ಮಾನವ ಕಲ್ಯಾಣಕ್ಕೆ ಸಹಕಾರಿಯಾಗಿರುವ ಸಮಾಜ ಕಾರ್ಯವು ವಿಶ್ವ ಮಾನ್ಯತೆಯನ್ನು ಪಡೆದಿದೆ. ಇಂದಿಗೂ ಸಾಮಾಜಿಕ ಕಾಳಜಿ ಇರುವ ವೃತ್ತಿಪರ ಸಮಾಜ ಕಾರ್ಯಕರ್ತರ ಸಾಮಾಜಿಕ ಸೇವೆಯು ಶ್ಲಾಘನೀಯ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.
ವಿವಿಯ ಸಮಾಜ ಕಾರ್ಯ ವಿಭಾಗ ವತಿಯಿಂದ ನಿನ್ನೆ ಆಯೋಜಿಸಿದ್ದ ವಿಶ್ವ ಸಮಾಜ ಕಾರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳನ್ನು ಕಾಪಾಡುವಲ್ಲಿ, ಶೋಷಿತ ಮಹಿಳೆಯರು, ಮಕ್ಕಳು, ವೃದ್ಧರು, ಅನಾಥರು ಮತ್ತು ದೀನ ದುರ್ಬಲರನ್ನು ಆರೈಕೆ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ಕೃತಜ್ಞತೆಯಿಂದ ನೆನೆಯುವ ದಿನವಾಗಿ ವಿಶ್ವ ಸಮಾಜ ಕಾರ್ಯ ದಿನವನ್ನು 1983ರಿಂದ ಸಾಮಾಜಿಕ ಕಾರ್ಯಕರ್ತರ ಅಂತಾರಾಷ್ಟ್ರೀಯ ಒಕ್ಕೂಟವು ಆಚರಿಸುತ್ತಾ ಬಂದಿದೆ. ಪ್ರಪಂಚದಾದ್ಯಂತ ಪ್ರತಿ ಮಾರ್ಚ್ ತಿಂಗಳ ಮೂರನೇ ಮಂಗಳವಾರ ವಿಶ್ವ ಸಮಾಜ ಕಾರ್ಯ ದಿನವನ್ನು ಆಚರಿಸಲಾಗುವುದು” ಎಂದು ತಿಳಿಸಿದರು.
ಕುಲಸಚಿವ ಎಸ್.ಎನ್. ರುದ್ರೇಶ್ ಅವರು ಮಾತನಾಡಿ, “ಬುದ್ದ, ಬಸವ ಅಂಬೇಡ್ಕರ್, ಲೋಹಿಯಾ, ಶಾಂತವೇರಿ ಗೋಪಾಲ ಗೌಡರ ತತ್ವಾದರ್ಶಗಳು ಇಂದಿನ ವಿದ್ಯಾರ್ಥಿ ಸಮಾಜ ಕಾರ್ಯಕರ್ತರಿಗೆ ಮಾದರಿಯಾಗಿವೆ” ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಮಾತನಾಡಿ, “ಕರ್ನಾಟಕ ಕಂಡ ಅಪರೂಪದ ಸಮಾಜ ಸೇವಕ, ನಾಡಿಗೆ ನಾಡೇ ನೆನೆಯುತ್ತಿರುವ ಡಾ. ಪುನೀತ್ ರಾಜ್ ನಮಗೆ ಆದರ್ಶರು ಮತ್ತು ಹೊಸಪೇಟೆಯಲ್ಲಿ ತನ್ನ ಹದಿನೇಳನೇ ವಯಸ್ಸಿಗೆ ತಮ್ಮ ದುಡಿಮೆಯ ಬಹುಪಾಲನ್ನು ಅನಾಥ ಮತ್ತು ವಿಕಲ ಚೇತನ ಮಕ್ಕಳಿಗೆ ಮೀಸಲಿರಿಸಿ ಸೇವೆ ಮಾಡುತ್ತಿರುವ ಕಾವ್ಯ ನಮಗೆ ಆದರ್ಶ” ಎಂದು ಸ್ಮರಿಸಿದರು.
ಇದನ್ನೂ ಓದಿ: ಬಳ್ಳಾರಿ | ಕರ್ನಾಟಕ ಸಾಹಿತ್ಯ ಅಕಾಡೆಮಿ: ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಪ್ರೊ.ಗೌರಿ ಮಾಣಿಕ ಮಾನಸ, ಆದಿಕವಿ ಮಹರ್ಶಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ರಶ್ಮಿ ರಾಣಿ ಅಗ್ನಿಹೋತ್ರಿ, ಭವಿತಾ, ಡಾ.ಕುಮಾರ್ ಸೇರಿದಂತೆ ಸಮಾಜ ಕಾರ್ಯ ವಿಭಾಗದ ಬೋಧಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
