ಬೆಳಗಾವಿ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಗೋಕಾವಿ ಗೆಳೆಯರ ಬಳಗ ಸಂಯುಕ್ತ ಆಶ್ರಯದಲ್ಲಿ ಜಯಾನಂದ ಮಾದರ ಅವರ ರಾಗರಸಗೀತೆ ಕೃತಿಯನ್ನು ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಜನಾರ್ಪಣೆಗೊಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಲೆಗಾಗಿ ಕಲೆ ಎನ್ನುವುದು ಅವಾಸ್ತವ. ಇಂದಿನ ಸಮಾಜದ ಸಂಕಟಗಳ ನಿವಾರಣೆಗೆ ಕಲೆ–ಸಾಹಿತ್ಯವನ್ನು ಸಾಧನವಾಗಿ ಬಳಸುವುದು ಅಗತ್ಯ. ವಿಚಾರ ಕ್ರಾಂತಿಯಾಗುವುದು ಕಲೆ–ಸಾಹಿತ್ಯದ ನಿಜವಾದ ಉದ್ದೇಶ. ಮಾನವೀಯತೆಯ ಉಳಿವಿಗಾಗಿ ಬರಹಗಾರರು ಮತ್ತು ಕಲಾವಿದರು ತಮ್ಮ ಸೃಜನಶೀಲತೆಯನ್ನು ಸಮಾಜಮುಖಿಯಾಗಿ ವ್ಯಕ್ತಪಡಿಸಬೇಕು” ಎಂದು ಅಭಿಪ್ರಾಯಪಟ್ಟರು.
ಹಿಂದೆ ಶೋಷಿತರು ಶೋಷಕರಿಗೆ – ನಾವೂ ಮನುಷ್ಯರಲ್ಲವೇ? ಎಂದು ಕೇಳುತ್ತಿದ್ದರು. ಆದರೆ ಇಂದು ಅಮಾಯಕರ ಮೇಲೆ ದೌರ್ಜನ್ಯ ಎಸಗುವ ಶೋಷಕರಿಗೆ – ನೀವೂ ನಮ್ಮಂತೆ ಮನುಷ್ಯರಲ್ಲವೇ? ಎಂದು ಪ್ರಶ್ನಿಸಬೇಕಾಗಿದೆ. ಅಲೆಮಾರಿಗಳಿಗೆ ಒಳ ಮೀಸಲಾತಿಯಲ್ಲಿ ಅನ್ಯಾಯ ಎಸಗಿದ ಸರ್ಕಾರದ ಕ್ರಮವನ್ನು ಖಂಡಿಸಿ ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ದರಾಮಯ್ಯ, ಸಿ.ಎಸ್. ದ್ವಾರಕನಾಥ್ ಮುಂತಾದ ಸಾಹಿತ್ಯಿಕರು ಧ್ವನಿ ಎತ್ತಿರುವುದು ಸಾಹಿತ್ಯ–ಕಲಾವಿದರು ಜನಪರರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದರು.

ರಂಗಕರ್ಮಿ ಶಿರೀಷ್ ಜೋಶಿ ಅವರು ಕೃತಿಯನ್ನು ಪರಿಚಯಿಸಿ, “ರಾಗರಸಗೀತೆ ಕೃತಿ ಸಂಗೀತ, ಸುಗಮ ಸಂಗೀತ, ಭಜನೆ ಹಾಗೂ ತತ್ವಪದ ಪರಂಪರೆಯ ತಾತ್ವಿಕ ಅಧ್ಯಯನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ವಿಶಿಷ್ಟ ಕೊಡುಗೆ” ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ ರಂಗಚಿಂತಕ ರವಿ ಕೋಟಾರಗಸ್ತಿ, “ಸಾಹಿತ್ಯವು ನೊಂದ ಜನರ ಧ್ವನಿಯಾಗಿ ಬೆಳೆಯಬೇಕು. ಕಲಾವಿದರು ಸಮಾಜದ ಪ್ರತಿಬಿಂಬವಾಗಿ ನಿಲ್ಲಬೇಕು. ಜಯಾನಂದ ಮಾದರರ ಈ ಕೃತಿ ಸಂಗೀತ ಅಧ್ಯಯನ ಮಾತ್ರವಲ್ಲದೆ ಜನಪದ ಸಂಶೋಧನೆಗೂ ಮಾರ್ಗದರ್ಶಿಯಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಕಾಶವಾಣಿಯ ಕಲಾವಿದ ಬಿ.ಸಿ. ದೇಗಾವಿಮಠ, ಡಾ. ಮಲ್ಲಿಕಾರ್ಜುನ್ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಯಾದವೇಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಶ್ರೀಮತಿ ರಜನಿ ಜೀರಗ್ಯಾಳ ಮಾತನಾಡಿದರು.
ಅದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಿ.ವೈ. ಮೆಣಸಿನಕಾಯಿ, ಮಹದೇವಿ ಕಿತ್ತೂರ, ಈಶ್ವರಚಂದ್ರ ಬೆಟಗೇರಿ, ಮೀನಾಕ್ಷಿ ಸೂಡಿ, ಶ್ರೀಶೈಲ್ ಶಿರೂರ್, ವಿದ್ಯಾ ರೆಡ್ಡಿ, ಹೇಮಾ ಸೋನಳ್ಳಿ ಹಾಗೂ ಸುನಂದ ಹಾಲಬಾವಿ ಕವನ ವಾಚಿಸಿದರು.
ಈ ಸುದ್ದಿ ಓದಿದ್ದಿರಾ ? ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರ್ಕಾರ ಸ್ಪಂದಿಸುವುದೇ?
ಬಂಡಾಯ ಸಂಘಟನೆಯ ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ, ಕನ್ನಡ ಅಧ್ಯಾಪಕರ ಪರಿಷತ್ತಿನ ಕಾರ್ಯದರ್ಶಿ ಸುರೇಶ ಹನಗಂಡಿ, ಮಾನವ ಬಂಧುತ್ವ ವೇದಿಕೆಯ ಪ್ರಕಾಶ ಬೊಮ್ಮಣ್ಣವರ್, ಪವನ್ ಮುಂತಾದವರು ಭಾಗವಹಿಸಿದ್ದರು. ಕೃತಿಕಾರ ಜಯಾನಂದ ಮಾದರ್ ಪ್ರಸ್ತಾವಿಕ ಮಾತುಗಳಾಡಿದರು. ಅರುಣ್ ಸೌತಿಕಾಯಿ ಸ್ವಾಗತಿಸಿದರು, ಆನಂದ್ ಸೋರಗಾವಿ ವಂದಿಸಿದರು. ಕಲಾವಿದ ರಾಮಚಂದ್ರ ಕಾಕಡೆ ನಿರೂಪಿಸಿದರು.