ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕೆಂದು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ. ಮೇಕೆದಾಟು ಹೋರಾಟಗಾರರ ಕೇಸ್ ಹಿಂಪಡೆಯಲು ಮುಂದಾಗಿರುವ ಸರ್ಕಾರ, ಗಡಿ ಜಿಲ್ಲೆ ಹೋರಾಟಗಾರರನ್ನು ಮರೆತಿದೆ ಎಂದು ಆರೋಪಿಸಿ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಅಭಿವೃದ್ಧಿ ಸೇರಿದಂತೆ ಎಲ್ಲ ವಿಚಾರದಲ್ಲಿಯೂ ಉತ್ತರ ಕರ್ನಾಟಕ ತಾರತಮ್ಯಕ್ಕೆ ಒಳಗಾಗುತ್ತಿದೆ. ಈಗ ಹೋರಾಟಗಾರರ ವಿಚಾರದಲ್ಲೂ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಅನುಮಾನ ಮೂಡಿದೆ ಎನ್ನುತ್ತಿದ್ದಾರೆ ಹೋರಾಟಗಾರರು.
ತೀವ್ರ ವಿರೋಧದ ಮಧ್ಯೆ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ 2020ರಲ್ಲಿ ಕನ್ನಡ ಧ್ವಜವನ್ನು ನೆಟ್ಟು ಕನ್ನಡ ಸಂಘಟನೆಗಳು ಸಂಭ್ರಮಿಸಿದ್ದವು. ಇದಾದ ಒಂದು ವರ್ಷದ ಬಳಿಕ ಆ ಧ್ವಜ ಹಳೆಯದಾಗಿದ್ದು, ಹರಿದು ಹೋಗಿದೆ. ಹಾಗಾಗಿ, ಹೊಸ ಧ್ವಜ ಹಾರಿಸಬೇಕು. ನೀವು ಧ್ವಜ ಬದಲಿಸದಿದ್ದರೆ ನಾವೇ ಬದಲಿಸುತ್ತೇವೆ ಎಂದು ಕನ್ನಡ ಹೋರಾಟಗಾರರು ಪಾಲಿಕೆ ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಈ ವೇಳೆ ಅವರನ್ನು ತಡೆದ ಪೊಲೀಸರು ಹೋರಾಟಗಾರರನ್ನು ಬಂಧಿಸಿದ್ದರು. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಜೂನ್ 5, 2021ರಲ್ಲಿ ಈ ಸಂಬಂಧ ಕೇಸ್ ದಾಖಲಾಗಿತ್ತು.
ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಪ್ರತಿಭಟನೆ ಮಾಡಿದ್ದಿರಿ ಎಂದು 51(ಬಿ) ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಹೋರಾಟಗಾರರನ್ನು ಬಂಧಿಸಲಾಗಿತ್ತು. ಸದ್ಯ ಬೆಳಗಾವಿಯ ಜೆಎನ್ಎಫ್ಸಿ 2ನೇ ನ್ಯಾಯಾಲಯದಲ್ಲಿ ಶ್ರೀನಿವಾಸ ತಾಳೂಕರ್, ಅಕ್ಬರ್ ಸೆಡೇಕರ್, ರೇಷ್ಮಾ ಕಿತ್ತೂರು, ವಾಜೀದ್ ಹಿರೇಕೊಡಿ, ನಾಗೇಶ ಕೊಪ್ಪದ ಸೇರಿ 11 ಜನ ಕನ್ನಡ ಹೋರಾಟಗಾರರ ಮೇಲೆ ವಿಚಾರಣೆ ನಡೆಯುತ್ತಿದೆ.
ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳೂಕರ್, ಗಡಿಯಲ್ಲಿ ಕನ್ನಡ ಉಳಿಸಲು ಪ್ರತಿಕ್ಷಣವೂ ಹೋರಡುವ ನಾವು ಕೋರ್ಟ್ಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೇಕೆದಾಟು ಹೋರಾಟಗಾರ ಕೇಸ್ ಹಿಂಪಡೆಯುತ್ತೇವೆ ಎನ್ನುವ ಸರ್ಕಾರ, ಬೆಳಗಾವಿಯ ಕನ್ನಡ ಹೋರಾಟಗಾರರ ಬಗ್ಗೆ ಮಾತನಾಡುತ್ತಿಲ್ಲ. ಗಡಿ ಭಾಗದ ಹೋರಾಟಗಾರರಿಗೆ ಶಕ್ತಿ ತುಂಬಬೇಕಾದ ಸರ್ಕಾರವೇ ಹೀಗೆ ತಾರತಮ್ಯ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಕನ್ನಡ ಪರ ಹೋರಾಟಗಾರ ವಿಜಯಕುಮಾರ್ ಮಾತನಾಡಿ, ಗಡಿ ಕನ್ನಡ ಹೋರಾಟಗಾರರ ಮೇಲೆ ಪೊಲೀಸರು ಸುಳ್ಳು ಕೇಸ್ ದಾಖಲಿಸಿದ್ದು ಖಂಡನೀಯ. ತಕ್ಷಣವೇ ಕೇಸ್ ಹಿಂಪಡೆಯುವಂತೆ ಕನ್ನಡ ಸಂಘಟನೆ ಒಕ್ಕೂಟವು ಸಿಎಂ ಸಿದ್ದರಾಮಯ್ಯ ಅವರನ್ನು ಶೀಘ್ರವೇ ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ಏನೆನೋ ಅಪರಾಧ ಮಾಡಿದವರ ಕೇಸ್ ಹಿಂಪಡೆದು ರಾಜಮರ್ಯಾದೆ ಕೊಡ್ತಾರೆ. ಆದರೆ, ಕನ್ನಡ ಹೋರಾಟಗಾರರಿಗೆ ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ, ಎಂದು ಕಿಡಿಕಾರಿದ್ದಾರೆ.