ್ಚರಗೊಂಡ ಮೊದಲ ಮಗಳಿಗೆ ಎಲ್ಲಿಯೂ ಹೇಳದಂತೆ, ತಾಕೀತು ಮಾಡಿದ್ದಾಳೆ. ಬೆಳಗಾಗುವಷ್ಟರಲ್ಲಿ ಕೊಲೆಯ ಸುಳಿವೇ ಸಿಗದಂತೆ ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು, ಬಾಣಂತಿ ಸಾವು: ಮಾಜಿ ಸಚಿವ ಹಾಲಪ್ಪ ಆಚಾರ್
ಜಮೀನಿನಲ್ಲಿ ಶವ ಸಿಗುತ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದ ಚಿಕ್ಕೋಡಿ ಪೊಲೀಸರು ತನಿಖೆ ವೇಳೆ ಹೆಂಡತಿ ಮೇಲೆ ಅನುಮಾನ ಪಟ್ಟಿದ್ದಾರೆ. ತಮ್ಮದೇ ಭಾಷೆಯಲ್ಲಿ ವಿಚಾರಿಸಿದ್ದು, ತನ್ನಿಂದ ತಪ್ಪಾಗಿದೆ ಕ್ಷಮಿಸಿರೆಂದು ಆರೋಪಿ ಸಾವಿತ್ರಿ ಪೋಲೀಸರ ಎದುರು ಕಣ್ಣೀರು ಹಾಕಿ ಗಂಡನ ಕರಾಳ ಹೀನಕೃತ್ಯಗಳನ್ನು ಹೇಳಿಕೊಂಡಿದ್ದಾರೆ.
ಚಿಕ್ಕೋಡಿ ಪೊಲೀಸರು ಈ ಪ್ರಕರಣವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.