‘ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ’ ಎಂದು ಹಿರಿಯ ರಂಗಭೂಮಿ ಕಲಾವಿದೆ ಬಿ. ವೀಣಾ ಕುಮಾರಿ ಅವರು ಹೇಳಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಸಾಗರ ಇವರ ಸಂಯುಕ್ತಾಶ್ರಯದೊಂದಿಗೆ ಏರ್ಪಡಿಸಿದ್ದ ʼಸೌರಭ ಸಾಂಸ್ಕೃತಿಕʼ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗ್ರಾಮೀಣ ಭಾಗದ ಮಕ್ಕಳು ತಮ್ಮಲ್ಲಿನ ಕಲಾ ಪ್ರತಿಭೆಗಳನ್ನು ಹೊರಹಾಕಬೇಕು. ಸಾಂಸ್ಕೃತಿಕವಾಗಿ ದೇಶಕ್ಕೆ ಕೊಡುಗೆ ನೀಡಬೇಕು” ಎಂದರು.
ರಾಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ ಆಶಾ ಮಾತನಾಡಿ, “ರಾಮಸಾಗರ ಅನೇಕ ಜಾನಪದ ಕಲಾವಿದರು ಮತ್ತು ವಿದ್ವಾಂಸರನ್ನು ಹೊಂದಿದ್ದು, ನಾಡಿಗೆ ಅನನ್ಯ ಕೂಡುಗೆಯನ್ನು ನೀಡಿದೆ” ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿ, “ಕರ್ನಾಟಕವು ರಂಗ ಕಲೆಯ ಶ್ರೀಮಂತ ನೆಲೆಯಾಗಿದ್ದು, ಇದಕ್ಕೆ ಪ್ರಾಚೀನ ಇತಿಹಾಸವಿದೆ. ಗ್ರಾಮೀಣ ಭಾಗದ ಎಲ್ಲ ಕಲಾವಿದರೂ ಇಂತಹ ಕಾರ್ಯಕ್ರಮಗಳ ವೇದಿಕೆಯನ್ನು ಸದುಪಯೋಗ ಪಡೆಸಿಕೊಂಡು ತಮ್ಮಲ್ಲಿರುವ ಕಲೆಯನ್ನು ಹೊರಹಾಕಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲಿ ಬಳ್ಳಾರಿಯ ಮೋಹನ್ ಕಲಬುರಗಿ ಅವರಿಂದ ವಾಯಲಿನ್ ವಾದನ, ಕೆ ದೊಡ್ಡಬಸಪ್ಪ ಗವಾಯಿ ತಂಡದಿಂದ ಸುಗಮ ಸಂಗೀತ, ವನಮಾಲ ಕುಲಕರ್ಣಿ ಸಂಗಡಿಗರಿಂದ ಸಮೂಹ ನೃತ್ಯ, ಯಲ್ಲನಗೌಡ ಶಂಕರಬಂಡೆ ತಂಡದಿಂದ ಜಾನಪದ ಗೀತೆ, ಏಳುಬೆಂಚಿಯ ಸಿ ಎಂ ಕರುಣಾಮೂರ್ತಿ ಅವರಿಂದ ಕಥಾ ಕೀರ್ತನೆ, ಬಳ್ಳಾರಿಯ ವರಲಕ್ಷ್ಮೀ ಸಂಗಡಿಗರಿಂದ ಐತಿಹಾಸಿಕ ʼಹೇಮರೆಡ್ಡಿ ಮಲ್ಲಮ್ಮʼ ನಾಟಕ ಸೇರಿದಂತೆ ಇತರೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಾಂಸ್ಕೃತಿಕ ಸೌರಭ ಅಂಗವಾಗಿ ʼಜಾನಪದ ಕಲಾ ತಂಡʼಗಳ ಮೆರವಣಿಗೆ ನಡೆಯಿತು. ಕಂಪ್ಲಿಯ ಶಿಕಾರಿ ರಾಮು ಮತ್ತು ಸಂಗಡಿಗರಿಂದ ತಾಷರಂಡೋಲ್, ಹಳೇ ದರೋಜಿಯ ವೈ, ಮಲ್ಲಿಕಾರ್ಜುನಪ್ಪ ಮತ್ತು ಸಂಗಡಿಗರಿಂದ ಹಗಲುವೇಷಗಾರಿಕೆ, ತಾರನಗರದ ಎನ್ ಎಂ ಚಂದ್ರಯ್ಯ ಸ್ವಾಮಿ ಮತ್ತು ಸಂಗಡಿಗರಿಂದ ವೀರಗಾಸೆ ಸೇರಿದಂತೆ ಇನ್ನಿತರೆ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಿದವು.
ಈ ಸುದ್ದಿ ಓದಿದ್ದೀರಾ? ಪುತ್ತೂರು-ಮಂಗಳೂರು ತಡೆರಹಿತ ಬಸ್ಗೆ ಶಾಸಕ ಅಶೋಕ್ ಕುಮಾರ್ ಚಾಲನೆ
ರಾಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್ ಎಂ ರಾಮಯ್ಯ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ನಿರ್ವಹಣಾ ಸಮಿತಿ ಅಧ್ಯಕ್ಷ ಎಂ ಪ್ರಶಾಂತ್, ರಂಗಭೂಮಿ ಕಲಾವಿದೆ ಎ ವರಲಕ್ಷ್ಮೀ, ಹಿರಿಯ ನೃತ್ಯ ಕಲಾವಿದೆ ವನಮಾಲ ಕುಲಕರ್ಣಿ, ಸೀತಾ ಚಪ್ಪರ್ ಸೇರಿದಂತೆ ಶಾಲಾ ಶಿಕ್ಷಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದ್ದರು.