ಬಳ್ಳಾರಿ ಜಿಲ್ಲೆಯ ಕೆಲವುಕಡೆ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ಬೇರೆ ಬೇರೆ ಬ್ರಾಂಡ್ಗಳ ಹೆಸರಿನಲ್ಲಿ ಮಾರುವುದು ಮತ್ತು ಮತ್ತೊಂದೆಡೆ ಹಿಟ್ಟಿನ ಗಿರಣಿಗಳು ಪಡಿತರ ಅಕ್ಕಿಯನ್ನು ನುಚ್ಚಾಗಿ ಪರಿವರ್ತಿಸಿ ಮಾರಾಟ ಮಾಡುವ ದಂಧೆ ಬೆಳಕಿಗೆ ಬಂದಿದ್ದು ತೆಕ್ಕಲಕೋಟೆಯಲ್ಲಿ ಆಹಾರ ಇಲಾಖೆ ದಾಳಿ ಮಾಡಿದೆ.
ಪಟ್ಟಣದ 7ನೇ ವಾರ್ಡಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ನುಚ್ಚಾಗಿ ಪರಿವರ್ತಿಸುತ್ತಿದ್ದ ಹಿಟ್ಟಿನ ಗಿರಣಿಯ ಮೇಲೆ ಪೊಲೀಸರು ಹಾಗೂ ಆಹಾರ ಇಲಾಖೆ ಸಿಬ್ಬಂದಿ ಬುಧವಾರ (ಡಿ.21) ದಾಳಿ ನಡೆಸಿದ್ದಾರೆ.
7ನೇ ವಾರ್ಡಿನ ಎಂ. ಜಲಾಲ್ ಸಾಬ್ ಹಾಗೂ ಎಂ. ಮಾಬುಸಾಬ್ ಇವರು ಆಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಹಿಟ್ಟಿನ ಗಿರಣಿಯಲ್ಲಿ ನುಚ್ಚಾಗಿ ಪರಿವರ್ತಿಸಿ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಮಹಾರುದ್ರಗೌಡ ಹಾಗೂ ಪಿಎಸ್ಐ ಶಾಂತಮೂರ್ತಿ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ನಾಲ್ಕು ಮೂಟೆ ಪಡಿತರ ಅಕ್ಕಿ, ಅಕ್ಕಿಯನ್ನು ನುಚ್ಚಾಗಿ ಪರಿವರ್ತಿಸುವ ಯಂತ್ರ ಹಾಗೂ 900ರೂ. ನಗದು ವಶಪಡಿಸಿಕೊಂಡಿದ್ದು, ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.