ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಒಂಬತ್ತು ಗ್ರಾಮಗಳು ಸೇರಿದಂತೆ ಕುಲವಳ್ಳಿ ʼಸಾಗುವಳಿ ಭೂಮಿಯ ಹಕ್ಕುಪತ್ರʼ ನೀಡುವಂತೆ ರೈತರು ಕೈಗೆತ್ತಿಕೊಂಡಿರುವ ಆಹೋರಾತ್ರಿ ಹೋರಾಟವನ್ನು ಕೈ ಬಿಡುವಂತೆ ಶಾಸಕ ಬಾಬಾಸಾಹೇಬ ಪಾಟೀಲ ಮನವಿ ಮಾಡಿದ್ದಾರೆ.
ಕಿತ್ತೂರು ತಾಲೂಕಿನ ತಹಶೀಲ್ದಾರ್ ಕಚೇರಿಯ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟ ಅಹೋರಾತ್ರಿ ಹೋರಾಟವನ್ನು ಉದ್ದೇಶಿಸಿ ಶಾಸಕ ಬಾಬಾಸಾಹೇಬ ಪಾಟಿಲ್ ಮಾತನಾಡಿ, “ಕುಲವಳ್ಳಿ ಸಾಗುವಳಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತರಲಾಗಿದೆ. ಸಚಿವರು ಜಿಲ್ಲಾಧಿಕಾರಿ ಜತೆಗೆ ಚರ್ಚೆ ಮಾಡಿದ್ದಾರೆ. ಇದಕ್ಕೆ ಸಮಯ ಬೇಕಾಗುತ್ತದೆ. ಸಚಿವರೂ ಕೂಡಾ ರೈತರ ಸಾಗುವಳಿ ಭೂಮಿಯನ್ನು ಮತ್ತೊಮ್ಮೆ ಸರ್ವೇ ಮಾಡಿಸಿ ಪಿಟಿ ಶೀಟ್ ನಕ್ಷೆ ನೀಡುವಂತೆ ತಿಳಿಸಿದ್ದಾರೆ” ಎಂದರು.
“ರೈತರಿಗೆ ಯಾವುದೇ ತೊಂದರೆ ನೀಡಿಲು ಬಿಡುವುದಿಲ್ಲ. ನಿಮ್ಮ ಸಾಗುವಳಿ ಭೂಮಿಯನ್ನು ಮೊದಲಿನಂತೆ ಉಳುಮೆ ಮಾಡಿಕೊಂಡು ಜೀವನ ಸಾಗಿಸಿ. ನಿಮ್ಮಗೆ ಎಲ್ಲ ರೀತಿ ಸಹಕಾರ ನೀಡುತ್ತೇನೆ” ಎಂದರು.
ರೈತ ಹೋರಾಟಗಾರ್ತಿ ನಾಗರತ್ನ ಪಾಟೀಲ ಮಾತನಾಡಿ, “ರೈತರು ಹಲವು ದಿನಗಳಿಂದ ಅನಿರ್ದಿಷ್ಟ ಹೋರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯವರು ರೈತರ ಸಮಸ್ಯೆ ಕೇಳುವ ಪ್ರಯತ್ನ ಮಾಡುತ್ತಿಲ್ಲ. ಆಗಿನ ಸಚಿವ ಕಾಗೋಡು ತಿಮ್ಮಪ್ಪನವರು ರೈತರಿಗೆ ಪಿಟಿ ಶೀಟ್ ನಕ್ಷೆ ನೀಡಿದ್ದಾರೆ. ಅದರ ಆಧಾರದ ಮೇಲೆ ಪಹಣಿ ಪತ್ರದಲ್ಲಿ ರೈತರ ಹೆಸರು ದಾಖಲಿಸಬೇಕು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಯವರು ಬಂದು ರೈತರಿಗೆ ಅಧಿಕೃತವಾಗಿ ಭರವಸೆ ಕೊಡಬೇಕು. ಅಲ್ಲಿಯವರೆಗೆ ಅನಿರ್ದಿಷ್ಟಾವಧಿ ಹೋರಾಟವನ್ನು ಕೈ ಬಿಡುವುದಿಲ್ಲ” ಎಂದು ಪಟ್ಟು ಹಿಡಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹಣದಾಸೆಗೆ ಇ-ಸ್ವತ್ತು ಆಸ್ತಿ ವರ್ಗಾವಣೆ ಆರೋಪ; ಗ್ರಾಮಸ್ಥರ ಪ್ರತಿಭಟನೆ
ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಎಂ ಎಫ್ ಜಕಾತಿ, ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ, ಕಿಶೋರ್ ಮಿಠಾರಿ ಮಾತನಾಡಿದರು. ವಿಜಯಕುಮಾರ ಶಿಂಧೆ, ದಶರಥ ಮಡಿವಾಳರ, ಸೋಮಯ್ಯ ನಿಂಗಾಪೂರಮಠ, ತವನಪ್ಪ ಬೇಟಗೇರಿ, ಮಾರುತಿ ಕಲ್ಲೂರಿ, ತೋಪಿಕ್ ಸುತಗಟ್ಟಿ, ಸುರೇಶ ಮಡಿವಾಳರ, ಕಸ್ತೂರಿ ಮಾಳನ್ನವರ, ಕಮಲವ್ವ ಕಡಕೋಳ, ಸಾವಕ್ಕ ತೊಟಗಿ, ಮಂಜುಳಾ ಕಡ್ಡೆನ್ನವರ ಸೇರಿದಂತೆ ಅನೇಕ ರೈತರು ಇದ್ದರು.