ಭೂ ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ 7 ತಿಂಗಳ ಬಳಿಕ ಬಹಿರಂಗವಾಗಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆಯ ಪುತ್ರಿ ಬೆಳಗಾವಿ ಜಿಲ್ಲೆ ಕಾಗವಾಡ ಠಾಣೆಯಲ್ಲಿ ಗುರುವಾರ ಮೂವರ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿಯಾಗಿದೆ.
ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಕಾಗವಾಡ ತಹಶೀಲ್ದಾರ್ ಸಂಜಯ ಇಂಗಳೆ ಇವರುಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಮಹಿಳೆ ಮತ್ತು ಕುಟುಂಬದಿಂದ ಘಟನೆಗೆ ಸಂಬಂಧಿಸಿದತೆ ಮಾಹಿತಿ ಕಲೆ ಹಾಕಿರುವುದಾಗಿ ತಿಳಿದುಬಂದಿದೆ.
“2023ರ ಜುಲೈ 31ರಂದು ನನ್ನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದು, ಆಗಸ್ಟ್ 1ರಂದು ತಮ್ಮನ ಮೇಲೂ ಹಲ್ಲೆ ಮಾಡಿದ್ದಾರೆ. ಆ ಬಳಿಕ ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆಯನ್ನೂ ಕೂಡ ಒಡ್ಡಿದ್ದರು” ಎಂದು ಸಂತ್ರಸ್ತೆಯ ಪುತ್ರಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೃಷಿ ಸಲಕರಣಾ ವಿತರಕರು ಹೊಸ ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು: ಜಂಟಿ ಕೃಷಿ ನಿರ್ದೇಶಕ
ಘಟನೆಗೆ ಕಾರಣ
ಸರ್ಕಾರವು ಸಂತ್ರಸ್ತೆಗೆ ಮಂಜೂರು ಮಾಡಿದ್ದ ಮೂರು ಎಕರೆ ಭೂಮಿಯಲ್ಲಿ ಅರ್ಧ ಎಕರೆ ಭೂಮಿಯ ಒತ್ತುವರಿಯನ್ನು ಪ್ರಶ್ನಿಸಿದ್ದಕ್ಕಾಗಿ ಸಂತ್ರಸ್ತೆ ಮತ್ತು ಮಗನನ್ನು ಥಳಿಸಿದ್ದರು ಎನ್ನಲಾಗಿದೆ.
