ಕವಿಶ್ರೇಷ್ಠ ಜೋಳದರಾಶಿ ದೊಡ್ಡನಗೌಡರು ನಾಟಕ, ಗಮಕ, ಸಾಹಿತ್ಯ ಸೇರಿದಂತೆ ಕಲಾ ಕ್ಷೇತ್ರಕ್ಕೆ ನೀಡಿದ ಸೇವೆ ಅಪಾರ ಎಂದು ಎನ್ ಬಸವರಾಜ್ ಸ್ಮರಿಸಿದರು.
ಬಳ್ಳಾರಿ ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ದೊಡ್ಡನಗೌಡರ 30ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ತಾಯಿ ರುದ್ರಮ್ಮ ಹಾಗೂ ತಂದೆ ಪಂಪನಗೌಡರ ಮಗನಾಗಿ 27 ಜುಲೈ 1910ರಂದು ಜನಿಸಿದರು. ಜೋಳದರಾಶಿಯ ಗುಡಿಬಡಿಯಲ್ಲಿ 4ನೇ ತರಗತಿವರೆಗೆ ಓದಿದರು. ಆದರೆ ಮುಂದೆ ಅವರು ನಾಟಕ, ರಂಗಭೂಮಿಯ ಸೇವೆಯಲ್ಲಿ ತೊಡಗಿಕೊಂಡರು. ಗಡಿ ಭಾಗದಲ್ಲಿದ್ದುದರಿಂದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಸಾಹಿತ್ಯ ರಚನೆಯನ್ನೂ ಮಾಡಿದರು. ಸುಮಾರು 40 ಪುಸ್ತಕಗಳನ್ನು ಬರೆದಿದ್ದಾರೆ. ಗಮಕ ಕಲೆಗೆ ಅವರಿತ್ತ ಕೊಡುಗೆ ಅಪಾರವಾದುದು” ಎಂದು ಹೇಳಿದರು.
“ಬಳ್ಳಾರಿ ರಾಘವರ ಶಿಷ್ಯರಾಗಿ ನಾಟಕ ರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಹೋಗಿ ಬರ್ತೀನಯ್ಯ ನಮ್ಮಊರಿಗೆ ಎಂಬ ಹಾಡನ್ನು ತೆಲುಗಿನಲ್ಲಿ ‘ಪೋಯಿ ವಸ್ತಾನಂಡಿ ಮಾ ಇಂಟಿಕಿ’ ಎಂದು ಬರೆದು ಅದರಂತೆ ಮರಳಿ ಬಾರದೂರಿಗೆ ತೆರಳಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಹಾಗೂ ಆಂಧ್ರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ” ಎಂದು ಗೌಡರ ಸಾಧನೆಗಳನ್ನು ಸ್ಮರಿಸಿದರು.
ಇದನ್ನೂ ಓದಿ: ಬಳ್ಳಾರಿ | ಮನರೇಗಾ ಕಾರ್ಮಿಕರಿಗೆ ಎರಡು ವರ್ಷಗಳಿಂದ ಕೂಲಿ ನೀಡಿಲ್ಲ: ಶಾಂತಮ್ಮ ಅರೋಪ
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ, ಅಧ್ಯಕ್ಷ ಕೆ ಕೊಟೇಶ್ವರ ರಾವ್, ಗೌರವ ಕಾರ್ಯದರ್ಶಿ ಎನ್ ಪ್ರಕಾಶ್, ಕೆ ಕೃಷ್ಣ, ಸಿ ಎ ಚೌದರಿ, ಜಿ ಪ್ರಭಾಕರ, ಕೆ ಪೊಂಪನ ಗೌಡ, ಪಿ ಶ್ರೀನಿವಾಸಲು, ವಿ ರಾಮಚಂದ್ರ, ಶೇಷ ರೆಡ್ಡಿ, ಕಾಳಿದಾಸ, ಕಪ್ಪಗಲ್ಲು ಪ್ರಭುದೇವ, ರಮಣಪ್ಪ ಭಜಂತ್ರಿ ಗೌಡರ ಕುಟುಂಬದವರು ಹಾಗೂ ಕಲಾವಿದರು ಇದ್ದರು.