ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಟಕೋಳದಲ್ಲಿ ಭೂಮಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 25ರಂದು ನಡೆದ ಈ ಘಟನೆ ಮೊದಲು ಅಪಘಾತ ಎಂದು ಶಂಕಿಸಲಾದರೂ, ಬಳಿಕ ನಡೆದ ಪೊಲೀಸ್ ತನಿಖೆಯಿಂದ ಇದು ಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ.
ಬಂಧಿತರು:
ಈ ಪ್ರಕರಣದಲ್ಲಿ ಕಟಕೋಳದ ಶಂಕರ ಜಾಧವ, ಚಿಕ್ಕೋಡಿಯ ಸುಲ್ತಾನ್ ಕಿಲ್ಲೇದಾರ, ರಾಹುಲ ಬಾಗೇವಾಡಿ ಮತ್ತು ನಿಪ್ಪಾಣಿ ಟಿಪ್ಪು ಮುಜಾವರ ಬಂಧಿತರಾಗಿದ್ದಾರೆ.
ಪ್ರಕರಣದ ಹಿನ್ನಲೆ:
ಮಹಾರಾಷ್ಟ್ರದ ಘಾಟಗೆ ಅವರ 7 ಎಕರೆ 2 ಗುಂಟೆ ಕೃಷಿಭೂಮಿ ಕಟಕೋಳದಲ್ಲಿ ಇತ್ತು. ಈ ಭೂಮಿಯನ್ನು ಶಂಕರ ಜಾಧವ ಉಳುಮೆ ಮಾಡುತ್ತಿದ್ದ. ಆದರೆ, ನ್ಯಾಯಾಲಯದಲ್ಲಿ ಘಾಟಗೆ ಪರವಾಗಿ ತೀರ್ಪು ಬಂದು, ಸಣ್ಣರಾಮಪ್ಪ ಪತ್ತಾರ ಈ ಭೂಮಿಯ ಉಳುಮೆ ನಡೆಸುತ್ತಿದ್ದನು. ಇದರಿಂದ ಶಂಕರ ಜಾಧವ ಮತ್ತು ಸಣ್ಣರಾಮಪ್ಪ ನಡುವೆ ವಿವಾದ ಉಂಟಾಗಿ ಕೊಲೆಗೂ ಕಾರಣವಾಯಿತು.
₹2.5 ಲಕ್ಷ ಸುಪಾರಿ:
ಶಂಕರ ಜಾಧವ ಈ ಹತ್ಯೆಗೆ ₹2.5 ಲಕ್ಷ ಸುಪಾರಿ ನೀಡಿದ್ದು, ಅದರಲ್ಲಿ ₹1.5 ಲಕ್ಷ ಈಗಾಗಲೇ ನೀಡಲಾಗಿತ್ತು. ಈ ಹಿಂದೆ ಹಲವಾರು ಬಾರಿ ಕೊಲೆ ಮಾಡಲು ವಿಫಲ ಪ್ರಯತ್ನ ನಡೆಸಲಾಗಿತ್ತು.
ಪೊಲೀಸರ ಕಾರ್ಯಾಚರಣೆ:
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಕಟಕೋಳ ಠಾಣೆ ಪೊಲೀಸರು, ಸಿಪಿಐ ಐ.ಆರ್. ಪಟ್ಟಣಶೆಟ್ಟಿ ಮತ್ತು ಪಿಎಸ್ಐ ಬಸವರಾಜ ಕೊಣ್ಣೂರೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.