ಬೆಳಗಾವಿ ಜಿಲ್ಲೆಯ ಕಾಗವಾಡ ‘ತಾಲ್ಲೂಕಿನ ಮೋಳೆ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಶುಶ್ರೂಷಕರು ಹೆಚ್ಚಿನ ಪ್ರಮಾಣದಲ್ಲಿ ಡೋಸ್ ನೀಡಿ, ನಿರ್ಲಕ್ಷ್ಯ ತೋರಿದ ಪರಿಣಾಮ ಒಂದೂವರೆ ತಿಂಗಳ ಹಸುಗೂಸು ಸಾವನ್ನಪ್ಪಿದೆ’ ಎಂದು ಆರೋಪಿಸಿ ಹಸುಳೆಯ ಪಾಲಕರು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ಅಥಣಿ ತಾಲ್ಲೂಕಿನ ಭರಮಣಕೊಡಿ ದುಂಡಪ್ಪ ಬೇವನೂರ ಅವರ ಮಗುವಿಗೆ ಗುರುವಾರ ಕಾಗವಾಡ ತಾಲ್ಲೂಕಿನ ಮೋಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶೂಷಕರು ನರ್ಸ್ಗಳು ಪೋಲಿಯೊಗೆ ಸಂಬಂಧಿಸಿದಂತೆ ಅಗತ್ಯ ಲಸಿಕೆ ನೀಡಿದ್ದರು. ರಾತ್ರಿ ಮಗುವಿಗೆ ಜ್ವರ ಕಾಣಿಸಿದ್ದರಿಂದ ಅಥಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ಸ್ಥಿತಿ ಹದಗೆಟ್ಟಿದ್ದಕ್ಕೆ ಅಥಣಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಿ ಮಗು ಮೃತಪಟ್ಟಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಗುವಿಗೆ ಹೃದಯ ತೊಂದರೆ ಇತ್ತು. ಆದರೂ ಮಗುವಿಗೆ ಲಸಿಕೆ ನೀಡಬಹುದು. ಲಸಿಕೆ ನೀಡಿದಾಗ ಸ್ವಲ್ಪ ಮಟ್ಟಿಗೆ ಜ್ವರ ಬರುತ್ತವೆ. ಈಗಾಗಲೇ ನಾಲೈದು ಮಕ್ಕಳಿಗೆ ನೀಡಲಾಗಿದೆ. ಏನೂ ತೊಂದರೆ ಆಗಿಲ್ಲ. ಮಗುವಿಗೆ ರಾತ್ರಿ ಜ್ವರ ಹೆಚ್ಚಾದರೂ ಆಸ್ಪತ್ರೆಗೆ ತೋರಿಸದ ಪಾಲಕರು, ಬೆಳಿಗ್ಗೆ ಅಥಣಿ ಖಾಸಗಿ ಆಸ್ಪತ್ರೆಗೆ ತೋರಿಸಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಮಾಡಲು ಮುಂದಾಗಿದ್ದು ಆಸ್ಪತ್ರೆಗೆ ಬರುವುದಕ್ಕಿಂತ ಮೊದಲೇ ಮಗು ಸಾವನಪ್ಪಿತ್ತು’ ಎಂದು ಅಥಣಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಸಗೌಡ ಕಾಗೆ ತಿಳಿಸಿದ್ದಾರೆ