ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಲಿ ಗ್ರಾಮದ ರಾಕೇಶ ಭೀಮಪ್ಪ ಯಡೂರೆ ಮೋಸ ಹೋದವರು. ಕಳೆದ ವರ್ಷ 2024ರ ಮೇ ತಿಂಗಳಲ್ಲಿ ಹೈದ್ರಾಬಾದ್ನಲ್ಲಿ ಜರುಗಿದ ರೈಸಿಂಗ್ ಭಾರತ್ ಕ್ರಿಕೆಟ್ ಲೀಗ್ (ಆರ್ಬಿಸಿಎಲ್) ಟೂರ್ನಿಯ ಆಯ್ಕೆ ಪ್ರಕ್ರಿಯೆಯಲ್ಲಿ ಟ್ರಯಲ್ ನೀಡಿದ್ದ ರಾಕೇಶ ಆಲ್ರೌಂಡರ್ ಆಟದ ಮೂಲಕ ಆಯೋಜಕರ ಗಮನ ಸಳೆದಿದ್ದರು. ಇದಾದ ನಂತರ ರಾಕೇಶ ಅವರ ಇನ್ಸಾಟಾಗ್ರಾಂ ಖಾತೆಗೆ ಅಪರಿಚಿತರು ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂದೇಶ ಕಳುಹಿಸಿದ್ದಾರೆ. ಅಲ್ಲದೇ, ಹಣ ನೀಡಿದರೆ ಮುಂದಿನ ಐಪಿಎಲ್ನಲ್ಲಿ ಆಡಲು ಅವಕಾಶ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಅದನ್ನು ನಂಬಿದ ರಾಕೇಶ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಹಣ ಹೊಂದಿಸಲು ಪ್ರಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ರಾಕೇಶ ಅವರ ತಂದೆ ಭೀಮಪ್ಪ ಅವರು ಮಗನ ಭವಿಷ್ಯ ಉಜ್ವಲವಾದೀತೆಂದು ಸಾಲ ಮಾಡಿ 2024ರ ನವೆಂಬರ್ನಿಂದ 2025ರ ಏಪ್ರಿಲ್ 19ರ ವರೆಗೆ ಹಂತ ಹಂತವಾಗಿ ಒಟ್ಟು 24 ಲಕ್ಷ ರೂ.ಗಳನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಅಷ್ಟಾದರೂ ಮತ್ತೆ ಹಲವು ಕಾರಣಗಳನ್ನು ಹೇಳುತ್ತಾ ಹಣ ಕೇಳಿದಾಗ ಸಂಶಯ ಬಂದು, ರಾಕೇಶ ಯಡೂರೆ ಅವರು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.